ADVERTISEMENT

ಸೋಮವಾರಪೇಟೆ | ಉತ್ತಮ ಮಳೆ: ಭತ್ತದ ನಾಟಿಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 13:22 IST
Last Updated 1 ಜುಲೈ 2024, 13:22 IST
ಸೋಮವಾರಪೇಟೆ ತಾಲ್ಲೂಕಿನ ಹಾರಂಗಿ ಆಣೆಕಟ್ಟೆಗೆ ಪ್ರಮುಖ ನೀರಿನ ಮೂಲವಾದ ಹಟ್ಟಿಹೊಳ ತುಂಬಿ ಹರಿಯುತ್ತಿರುವುದು.
ಸೋಮವಾರಪೇಟೆ ತಾಲ್ಲೂಕಿನ ಹಾರಂಗಿ ಆಣೆಕಟ್ಟೆಗೆ ಪ್ರಮುಖ ನೀರಿನ ಮೂಲವಾದ ಹಟ್ಟಿಹೊಳ ತುಂಬಿ ಹರಿಯುತ್ತಿರುವುದು.   

ಸೋಮವಾರಪೇಟೆ: ಮುಂಗಾರು ಮಳೆ ತಾಲ್ಲೂಕಿನಾದ್ಯಂತ ಬಿರುಸುಗೊಳ್ಳುತ್ತಿದ್ದು, ಭಾನುವಾರ ಸಂಜೆಯಿಂದ ಉತ್ತಮ ಮಳೆಯಾಗುತ್ತಿದೆ.

ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಎಲ್ಲೆಡೆ ಗದ್ದೆ ಕೃಷಿಗೆ ಸಿದ್ಧಪಡಿಸಲಾಗುತ್ತಿದೆ. ಕಾಫಿ ತೋಟಗಳಿಗೆ  ಗೊಬ್ಬರ ಹಾಕಿ, ಉಳಿದ ಕೆಲಸ ಮಾಡುತ್ತಿದ್ದಾರೆ. ಶಾಂತಳ್ಳಿ ಹೋಬಳಿಯಾದ್ಯಂತ ನಿರಂತರವಾಗಿ ಭಾರಿ ಮಳೆ ಸುರಿಯುತ್ತಿದ್ದು, ನದಿ ತೊರೆಗಳು ತುಂಬಿ ಹರಿಯುತ್ತಿವೆ. ಈಗಾಗಲೇ ಕೆಲವರು ಭತ್ತದ ನಾಟಿಗೆ ಪೈರನ್ನು ಬೆಳೆದಿದ್ದು, ಮುಂದಿನ ಕೆಲವೇ ದಿನಗಳಲ್ಲಿ ನಾಟಿ ಕಾರ್ಯ ಪ್ರಾರಂಭಿಸಲಿದ್ದಾರೆ.

ಕಳೆದ ಸಾಲಿನಲ್ಲಿ ಸರಿಯಾದ ಸಮಯಕ್ಕೆ ಮಳೆಯಾಗದ ಹಿನ್ನೆಲೆ ಸಾಕಷ್ಟು ಗದ್ದೆಗಳಲ್ಲಿ ಭತ್ತದ ಕೃಷಿ ಚಟುವಟಿಕೆ ನಡೆದಿರಲಿಲ್ಲ. ಕೆಲವೆಡೆ ಮಳೆಯಾಗದ ಹಿನ್ನೆಲೆಯಲ್ಲಿ ಮಾಡಿದ್ದ ನಾಟಿ ಪೈರು ಒಣಗಿ ಹೋಗಿತ್ತು. ಆದರೆ, ಈ ಬಾರಿ ಹೆಚ್ಚಿನವರು ಭತ್ತದ ಕೃಷಿಯತ್ತ ಒಲವು ತೋರುತ್ತಿದ್ದಾರೆ.

ADVERTISEMENT

ಶಾಂತಳ್ಳಿ ಹೋಬಳಿಯಾದ್ಯಂತ ಭಾರಿ ಮಳೆಯಾಗುತ್ತಿರುವುದರಿಂದ ಹಟ್ಟಿಹೊಳೆ ಮತ್ತು ಮಾದಾಪುರ ಹೊಳೆಗಳು ತುಂಬಿ ಹರಿಯುತ್ತಿವೆ. ಹೊಳೆಯಲ್ಲಿ ಮಣ್ಣು ಮಿಶ್ರಿತ ನೀರು ಹರಿಯುತ್ತಿದ್ದು, ಎಲ್ಲೆಡೆ ಮಣ್ಣಿನ ಬಣ್ಣದ ನೀರು ಕಾಣುತ್ತಿದೆ. ಹಾರಂಗಿ ಆಣೆಕಟ್ಟೆಗೆ ಪ್ರಮುಖ ನೀರಿನ ಮೂಲವಾಗಿದ್ದು, ಮಳೆ ಹೀಗೆ ಮುಂದುವರೆದಲ್ಲಿ ಕೆಲವೇ ದಿನಗಳಲ್ಲಿ ಆಣೆಕಟ್ಟು ತುಂಬಲಿದೆ ಎಂದು ಸ್ಥಳೀಯರು ತಿಳಿಸಿದರು.

ತಾಲ್ಲೂಕಿನಲ್ಲಿ ಶಾಂತಳ್ಳಿ ಹೋಬಳಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 8.5 ಸೆಂಟಿ ಮೀಟರ್ ಮಳೆಯಾಗಿದೆ. ಸೋಮವಾರಪೇಟೆ ಕಸಬಾ 5.5, ಶನಿವಾರಸಂತೆ 3 ಹಾಗೂ ಕೊಡ್ಲಿಪೇಟೆ ಹೋಬಳಿಗೆ 2.5 ಸೆಂಟೀ ಮೀಟರ್ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.