ಮಡಿಕೇರಿ: ಕೇರಳ ಗಡಿಭಾಗ ಕುಟ್ಟ ಗ್ರಾಮದ ನಾಥಂಗಾಲದ ಸಮೀಪ ಇಬ್ಬರು ಬಾಲಕಿಯರನ್ನು ಬಲವಂತವಾಗಿ ಕಾರಿನಲ್ಲಿ ಹತ್ತಿಸಿಕೊಂಡ ಐವರು ಯುವಕರು ಒಬ್ಬ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮತ್ತೊಬ್ಬ ಬಾಲಕಿ ತಪ್ಪಿಸಿಕೊಂಡು, ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.
‘ಬಾಲಕಿಯರಿಗೆ ಪರಿಚಿತರಾಗಿದ್ದ ಮೂವರು ಯುವಕರು ಅವರನ್ನು ಕಾರಿನಲ್ಲಿ ನಾಥಂಗಾಲದ ಕಾಫಿತೋಟವೊಂದಕ್ಕೆ ಕರೆದೊಯ್ದಿದ್ದರು. ಅಲ್ಲಿ ಮತ್ತಿಬ್ಬರು ಯುವಕರು ಜೊತೆಯಾಗಿದ್ದರು. ಒಬ್ಬ ಬಾಲಕಿಯ ಮೇಲೆ ಇಬ್ಬರು ಯುವಕರು ಅತ್ಯಾಚಾರ ಎಸಗಿದ್ದು, ಮತ್ತೊಬ್ಬ ಬಾಲಕಿಯ ಮೇಲೆ ಇನ್ನುಳಿದ ಮೂವರು ಅತ್ಯಾಚಾರಕ್ಕೆ ಯತ್ನಿಸಿದ್ದರು. ಆ ವೇಳೆ ತಪ್ಪಿಸಿಕೊಂಡ ಆಕೆ ಪಕ್ಕದಲ್ಲೇ ಇದ್ದ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಳು. ಗ್ರಾಮಸ್ಥರು ಕಾರನ್ನು ತಡೆಯುತ್ತಿದ್ದಂತೆ, ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿಯನ್ನು ಕಾರಿನಿಂದ ಕೆಳಗಿಳಿಸಿ ಆರೋಪಿಗಳು ಪರಾರಿಯಾಗಿದ್ದರು. ನಂತರ, ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.
ಕುಟ್ಟ ಸಮೀಪದ ನಾಥಂಗಾಲದ ನವೀಂದ್ರ (24), ಅಕ್ಷಯ್ (27), ಕೇರಳದ ತೋಳ್ಪಟ್ಟಿಯ ನಡುಂದನ ಕಾಲೊನಿಯ ರಾಹುಲ್ (21), ಮನು (25) ಹಾಗೂ ಸಂದೀಪ್ (27) ಬಂಧಿತರು ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.