ADVERTISEMENT

ಮಡಿಕೇರಿ | 7ರಂದು ರಾಜರಾಜೇಶ್ವರಿ ದೇವಾಲಯದ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 2 ಮೇ 2024, 16:20 IST
Last Updated 2 ಮೇ 2024, 16:20 IST

ಮಡಿಕೇರಿ: ಇಲ್ಲಿನ ಕರ್ಣಂಗೇರಿಯ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವವು ಮೇ 7 ರಂದು ನಡೆಯಲಿದೆ.

ಅಂದು ಬೆಳಿಗ್ಗೆ 6 ಗಂಟೆಗೆ ದೇವಾಲಯದಲ್ಲಿ ಧ್ವಜಾರೋಹಣದ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, 6.30 ಗಂಟೆಗೆ ಗಣಪತಿ ಹೋಮ, 7.30ಕ್ಕೆ ದೇವಿಗೆ ಅಭಿಷೇಕ, ಹೂವಿನ ಅಲಂಕಾರ ನಂತರ ತೀರ್ಥ ಸ್ನಾನ ನಡೆಯಲಿದೆ. ಬೆಳಿಗ್ಗೆ 9.20ಕ್ಕೆ ಕಳಸ ಪೂಜೆ, ನೈವೇದ್ಯ ಪ್ರಸಾದ ಹಾಗೂ ಮಹಾಮಂಗಳಾತಿ ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿಗಳಾದ ಗೋವಿಂದಸ್ವಾಮಿ ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಧ್ಯಾಹ್ನ 11.45ಕ್ಕೆ ದೇವಿಯ ರಥೋತ್ಸವವು ದೇವಾಲಯದ ಆವರಣದ ಸುತ್ತಲೂ ನೆರವೇರಲಿದ್ದು, ನಂತರ ತುಲಾಭಾರ, ತಲೆಮುಡಿ ತೆಗೆಯುವುದು, ತೀರ್ಥಸ್ನಾನ, ಉರುಳು ಸೇವೆ, ಕುಂಕುಮ ಅರ್ಚನೆ ಮತ್ತು ಮಂಗಳಾರತಿ ಜರುಗಲಿದೆ ಎಂದರು.

ADVERTISEMENT

ಮಧ್ಯಾಹ್ನ 12 ಗಂಟೆಗೆ ಅನ್ನದಾನ, 12.30ಕ್ಕೆ ತಾಯಿಯ ದರ್ಶನ, ಸಂಜೆ 6 ಗಂಟೆಗೆ ದೇವಾಲಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದೀಪಾಲಂಕಾರ ಜರುಗಲಿದ್ದು, ರಾತ್ರಿ 9 ಗಂಟೆಗೆ ಅನ್ನದಾನ ಸೇವೆ, ದೇವಿಯ ದರ್ಶನ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.

ರಥ ಎಳೆಯಲು ಪುರುಷರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಜಾತ್ರೆಗಿಂತ 8 ದಿನಗಳ ಮೊದಲು ವ್ರತಪಾಲನೆ ಮಾಡಬೇಕು. ಅಲ್ಲದೆ, ಆ ದಿನ ದೇವಾಲಯದಲ್ಲಿ ತೀರ್ಥಸ್ನಾನ ಮಾಡಿ ಬಿಳಿಪಂಚೆ ಹಾಗೂ ಕೆಂಪು ಮೇಲು ಹೊದಿಕೆ ಧರಿಸಿವರಿಗೆ ಮಾತ್ರ ರಥ ಎಳೆಯಲು ಅವಕಾಶ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ದೇವಾಲಯ ಆಡಳಿತ ಮಂಡಳಿ ಸದಸ್ಯ ಜಿ.ಕಿರಣ್ ಕುಮಾರ್ ಮಾತನಾಡಿ, ‘ಸುಮಾರು 5 ಸಾವಿರ ಭಕ್ತಾದಿಗಳು ವಾರ್ಷಿಕೋತ್ಸವಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ದೂರದಿಂದ ಬರುವ ಭಕ್ತಾದಿಗಳಿಗೆ ತಂಗಲು ಸ್ಥಳದ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.

ಸದಸ್ಯರಾದ ಎಚ್.ಸಚಿನ್ ವಾಸುದೇವ್, ಡಿ.ಪ್ರಶಾಂತ್‌, ಭಕ್ತರಾದ ಚುಮ್ಮಿ ದೇವಯ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.