ಸೋಮವಾರಪೇಟೆ: ಕಳೆದ 119 ವರ್ಷಗಳಿಂದ 215 ದೇಶಗಳಲ್ಲಿ ಸುಮಾರು 12 ಲಕ್ಷ ರೋಟರಿ ಸದಸ್ಯರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹಿಂದಿನ ಸಾಲಿನ ರೋಟರಿ ಚಾಮರಾಜನಗರ ಜಿಲ್ಲಾ ಗವರ್ನರ್ ಡಾ. ಆರ್.ಎಸ್. ನಾಗಾರ್ಜುನ ಹೇಳಿದರು.
ಇಲ್ಲಿನ ರೋಟರಿ ಭವನದಲ್ಲಿ ಭಾನುವಾರ ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ನ 2024-25ನೇ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷ ಜೆ.ಕೆ. ಪೊನ್ನಪ್ಪ ಹಾಗೂ ಕಾರ್ಯದರ್ಶಿ ಕೆ.ಡಿ. ಬಿದ್ದಪ್ಪ ಮತ್ತು ತಂಡದವರಿಗೆ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.
‘ನೂರಾರು ವರ್ಷಗಳಿಂದ ಜನರ ನಂಬಿಕೆಯನ್ನು ಉಳಿಸಿಕೊಂಡು ಸೇವೆ ಮಾಡುತ್ತಿರುವ ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಯಾಗಿ ರೋಟರಿ ಗುರುತಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಅಂತರರಾಷ್ಟ್ರೀಯ ಸಂಸ್ಥೆಗಳು ತಮ್ಮ ಯೋಜನೆಗಳ ಅನುಷ್ಠಾನಕ್ಕೆ ರೋಟರಿ ಮಾರ್ಗ ಅನುಸರಿಸುತ್ತಿರುವುದನ್ನು ಕಾಣಬಹುದು’ ಎಂದರು.
‘ಪ್ರಪಂಚವನ್ನೇ ಪಿಡುಗಾಗಿ ಕಾಡುತ್ತಿದ್ದ ಪೋಲಿಯೊ ನಿರ್ಮೂಲನೆಗೆ ಸರ್ಕಾರ ಹಾಗೂ ಹಲವಾರು ಸಂಘ ಸಂಸ್ಥೆಗಳೊಂದಿಗೆ ರೋಟರಿ ಸಂಸ್ಥೆ ಮುಂದೆ ನಿಂತು ಕೆಲಸ ಮಾಡಿ ಯಶಸ್ವಿಯಾಗಿದ್ದು, ಇದು ನಮ್ಮ ಮಹಾನ್ ಕಾರ್ಯವಾಗಿದೆ. ಪ್ರಪಂಚದಲ್ಲಿಯೇ ದೊಡ್ಡ ದತ್ತಿ ನಿಧಿಯನ್ನು ಹೊಂದಿರುವ ರೋಟರಿ ಹಲವಾರು ಸಮಾಜಮುಖಿ ಕೆಲಸ ಮಾಡುತ್ತಿದೆ. ನಾವು ಯಾವಾಗಲು ದೊಡ್ಡ ಕನಸುಗಳನ್ನು ಇರಿಸಿಕೊಂಡು, ಅದನ್ನು ಕಾರ್ಯಗತ ಮಾಡುವ ಯೋಜನೆಯನ್ನು ಮಾಡಿಕೊಂಡಲ್ಲಿ ಅದು ಯಶಸ್ವಿಯಾಗುತ್ತದೆ’ ಎಂದರು.
ವೇದಿಕೆಯಲ್ಲಿ ಅತಿಥಿಗಳಾಗಿ ಜಿಲ್ಲಾ ಸಹಾಯಕ ಗವರ್ನರ್ರಾದ ಎಂ.ಡಿ. ಲಿಖಿತ್, ಡಾ.ಹರಿ ಎ. ಶೆಟ್ಟಿ, ವಲಯ ಸೇನಾನಿ ಉಲ್ಲಾಸ್ ಕೃಷ್ಣ ಹಾಗೂ ಎಂ.ಎಂ. ಪ್ರಕಾಶ್, ವಸಂತ ನಂಗಾರು ಚೇತನ್ ಚಂದ್ರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.