ಸೋಮವಾರಪೇಟೆ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮತ್ತು ಸಮಿತಿಯ ಸದಸ್ಯರು ಮಾಡಬೇಕಾಗಿದೆ ಎಂದು ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜ್ ತಿಳಿಸಿದರು.
ಸೋಮವಾರ ಇಲ್ಲಿ ನಡೆದ ಗ್ರಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಗೆ ಮಳೆಗಾಲದಲ್ಲಾದರು ಸೀಮೆ ಎಣ್ಣೆ ನೀಡುವಂತೆ ಸಭೆಯ ಎಲ್ಲ ನಿರ್ಣಯಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಬೆಂಗಳೂರಿಗೆ ತೆರಳಿ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಕೆಎಸ್ಆರ್ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕ ಮೆಹಬೂಬ ಮಾತನಾಡಿ, ಶಕ್ತಿ ಯೋಜನೆಯಲ್ಲಿ 2023 ರಿಂದ 60,77,137 ಮಹಿಳೆಯರು ಸಂಚರಿದಿದ್ದು, ಸರ್ಕಾರದಿಂದ 24.14 ಕೋಟಿ ಮೊತ್ತ ಸಂದಾಯವಾಗಿದೆ. ಜಿಲ್ಲೆಯಲ್ಲಿ ತಿಂಗಳಿಗೆ ಸರಾಸರಿ 16 ಸಾವಿರ ಮಹಿಳೆಯರು ಶಕ್ತಿ ಯೋಜನನೆಯಲ್ಲಿ ಸಂಚರಿಸುತ್ತಾರೆ ಎಂದರು. ಸದಸ್ಯ ಹಂಡ್ಲಿ ಗ್ರಾಮದ ನಾಗರಾಜು ಮಾತನಾಡಿ, ಬಸ್ ಚಾಲಕರು ಮಾರ್ಗದಲ್ಲಿ 8 ಮಹಿಳಾ ಪ್ರಯಾಣಿಕರಿದ್ದರೂ ಬಸ್ ನಿ ನಿಲ್ಲಿಸುವುದಿಲ್ಲ ಎಂಬ ಜನರ ದೂರನ್ನು ತಿಳಿಸಿದರು. ಪ್ರಕರಣಗಳ ಬಗ್ಗೆ ಗಮನಿಸುವುದಾಗಿ ಅಧಿಕಾರಿ ಸಭೆಗೆ ತಿಳಿಸಿದರು.
ಅಹಾರ ಇಲಾಖೆಯ ಆಹಾರ ನಿರೀಕ್ಷಕಿ ಯಶಸ್ವಿನಿ ತಾಲ್ಲೂಕಿನಲ್ಲಿ 23,119 ಅರ್ಹ ಬಿಪಿಎಲ್ ಕಾರ್ಡ್ಗಳಿದ್ದು, 22,767 ಕಾರ್ಡ್ ದಾರರಿಗೆ ಅಕ್ಕಿಯ ಹಣ ಸಂದಾಯವಾಗುತ್ತಿದೆ. ಕೆಲವರು ಇಕೆವೈಸಿ ಮಾಡಿಸದವರಿಗೆ ಹಣ ಬಂದಿ ಲ್ಲ ಎಂದರು. ಕೆಲವು ನ್ಯಾಯ ಬೆಲೆ ಅಂಗಡಿ ಉಸ್ತುವಾರಿಗಳು ತಮಗೆ ಅನುಕೂಲದ ಸಮಯಕ್ಕೆ ಅಂಗಡಿ ತೆರೆದು ಅಕ್ಕಿ ವಿತರಣೆ ಮಾಡುತ್ತಿರುವುದರಿಂದ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯೆ ಶೀಲಾ ಡಿಸೋಜ ಹೇಳಿದರು.
ಸೆಸ್ಕ್ ಗೃಹಜ್ಯೋತಿ ಯೋಜನೆಯಡಿ 28,364 ಜನರು ಹೆಸರನ್ನು ನೋಂದಾಯಿಸಿಕೊಂಡು ಸರ್ಕಾರದ ಲಾಭ ಪಡೆಯುತ್ತಿದ್ದಾರೆ. 2,332 ಗ್ರಾಹಕರು ನೋಂದಾಯಿಸಿ ಕೊಂಡಿಲ್ಲ. ಕೆಲವು ಕಾಫಿ ತೋಟದ ಮಾಲೀಕರು ಲೈನ್ ಮನೆಯ ವಿದ್ಯುತ್ ಬಿಲ್ ಅನ್ನು ತಾವೇ ಪಾವತಿಸುತ್ತಿದ್ದಾರೆ ಎಂದು ಇಲಾಖೆಯ ಅಧಿಕಾರಿ ಗುಣಶೇಖರ್ ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ವೀರಣ್ಣ ಮಾತನಾಡಿ, ಸರ್ಕಾರದ ಯೋಜನೆಗಳು ಸರಿಯಾಗಿ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕೆಂದರು. ಸಮಿತಿ ಸದಸ್ಯರು ಮತ್ತು ಸಂಬಂಧಿಸಿದ ಇಲಾಖಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.