ಸೋಮವಾರಪೇಟೆ: ಏಪ್ರಿಲ್ ತಿಂಗಳು ಮುಗಿಯಲು ಬಂದರು ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ, ಮಳೆಗಾಗಿ ಕೊಡಗು, ಹಾಸನ ಜಿಲ್ಲೆಯ ಮಠಾಧಿಪತಿಗಳ ಪರಿಷತ್ತಿನ ಸ್ವಾಮೀಜಿಗಳು ಮಳೆಗಾಗಿ ಗುರುವಾರ ತಾಲ್ಲೂಕಿನ ಪುಷ್ಪಗಿರಿಯ ಶಾಂತಮಲ್ಲಿಕಾರ್ಜುನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ವಿರಾಜಪೇಟೆ ಆರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ದೇವರಿಗೆ ರುದ್ರಾಭಿಷೇಕ, ಅಷ್ಟೋತ್ತರ, ಅರ್ಚನೆಯೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಅರ್ಚಕರಾದ ನಂದೀಶ್ ಶಾಸ್ತ್ರಿ, ಮೋಹನಮೂರ್ತಿ ಶಾಸ್ತ್ರಿ ಹಾಗೂ ಸೋಮಶೇಖರ ಶಾಸ್ತ್ರಿ ಗಳಿಂದ ಪೂಜಾ ವಿಧಿವಿಧಾನಗಳು ನೆರವೇರಿದವು.
ನಂತರ ಅರಮೇರಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ನೀರಿಲ್ಲದೆ ಭೂಮಿ ಬಿರಿಯುತಿದೆ, ನೀರಿಗಾಗಿ ಪಶು ಪಕ್ಷಿಗಳು ಚಡಪಡಿಸುತ್ತಿವೆ. ರೈತಾಪಿವರ್ಗ ತತ್ತರಿಸಿ ಹೋಗಿದೆ. ಕಾವೇರಿ ಉಗಮ ಸ್ಥಾನ ಕೊಡಗಿನಲ್ಲಿಯೂ ಈ ಭಾರಿ ನದಿ, ಕೆರೆ ಕೆರೆಗಳೆಲ್ಲಾ ಬತ್ತಿ ಹೋಗಿದ್ದೂ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಎಲ್ಲೆಡೆ ಜನ ಮಳೆಗಾಗಿ ದೇವರಿಗೆ ಮೊರೆ ಹೋಗುತಿದ್ದಾರೆ ಎಂದರು.
ಪುಷ್ಪಗಿರಿ ಶಾಂತಮಲ್ಲಿಕಾರ್ಜುನ ದೇವಾಲಯ ಈ ಭಾಗದ ಜನತೆಯ ಮನಸ್ಸಿನಲ್ಲಿ ನೆಲೆನಿಂತಿರುವ ದೇವಾಲಯ ಆಗಿದೆ. ಮಳೆಗಾಗಿ ಇಲ್ಲಿನ ಅಕ್ಕಪಕ್ಕದ ಜನರು, ರೈತಾಪಿ ವರ್ಗದವರು ಪ್ರತಿವರ್ಷ ಇಲ್ಲಿಗೆ ಆಗಮಿಸಿ ಬೆಟ್ಟಕ್ಕೆ ಹತ್ತಿ ಪೂಜೆ ಸಲ್ಲಿಸುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಕೊಡಗು ಹಾಸನ ಮಠಾಧೀಶರ ಪರಿಷತ್ತಿನ ವತಿಯಿಂದ ಸ್ವಾಮೀಜಿಗಳು ದೇವಾಲಯಕ್ಕೆ ಆಗಮಿಸಿ ಶಾಂತಮಲ್ಲಿಕಾರ್ಜುನ ಸ್ವಾಮಿಗೆ ಪೂಜೆ ಸಲ್ಲಿಸಿ, ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದ್ದೇವೆ ಎಂದರು.
ಮಠಾಧೀಪತಿಗಳ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಾರ್ಯದರ್ಶಿ ಕಿರಿಕೂಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ತಪೂಕ್ಷೇತ್ರ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಛಂಗಡಿ ಹಳ್ಳಿ ಮಠದ ಬಸವ ಮಹಾಂತ ಸ್ವಾಮೀಜಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್. ಮಹೇಶ್, ರಾಜ್ಯ ಸಂಚಾಲಕ ಎ.ಎಸ್.ಮಲ್ಲೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.