ಪ್ರಜಾವಾಣಿ ವಾರ್ತೆ
ಗೋಣಿಕೊಪ್ಪಲು: ಶ್ರೀಮಂಗಲದ ವೆಸ್ಟ್ ನೆಮ್ಮಲೆ ಮತ್ತು ಬಾಳೆಲೆ ದೇವನೂರು ಭಾಗದಲ್ಲಿ 10 ದಿನಳಿಂದ ನಡೆಯುತ್ತಿದ್ದ ಹುಲಿಸೆರೆ ಕಾರ್ಯಾಚರಣೆ ಸದ್ಯಕ್ಕೆ ಸ್ಥಗಿತಗೊಂಡಿದೆ.
ಈ ಎರಡು ಭಾಗದಲ್ಲಿ ಕಾರ್ಯಾಚರಣೆ ತಂಡಕ್ಕೆ ಹುಲಿ ಕಾಣಿಸಿಕೊಳ್ಳದಿರುವುದರಿಂದ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದರು. ಅರಣ್ಯ ಬಿಟ್ಟು ಊರಿಗೆ ನುಸುಳಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ ಹಿಡಿಯಲು ಅಥವಾ ಮರಳಿ ಕಾಡಿಗಟ್ಟುವ ಕಾರ್ಯಾಚರಣೆಯನ್ನು ಅರಣ್ಯಾಧಿಕಾರಿಗಳು ಸಿಬ್ಬಂದಿಯೊಂದಿಗೆ ಹಗಲು ರಾತ್ರಿ ಯಶಸ್ವಿಯಾಗಿ ನಡೆಸಿದ್ದಾರೆ ಎಂದರು.
ಜಾನುವಾರುಗಳ ಮೇಲೆ ದಾಳಿ ಮಾಡುವ ಹುಲಿ ಪತ್ತೆಗಾಗಿ ಕೆಮರಾ ಅಳವಡಿಸಿ, ಬೋನಿಟ್ಟು ಕಾಯಲಾಗುತ್ತಿತ್ತು. ಮತ್ತೊಂದು ಕಡೆ ನೂರಾರು ಅರಣ್ಯ ಇಲಾಖೆ ಸಿಬ್ಬಂದಿಗಳು ಕೋಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ ಹುಲಿ ಸುಳಿವು ಮಾತ್ರ ಗೋಚರಿಸಲಿಲ್ಲ. ಇದರಿಂದ ಹುಲಿ ಮರಳಿ ತನ್ನ ವಾಸ ಸ್ಥಾನಕ್ಕೆ ಮರಳಿರಬಹುದು. ಇದರಿಂದ ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿಯಾದಂತಾಗಿದೆ ಎಂದು ಸಂಕೇತ್ ಪೂವಯ್ಯ ಹರ್ಷ ವ್ಯಕ್ತಪಡಿಸಿದರು.
‘ಸರ್ಕಾರ ನೀಡಿರುವ ಈ ಭಾಗದ ಹುಲಿ ಸೆರೆ ಆದೇಶ ಜೀವಂತವಾಗಿದೆ. ಮುಂದೆ ಮತ್ತೆ ಕಾಣಿಸಿಕೊಂಡಲ್ಲಿ ಕಾರ್ಯಾಚರಣೆ ಮುಂದುವರಿಸಲಾಗುವುದು. ರೈತರು ಕೂಡ ತಮ್ಮ ಜಾನುವಾರುಗಳನ್ನು ಜೋಪಾನವಾಗಿ ಕಾಯ್ದುಕೊಳ್ಳಬೇಕು’ ಎಂದು ಮನವಿ ಮಾಡಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.