ADVERTISEMENT

ಮಡಿಕೇರಿ ದಸರಾ | ಮಕ್ಕಳಿಂದ ಪ್ರತಿಭಾ ಪ್ರದರ್ಶನ

ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ: ಕಿಕ್ಕಿರಿದು ಸೇರಿದ್ದ ಅಪಾರ ಜನಸ್ತೋಮ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 5:25 IST
Last Updated 6 ಅಕ್ಟೋಬರ್ 2024, 5:25 IST
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಶನಿವಾರ ಬನ್ನೂರಿನ ಚಿಲಿಪಿಲಿ ಗೊಂಬೆಗಳು ತಂಡದ ಕಲಾವಿದರು ವೈವಿಧ್ಯಮಯವಾದ ನೃತ್ಯ ಪ್ರದರ್ಶಿಸಿದರು.
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಶನಿವಾರ ಬನ್ನೂರಿನ ಚಿಲಿಪಿಲಿ ಗೊಂಬೆಗಳು ತಂಡದ ಕಲಾವಿದರು ವೈವಿಧ್ಯಮಯವಾದ ನೃತ್ಯ ಪ್ರದರ್ಶಿಸಿದರು.   

ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ಶನಿವಾರ ಸಂಜೆ ಅಂಗನವಾಡಿ ಮಕ್ಕಳಿಂದ ಹಿಡಿದು ಬರೋಬರಿ 150ಕ್ಕೂ ಅಧಿಕ ಮಕ್ಕಳ ಪ್ರತಿಭೆ ಅನಾವರಣಗೊಂಡಿತು.

ಮಡಿಕೇರಿ ನಗರ ದಸರಾ ಸಮಿತಿ ಮತ್ತು ಸಾಂಸ್ಕೃತಿಕ ಸಮಿತಿ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ನಡೆದ ಮಕ್ಕಳ ದಸರೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಗರದ ಮಹದೇವಪೇಟೆಯ ಅಂಗನವಾಡಿ ಮಕ್ಕಳು ‘ಚುಕುಬುಕು ರೈಲು ಬಂತು, ಹೊಳೆಯ ದಡದಲ್ಲಿ ಆನೆಯ ಹಿಂಡು’ ಎಂಬ ಗೀತೆಗೆ ಲಯಬದ್ಧವಾಗಿ ಹೆಜ್ಜೆ ಹಾಕಿದರು. ಇದಕ್ಕೂ ಮುಂಚೆ ಗದ್ದುಗೆಯ ಅಂಗನವಾಡಿ ಮಕ್ಕಳು ನೃತ್ಯ ಪ್ರದರ್ಶಿಸಿದರು.

ನಂತರ, ಹುಬ್ಬಳ್ಳಿಯಿಂದ ಬಂದಿದ್ದ ಭೂಮಿಕಾ, ದೀಪಿಕಾ ಸೋದರಿಯರು, ‘ಕೋಟಿ ಕೋಟಿ ನಮನ ನಿನಗೆ ಮಹಾಗಣಪತಿ...’ ಹಾಡಿನ ಮೂಲಕ ತಮ್ಮ ಗಾಯನ ಆರಂಭಿಸಿದರು.

ADVERTISEMENT

ಎಫ್‌ಎಂಸಿ ಕಾಲೇಜು ಬಳಿಯ ಅಂಗನವಾಡಿ ಮಕ್ಕಳು ‘ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು’ ಹಾಡಿಗೆ ಹೆಜ್ಜೆ ಹಾಕಿದರು. ಬಾಲಕರ ಬಾಲಮಂದಿರ ಮಕ್ಕಳು ಶಿಕ್ಷಕಿಯರಾದ ಜಯಶ್ರೀ ಮತ್ತು ಗೌರಮ್ಮ ಅವರ ಮಾರ್ಗದರ್ಶನದಲ್ಲಿ ‘ಚೆಲುವಯ್ಯ ಚೆಲುವೋ ತಾನಿತಂದಾನಾ...’ ಎಂಬ ಜಾನಪದಗೀತೆಗೆ ಹಾಕಿದ ಹೆಜ್ಜೆಗಳು ಪ್ರೇಕ್ಷಕರು ಕುಳಿತಲ್ಲೇ ನರ್ತಿಸುವಂತೆ ಮಾಡಿತು.

ಬನ್ನೂರಿನಿಂದ ಬಂದಿರುವ ‘ಚಿಲಿಪಿಲಿ ಗೊಂಬೆಗಳು’ ಗೊಂಬೆಗಳ ವೇಷಧರಿಸಿ ‘ಬೊಂಬೆ ಹೇಳುತೈತೇ ನೀನೇ ರಾಜಕುಮಾರ...’ ಹಾಡಿಗೆ ಹಾಕಿದ ಹೆಜ್ಜೆಗಳನ್ನು ಪ್ರೇಕ್ಷಕರು ಎವೆ ಇಕ್ಕದೇ ವೀಕ್ಷಿಸಿದರು.

ರಾಜರಾಜೇಶ್ವರಿ ಶಾಲೆಯ ಮಕ್ಕಳು, ಬಾಲಕಿಯರ ಬಾಲಮಂದಿರದ ಮಕ್ಕಳು, ಕಲಾಭಾರತಿ ಮಕ್ಕಳೂ ಸೇರಿದಂತೆ ಹಲವು ಮಕ್ಕಳು ವೈವಿಧ್ಯಮಯ ನೃತ್ಯಗಳನ್ನು ಪ್ರದರ್ಶಿಸಿದರು.

ಒಟ್ಟು 16 ಅಂಗನವಾಡಿ ಮಕ್ಕಳು ತಮ್ಮ ಪ್ರತಿಭೆಯನ್ನು ಬೆಳಿಗ್ಗೆಯಿಂದ ರಾತ್ರಿಯವರೆಗೂ ಪ್ರದರ್ಶಿಸಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಿಕೋದ್ಯಮಿ ಜಿ.ಚಿದ್ವಿಲಾಸ್, ‘ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆರಂಭದ ದಿನ ಹಾಗೂ ಅಂತಿಮ ದಿನ ಮಾತ್ರ ವೇದಿಕೆ ಕಾರ್ಯಕ್ರಮ ಇರಲಿ. ಇನ್ನುಳಿದ ದಿನಗಳಲ್ಲಿ ವೇದಿಕೆ ಕಾರ್ಯಕ್ರಮ ಬೇಡ. ಇದರಿಂದ ಕಲಾವಿದರಿಗೆ ಅನುಕೂಲವಾಗುತ್ತದೆ. ಈ ಕುರಿತು ನಗರಸಭೆ ಸದಸ್ಯರು ತೀರ್ಮಾನ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು. ಜೊತೆಗೆ, ಈಚೆಗೆ ಮಾದಕವಸ್ತು ಜಾಲವನ್ನು ಬೇಧಿಸಿದ ಪೊಲೀಸರ ಶ್ರಮವನ್ನು ಶ್ಲಾಘಿಸಿದರು.

ನಂತರ, ವಿಕ್ರಂ ಜಾದೂಗಾರ್ ಅವರಿಂದ ನಡೆದ ‘ಮ್ಯಾಜಿಕ್ ಶೊ’ ಕಂಡು ಪ್ರೇಕ್ಷಕರು ಅಕ್ಷರಶಃ ದಂಗಾದರು.

ಮಡಿಕೇರಿಯ ಬಾಲಕಿಯರ ಬಾಲ ಮಂದಿರದ ಮಕ್ಕಳು ವೈವಿಧ್ಯಮಯ ನೃತ್ಯ ಪ್ರದರ್ಶಿಸಿದರು
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಶನಿವಾರ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಸೇರಿದ್ದ ಅಪಾರ ಜನಸ್ತೋಮ

ಗಾಂಧಿ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮ 16 ಅಂಗನವಾಡಿ ಮಕ್ಕಳಿಂದ ಪ್ರದರ್ಶನ

ಇದೇ ಮೊದಲ ಬಾರಿಗೆ ಕಾಫಿ ದಸರೆ ಆರಂಭಿಸುತ್ತಿದ್ದೇವೆ. ಈ ಕಾಫಿ ದಸರಾ ನಿರಂತರವಾಗಿ ನಡೆದುಕೊಳ್ಳಬೇಕು.

-ಡಾ.ಮಂತರ್‌ಗೌಡ ಶಾಸಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.