ಕುಶಾಲನಗರ: ಪಟ್ಟಣದ ರಥ ಬೀದಿಯಲ್ಲಿರುವ ಚೌಡೇಶ್ವರಿ ದೇವಸ್ಥಾನದ ರಾಮಲಿಂಗ ಚೌಡೇಶ್ವರಿ ಅಮ್ಮನವರ ವಾರ್ಷಿಕ ಜಯಂತಿ ಬುಧವಾರ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಇಲ್ಲಿನ ಚೌಡೇಶ್ವರಿ ದೇವಸ್ಥಾನ ಸಮಿತಿ ಹಾಗೂ ದೇವಾಂಗ ಸಂಘದಿಂದ ಪ್ರತಿ ವರ್ಷದಂತೆ ಈ ಬಾರಿಯು ಅಮ್ಮನ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ವಾರ್ಷಿಕೋತ್ಸವ ಅಂಗವಾಗಿ ಬೆಳಿಗ್ಗೆ 5ಕ್ಕೆ ಗಣಪತಿ ಹೋಮ, ಧ್ವಜಾರೋಹಣ, ನಂತರ ಕಾವೇರಿ ನದಿಯಲ್ಲಿ ಗಂಗೆಪೂಜೆ ಸಲ್ಲಿಸಿ ಕಲಶಹೊತ್ತ ಮಹಿಳೆಯರು ವೀರಗಾಸೆ ಮತ್ತು ಮಂಗಳವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿದರು. ನಂತರ ದೇವಿಗೆ ವಿವಿಧ ಪುಷ್ಪಗಳಿಂದ ಶೃಂಗರಿಸಿ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ ಮಹಾಮಂಗಳಾತಿ ನಂತರ ಪ್ರಸಾದ ವಿನಿಯೋಗ ನಡೆಸಲಾಯಿತು.
ಅರ್ಚಕ ಪ್ರಸನ್ನಕುಮಾರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿದವು. ಮೈಸೂರಿನ ಕಿರಾಳು ಮಹೇಶ್ ಮತ್ತು ಕಿರಣ್ ತಂಡದ ವೀರಗಾಸೆ ನೃತ್ಯ ಪ್ರದರ್ಶನ ಗಮನ ಸೆಳೆಯಿತು.
ದೇವಾಂಗ ಸಂಘದ ಅಧ್ಯಕ್ಷ ಡಿ.ವಿ.ರಾಜೇಶ್ ಮಾತನಾಡಿ, ‘ಸತತ 37 ವರ್ಷಗಳಿಂದ ದೇವಾಲಯದ ವಾರ್ಷಿಕ ಪೂಜೋತ್ಸವ ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದುಕೊಂಡಿದ್ದು, ಸರ್ವ ಭಕ್ತರಿಗೂ ಅನ್ನಸಂತರ್ಪಣೆ ನೆರವೇರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭ ದೇವಾಂಗ ಸಂಘದ ಗೌರವ ಅಧ್ಯಕ್ಷ ಡಿ.ಟಿ.ವಿಜಯೇಂದ್ರ, ಉಪಾಧ್ಯಕ್ಷರಾದ ಡಿ.ಆರ್.ಸೋಮಶೇಖರ್, ಡಿ.ವಿ.ಚಂದ್ರು, ಪ್ರಧಾನ ಕಾರ್ಯದರ್ಶಿ ಡಿ.ಆರ್.ಕೃಷ್ಣಕುಮಾರ್, ಸಹಕಾರ್ಯದರ್ಶಿ ಡಿ.ವಿ.ಚಂದ್ರಶೇಖರ್, ಖಜಾಂಚಿ ಡಿ.ಜಿ.ಪ್ರದೀಪ್, ಸಂಘಟನಾ ಕಾರ್ಯದರ್ಶಿ ಡಿ.ಎನ್.ವಿನೋದ್, ಸಂಚಾಲಕ ಡಿ.ಎನ್.ಶಶಿ, ಗೌರವ ಸಲಹೆಗಾರರಾದ ಡಿ.ಎಸ್.ಜಗದೀಶ್, ಡಿ.ಎಸ್.ಕೋದಂಡರಾಮ, ಡಿ.ಟಿ.ನಾಗೇಂದ್ರ, ಡಿ.ಕೆ.ತಿಮ್ಮಪ್ಪ, ಡಿ.ಸಿ.ಜಗದೀಶ್, ಡಿ.ಸಿ.ಪ್ರಭಾಕರ್, ಹೆಚ್.ಎನ್.ಯೋಗೇಶ್, ಕೆ.ಎಸ್.ಮೇಘರಾಜ್, ಮಹಿಳಾ ಸಂಘದ ಅಧ್ಯಕ್ಷೆ ಪದ್ಮಾ ಮಹೇಶ್ ಹಾಗೂ ಪದಾಧಿಕಾರಿಗಳು, ಯುವಕ ಸಂಘದ ಅಧ್ಯಕ್ಷ ಡಿ.ಎಸ್.ಯತಿರಾಜ್ ಹಾಗೂ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.