ಗೋಣಿಕೊಪ್ಪಲು: ಮನೆ ನಿವೇಶನಕ್ಕೆ ಆಗ್ರಹಿಸಿ 15 ದಿನಗಳಿಂದ ಪಾಲಿಬೆಟ್ಟ ಬಳಿಯ ಹೊಸೂರು ಗ್ರಾಮ ಪಂಚಾಯಿತಿ ಎದುರು ನಡೆಸುತ್ತಿದ್ದ ಬುಡಕಟ್ಟು ಕೃಷಿ ಕಾರ್ಮಿಕರ ಆಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಸೋಮವಾರ ಅಂತ್ಯಗೊಂಡಿತು.
ಶಾಸಕ ಎ.ಎಸ್.ಪೊನ್ನಣ್ಣ ಅವರ ಸೂಚನೆಯಂತೆ ಪೊನ್ನಂಪೇಟೆ ತಹಶೀಲ್ದಾರ್ ರಾಮಚಂದ್ರಪ್ಪ, ತಾಲ್ಲೂಕು ಪಂಚಾಯಿತಿ ಇಒ ಕೊಣಿಯಂಡ ಅಪ್ಪಣ್ಣ ಬುಡಕಟ್ಟು ಜನರ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಬಳಿಕ ಹೊಸೂರು ಗ್ರಾ,ಮ ಪಂಚಾಯಿತಿ ವ್ಯಾಪ್ತಿಯ ಅಮ್ಮತ್ತಿ ಕಳ್ಳೀರ ಬಾಣೆಯಲ್ಲಿ ತಹಶೀಲ್ದಾರ್ ಅವರ ಹೆಸರಿನಲ್ಲಿರುವ 3 ಎಕರೆ ಸರ್ಕಾರಿ ಭೂಮಿಯನ್ನು ಐಟಿಡಿಪಿ ಇಲಾಖೆಗೆ ಹಸ್ತಾಂತರಿಸಿ ನಿವೇಶನವಾಗಿ ಪರಿವರ್ತಿಸಲಾಗುವುದು. ಇದರಲ್ಲಿ ನಿವೇಶನ ರಹಿತ ಬುಡಕಟ್ಟು ಕೃಷಿ ಕಾರ್ಮಿಕರಿಗೆ ನಿವೇಶ ನೀಡಲಾಗುವುದು ಎಂದು ತಿಳಿಸಿದರು.
ಇದರಿಂದ ಎರಡು ವಾರಗಳಿಂದ ಮನೆ ಬಿಟ್ಟು ಗ್ರಾಮ ಪಂಚಾಯಿತಿ ಎದುರು ಮಳೆ ಲೆಕ್ಕಿಸದೆ ನಡೆಸುತ್ತಿದ್ದ ಆಹೋರಾತ್ರಿ ಧರಣಿಯನ್ನು ಹಿಂದಕ್ಕೆ ಪಡೆದರು.
ಈ ಬಗ್ಗೆ ಮಾತನಾಡಿದ ಬುಡಕಟ್ಟು ಕೃಷಿಕ ಸಂಘದ ಮುಖಂಡ ಗಪ್ಪು, ‘20 ವರ್ಷಗಳಿಂದ ನಿವೇಶನಕ್ಕೆ ಆಗ್ರಹಿಸಿ ನಡೆಸುತ್ತಿದ್ದ ಹೋರಾಟಕ್ಕೆ ಈಗ ಜಯ ಸಿಕ್ಕಂತಾಗಿದೆ. ಶಾಸಕರ ಸ್ಪಂದನೆಯಿಂದ ನಮ್ಮ ಹಗಲು ರಾತ್ರಿಯ ನಿರಶನ ಅಂತ್ಯಗೊಂಡಿದೆ. ಇದಕ್ಕಾಗಿ ತಾವು ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.