ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ಸೋಮವಾರ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಕಣ್ಮನಗಳನ್ನು ತಣಿಸಿದವು.
ರಾಷ್ಟ್ರೀಯ ಬಾಲ ಕಲಾವಿದ ಕೇರಳದ ಅವಿರ್ಭವ್ ಮತ್ತು ತಂಡದವರ ಗಾಯನಮೋಡಿಗೆ ಪ್ರೇಕ್ಷಕ ವೃಂದ ಒಳಗಾಯಿತು. ಮುಂಬೈನಿಂದ ಬಂದ ಪಕ್ಕ ವಾದ್ಯ ವೃಂದದ ವಾದನಕ್ಕೆ ತಲೆದೂಗಿತು.
ಸರಣಿಯ ಸ್ವರೂಪದಲ್ಲಿ ಹಾಡಿದ ಹಿಂದಿ ಹಾಡುಗಳು ಪೇಕ್ಷಕರನ್ನು ಕುರ್ಚಿಯಲ್ಲೇ ಕಟ್ಟಿ ಹಾಕಿತು.
ಅವಿರ್ಭವ್ ಹಾಡಿದ ‘ಹಮೆ ತುಮ್ಸೇ ಪ್ಯಾರ್ ಕಿತನಾ..’ ಹಾಡಿಗೆ ಸೇರಿದ್ದ ಅಪಾರ ಪ್ರೇಕ್ಷಕ ವೃಂದ ಮೊಬೈಲ್ ಬೆಳಕು ಬೀರಿ ವಂದನೆ ಸಲ್ಲಿಸಿದ್ದು ವಿಶೇಷ ಎನಿಸಿತು. ‘ರೂಪು ತೇರಾ ಮಸ್ತಾನಾ ಪ್ಯಾರ್ ಮೇರಾ ದೀವಾನ’ ಹಾಡಿಗೆ ಆವಿರ್ಭವ್ ಕುಣಿತ ಮೋಡಿ ಹಾಕಿತು. ಇದಕ್ಕೆ ಜತೆಯಾಗಿ ಹಾಡಿದವರು ಬೆಂಗಳೂರಿನ ಐಶ್ವರ್ಯ ಪದ್ಮನಾಭನ್. ಇವರ ಕಂಠದಿಂದ ಹೊರಹೊಮ್ಮಿದ ‘ಧೂಮ್ ಮಚಾಲೆ’ ಹಾಡು ಕುಳಿತಲ್ಲೆ ನರ್ತಿಸುವಂತೆ ಮಾಡಿತು. ಇವರು ‘ನಿನ್ನಿಂದಲೇ ನಿನ್ನಿಂದಲೇ’ ಎಂಬ ಕನ್ನಡ ಹಾಡನ್ನೂ ಹಾಡಿ ಗಮನ ಸೆಳೆದರು. ಇಬ್ಬರೂ ಹಾಡಿದ ‘ಕೊಲೆವರಿ ಕೊಲೆವರಿ’ ಹಾಡಂತೂ ಪ್ರೇಕ್ಷಕರ ಮನ ತಣಿಸಿತು.
ಇದಕ್ಕೂ ಮುನ್ನ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡದವರ ನೃತ್ಯ ಪ್ರದರ್ಶನ ಅಮೋಘವಾಗಿ ಮೂಡಿ ಬಂದಿತು. ‘ಜೈಭಜರಂಗಿ’ ಹಾಡಿಗೆ ಹಾಕಿದ ಮಕ್ಕಳ ಹೆಜ್ಜೆಗಳು ಎವೆಇಕ್ಕದಂತೆ ನೋಡುವಂತೆ ಮಾಡಿತು. ಮಡಿಕೇರಿಯ ನಾಟ್ಯಾನಿಕೇತನ ತಂಡದವರು ‘ನೃತ್ಯ ಸಂಗಮ’ ಪ್ರದರ್ಶಿಸಿದರು.
ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ.ಅನಂತಶಯನ, ‘ನಮಗಿಂತಲೂ ಹೆಚ್ಚಿನ ಒಂದು ಶಕ್ತಿ ಇದೆ ಎಂಬುದನ್ನು ದಾರ್ಶನಿಕರು ತಿಳಿಸಿದ್ದಾರೆ. ನವದುರ್ಗೆಯೂ ನಮಗಿಂತ ದೊಡ್ಡ ಶಕ್ತಿ. ಅವರಲ್ಲಿ ನಾವು ಈ ನವರಾತ್ರಿಯಲ್ಲಿ ಶರಣಾಗಬೇಕು’ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ‘ಒಳ್ಳೆಯ ಕೆಲಸ ಮಾಡುವವರಿಗೆ ಯಾವಾಗಲೂ ಒಳ್ಳೆಯದಾಗಲಿ, ಕೆಟ್ಟ ಕೆಲಸ ಮಾಡುವವರಿಗೆ ಕೆಟ್ಟದಾಗಲಿ, ಕಾಫಿ ದಸರೆ ಮಾಡಿರುವುದು ಸ್ವಾಗತಾರ್ಹ. ಈ ದಸರೆಯನ್ನು ಸೇರ್ಪಡೆ ಮಾಡಿದ ಎಲ್ಲರಿಗೂ ಧನ್ಯವಾದಗಳು’ ಎಂದರು.
ಪೇಕ್ಷಕರನ್ನು ರಂಜಿಸಿದ ಹಿಂದಿ ಹಾಡುಗಳು ಗಮನಸೆಳೆದ ಕಿಂಗ್ಸ್ ಆಫ್ ಕೂರ್ಗ್ ತಂಡದ ನೃತ್ಯ ಪ್ರದರ್ಶನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.