ADVERTISEMENT

ವಿರಾಜಪೇಟೆ | ಬೆಲೆ ಏರಿಕೆಗೆ ಕಡಿವಾಣ ಹಾಕಲು ಆಗ್ರಹ

ಎಐಸಿಸಿಟಿಯು ಕೇಂದ್ರ ಸಮಿತಿಯ ಕ್ಲಿಫ್ಟನ್ ರೊಜಾರಿಯೊ

​ಪ್ರಜಾವಾಣಿ ವಾರ್ತೆ
Published 2 ಮೇ 2024, 16:18 IST
Last Updated 2 ಮೇ 2024, 16:18 IST
 ವಿರಾಜಪೇಟೆ ಪಟ್ಟಣದಲ್ಲಿ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಅಂಗವಾಗಿ ಬುಧವಾರ ಎಐಸಿಸಿಟಿಯು ಸಂಘಟನೆಯ ವತಿಯಿಂದ ಮೆರವಣಿಗೆ ನಡೆಸಿ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಲಾಯಿತು.
 ವಿರಾಜಪೇಟೆ ಪಟ್ಟಣದಲ್ಲಿ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಅಂಗವಾಗಿ ಬುಧವಾರ ಎಐಸಿಸಿಟಿಯು ಸಂಘಟನೆಯ ವತಿಯಿಂದ ಮೆರವಣಿಗೆ ನಡೆಸಿ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಲಾಯಿತು.   

ವಿರಾಜಪೇಟೆ: ಕಾರ್ಮಿಕರು ಶಿಕ್ಷಣ ಮತ್ತು ಉತ್ತಮ ಆರೋಗ್ಯದಿಂದ ವಂಚಿತರಾಗಿದ್ದು, ದೇಶದ ಕಾರ್ಮಿಕರ ಸ್ಥಿತಿಯನ್ನು ಗಮನಿಸಿದಾಗ ಸರ್ಕಾರ ಸಂಪೂರ್ಣ ವಿಫಲವಾಗಿರುವುದು ಅರಿವಾಗುತ್ತದೆ ಎಂದು  ಕಾರ್ಮಿಕ ಸಂಘಟನೆ ಎಐಸಿಸಿಟಿಯು ಕೇಂದ್ರ ಸಮಿತಿಯ ಕ್ಲಿಫ್ಟನ್ ರೊಜಾರಿಯೊ ಅಭಿಪ್ರಾಯಪಟ್ಟರು.

ಕಾರ್ಮಿಕರ ದಿನಾಚರಣೆ ಅಂಗವಾಗಿ ಎಐಸಿಸಿಟಿಯು ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಎಲ್ಲರಿಗೂ ಅಹಾರ ಮತ್ತು ಉದ್ಯೋಗ ಒದಗಿಸಬೇಕು. ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ನಿರೂದ್ಯೋಗಿಗಳಿಗೆ ಕೂಡಲೇ ಉದ್ಯೋಗ ನೀಡಬೇಕು. ಕನಿಷ್ಟ ವೇತನ ₹35 ಸಾವಿರಕ್ಕೆ ನಿಗದಿ ಮಾಡಬೇಕು. ಗುತ್ತಿಗೆ ಪದ್ಧತಿ ರದ್ದುಗೊಳಿಸಿ, ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕೆಂದು ಅವರು ಆಗ್ರಹಿಸಿದರು.

ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಕೆ.ಮೋಹನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಕಾರ್ಮಿಕರು ಲೈನ್‌ಮನೆ ಹಾಗೂ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಅಂಥವರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಕಾರ್ಮಿಕರು  ಮೆರವಣಿಗೆ ನಡೆಸಿದರು.

ಎಐಸಿಸಿಟಿಯು ರಾಜ್ಯ ಸಮಿತಿ ಸದಸ್ಯ ಸುಬ್ಬ, ಸಂಘಟನೆಯ ಉಪಾಧ್ಯಕ್ಷ ತೋಲ, ಆದಿವಾಸಿ ಸಂಘದ ಕಾರ್ಯದರ್ಶಿ ಗೌರಿ, ಉಪಕಾರ್ಯದರ್ಶಿ ಬೊಳ್ಕ ಮತ್ತಿತರ ಪದಾಧಿಕಾರಿಗಳು ಸಭೆಯನ್ನುದ್ದೇಶಿಸಿ ಮಾತನಾಡಿದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಕಾರ್ಮಿಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.