ADVERTISEMENT

ಮಡಿಕೇರಿ | ಪ್ರಗತಿ ಪರಿಶೀಲನಾ ಸಭೆಯಲ್ಲಿ ಒಂದೂ ಮಾತನಾಡದ ಯದುವೀರ್ ಒಡೆಯರ್

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 5:19 IST
Last Updated 7 ಜುಲೈ 2024, 5:19 IST
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್   

ಮಡಿಕೇರಿ: ಇಲ್ಲಿ ಶನಿವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದ ನೂತನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಒಂದೂ ಮಾತನಾಡದೇ ಮೌನವಾಗಿದ್ದರು.

ಜಿಲ್ಲೆಯನ್ನು ಬಾಧಿಸುತ್ತಿರುವ ಕಾಡಾನೆ, ಡೆಂಗಿ, ಪ್ರಾಕೃತಿಕ ವಿಕೋಪ, ಮಳೆ ಮೊದಲಾದ ಸಮಸ್ಯೆಗಳ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕರಾದ ಡಾ.ಮಂತರ್‌ಗೌಡ, ಎ.ಎಸ್.ಪೊನ್ನಣ್ಣ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ನಾಮ ನಿರ್ದೇಶಿತ ಸದಸ್ಯರೂ ಹಲವು ಸಮಸ್ಯೆಗಳನ್ನು ಪ್ರಸ್ತಾ‍ಪಿಸುತ್ತಿದ್ದರು. ಆದರೆ, ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳದೇ ಮೂಕಪ್ರೇಕ್ಷಕರಂತಿದ್ದ ಯದುವೀರ್‌ ಅರ್ಧದಲ್ಲೇ ಸಭೆಯಿಂದ ನಿರ್ಗಮಿಸಿದರು.

ಸಭೆಯ ಹೊರಗೆಯೂ ಅವರೊಂದಿಗೆ ಪಕ್ಷದ ಕಾರ್ಯಕರ್ತರಾಗಲಿ, ಮುಖಂಡರಾಗಲಿ ಕಾಣಿಸಿಕೊಳ್ಳಲಿಲ್ಲ. ತಮ್ಮ ಅಂಗರಕ್ಷಕರೊಂದಿಗೆ ಅವರು ತೆರಳಿದರು.

ADVERTISEMENT

ಅದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೊಡಗು ಕೆಡಿಪಿ ಸಭೆಗೆ ಆಹ್ವಾನ ಬಂದಿತ್ತು. ಅದರಂತೆ ಭಾಗಿಯಾಗಿದ್ದೇನೆ. ನನಗೆ ಕಲಿಯಲು ಇದೊಂದು ಅನುಭವ. ಸದ್ಯದಲ್ಲೇ ‘ದಿಶಾ’ ಸಮಿತಿ ಸಭೆ ನಡೆಯಲಿದೆ. ಅಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಉಳಿದ ಸಮಸ್ಯೆ ಬಗ್ಗೆ ಚರ್ಚಿಸುವೆ’ ಎಂದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪ ಕುರಿತು ಪ್ರತಿಕ್ರಿಯಿಸಿ, ‘ಈ ಸಂಬಂಧ  ಪಕ್ಷದ ಹಿರಿಯರು ಆರೋಪಿಸಿದ್ದಾರೆ. ತನಿಖೆಯಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.