ADVERTISEMENT

ಕೋಲಾರ ಕ್ಷೇತ್ರಕ್ಕೆ ₹376 ಕೋಟಿ ಅನುದಾನ: ಸಚಿವ ಬೈರತಿ ಸುರೇಶ್

ನರಸಾಪುರ: ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 16:13 IST
Last Updated 19 ಸೆಪ್ಟೆಂಬರ್ 2024, 16:13 IST
ಕೋಲಾರ ತಾಲ್ಲೂಕಿನ ನರಸಾಪುರದಲ್ಲಿ ಗುರುವಾರ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಶಂಕುಸ್ಥಾಪನೆ ನೆರವೇರಿಸಿದರು. ಕೊತ್ತೂರು ಮಂಜುನಾಥ್‌, ಎಂ.ಎಲ್‌.ಅನಿಲ್‌ ಕುಮಾರ್‌, ಚಂಚಿಮಲೆ ರಮೇಶ್‌ ಪಾಲ್ಗೊಂಡಿದ್ದರು
ಕೋಲಾರ ತಾಲ್ಲೂಕಿನ ನರಸಾಪುರದಲ್ಲಿ ಗುರುವಾರ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಶಂಕುಸ್ಥಾಪನೆ ನೆರವೇರಿಸಿದರು. ಕೊತ್ತೂರು ಮಂಜುನಾಥ್‌, ಎಂ.ಎಲ್‌.ಅನಿಲ್‌ ಕುಮಾರ್‌, ಚಂಚಿಮಲೆ ರಮೇಶ್‌ ಪಾಲ್ಗೊಂಡಿದ್ದರು   

ಕೋಲಾರ: ‘ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದಿಂದ ಕಳೆದ ಒಂದು ವರ್ಷದಲ್ಲೇ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ₹376 ಕೋಟಿ ‌ಅನುದಾನ ಕೊಡಲಾಗಿದೆ. ಅಭಿವೃದ್ಧಿಯ ದೃಷ್ಟಿಯಿಂದ ಇನ್ನೂ ಅನುದಾನ ಕೊಡಲು ಸರ್ಕಾರ ಸಿದ್ಧವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು.

ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ಗುರುವಾರ ₹7 ಕೋಟಿ ವೆಚ್ಚದಲ್ಲಿ ನಾಲ್ಕು ಪಥದ ರಸ್ತೆ, ಖಾಜಿಕಲ್ಲಹಳ್ಳಿ ಮಾರ್ಗದ ರಸ್ತೆಗೆ ₹5 ಕೋಟಿ ಹಾಗೂ ನರಸಾಪುರ ಸೊಸೈಟಿಯ ನೂತನ ಕಟ್ಟಡಕ್ಕೆ ₹1.5 ಕೋಟಿ ಸೇರಿದಂತೆ ಒಟ್ಟು ₹13.5 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಸರಮಾಲೆಯೇ ನಡೆಯುತ್ತಿದೆ. ಆದರೆ, ಹಣ ಖಾಲಿಯಾಗಿದೆ ಎಂದು ಬಿಜೆಪಿ ಮತ್ತು ಜೆಡಿಎಸ್‌ ಆಡಳಿತ ಪಕ್ಷದ ಮೇಲೆ ಗೂಬೆ ಕೂರಿಸಲು ಹೊರಟಿವೆ. ಆದರೆ, ಅಭಿವೃದ್ಧಿ ಕೆಲಸಗಳು ಮಾತ್ರ ಜನರ ಕಣ್ಣಾಮುಂದೆಯೇ’ ಇವೆ ಎಂದರು.

ADVERTISEMENT

‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆಯುತ್ತಿದೆ. ಬಡವರಿಗೆ ಏಳಿಗೆಗಾಗಿ ಐದು ಗ್ಯಾರಂಟಿಗಳನ್ನು ಕೊಡುತ್ತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದವರು ಹೇಳಿದ ಸುಳ್ಳಿನ ಸರಪಳಿಯನ್ನು ತುಂಡರಿಸಿದ್ದೇವೆ’ ಎಂದು ಹೇಳಿದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, ‘ಅಭಿವೃದ್ಧಿ ಕೆಲಸಗಳು ಸರಿಯಾಗಿ ನಡೆಯುತ್ತಿದೆಯೇ ಇಲ್ಲವೇ ಎಂಬುದಕ್ಕೆ ಜನರು ಗಮನಿಸಬೇಕು. ಕಳಪೆ ಕೆಲಸವಾದರೆ ನಮಗೆ, ಮೇಲಧಿಕಾರಿಗಳಿಗೆ ದೂರು ನೀಡಬೇಕು. ಇಲ್ಲವೇ ಮಾಧ್ಯಮದವರ ಗಮನಕ್ಕೆ ತರಬೇಕು’ ಎಂದರು.

ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ‘ಅಭಿವೃದ್ಧಿ ವಿಚಾರದಲ್ಲಿ ಯಾವುದೇ ತಾರತಮ್ಯ ಮತ್ತು ರಾಜಕೀಯ ಮಾಡಬಾರದು. ಜನರಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರವು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಇನ್ನೂ ಕೆಲವು ಕಡೆಗಳಲ್ಲಿ ಟೆಂಡರ್ ನಡೆದಿದ್ದು, ಉಳಿದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನರಸಾಪುರ ಗ್ರಾಮದಲ್ಲಿ ಹೊರ ಪೊಲೀಸ್‌ ಠಾಣೆ ನಿರ್ಮಿಸುವಂತೆ ನರಸಾಪುರ ರೇಷ್ಮೆ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು ಸಚಿವರಿಗೆ ಮನವಿ ಮಾಡಿದರು.

‘ನರಸಾಪುರ ಕೈಗಾರಿಕಾ ಪ್ರದೇಶವಾಗಿದ್ದು ಇಲ್ಲಿ ಹೊಸದಾಗಿ ಪೊಲೀಸ್‌ ಹೊರಠಾಣೆಯನ್ನು ಪ್ರಾರಂಭಿಸಬೇಕು. ಸೊಸೈಟಿ ನೂತನ ಕಟ್ಟಡಕ್ಕೆ ನಬಾರ್ಡ್‌ನಿಂದ ₹70 ಲಕ್ಷ ನೀಡಿದ್ದು, ಉಳಿದ ಹಣವನ್ನು ಸಚಿವರು, ಶಾಸಕರ ಮೂಲಕ ಕೊಡಿಸಬೇಕು’ ಎಂದರು.

ವಿಧಾನ ಪರಿಷತ್‌ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಜಿಲ್ಲಾಧಿಕಾರಿ ಅಕ್ರಂ ಪಾಷಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ., ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷೆ ಪದ್ಮಮ್ಮ, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಕೋಚಿಮುಲ್ ನಿರ್ದೇಶಕ ಷಂಷೀರ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಮಂಜುನಾಥ್, ಎಂಟಿಬಿ ಶ್ರೀನಿವಾಸ್, ಶ್ರೀರಾಮಪ್ಪ, ಜಾಲಿ ಬಾಬು, ಜನಪನಹಳ್ಳಿ ನವೀನ್ ಕುಮಾರ್‌ ಇದ್ದರು.

₹7 ಕೋಟಿ ವೆಚ್ಚದಲ್ಲಿ ನಾಲ್ಕು ಪಥದ ರಸ್ತೆ ಖಾಜಿಕಲ್ಲಹಳ್ಳಿ ರಸ್ತೆಗೆ ₹5 ಕೋಟಿ ಅನುದಾನ ಒಟ್ಟು ₹13.5 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ

ಹೊಟ್ಟೆಪಾಡಿಗೆ ವ್ಯಾಪಾರಕ್ಕೆ ರಾಜಕಾರಣ ಮಾಡುತ್ತಿಲ್ಲ ‘ಹಿಂದಿನ ಬಿಜೆಪಿ ಸರ್ಕಾರದಲ್ಲಿ ಶೇ 40 ಕಮಿಷನ್‌ನಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿತ್ತು. ನಮ್ಮ ಸರ್ಕಾರ ಕೂಡ ಯಾರಪ್ಪನ ಮನೆಯಿಂದ ಹಣ ತಂದಿಲ್ಲ. ಜನರ ದುಡ್ಡನ್ನೇ ಜನರಿಗೇ ಕೊಡುತ್ತಿದ್ದೇವೆ. ಜೆಡಿಎಸ್ ಮತ್ತು ಬಿಜೆಪಿ ಸರ್ಕಾರದಲ್ಲಿ ಅವರಿಗೆ ತಿನ್ನಲು ‌ಸಾಕಾಗಲಿಲ್ಲ. ಅದಕ್ಕೆ ಅಭಿವೃದ್ಧಿ ಕುಂಠಿತಗೊಂಡಿತ್ತು. ನಾವು ರಾಜಕಾರಣವನ್ನು ಹೊಟ್ಟೆಪಾಡಿಗೆ ವ್ಯಾಪಾರಕ್ಕೆ ಮಾಡಲು ಬಂದಿಲ್ಲ. ಜನರ ಸೇವೆ ಮಾಡಲು ಬಂದಿದ್ದು ಅಭಿವೃದ್ಧಿಯೇ ನಮ್ಮ ಗುರಿ’ ಎಂದು ಬೈರತಿ ಸುರೇಶ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.