ಬಂಗಾರಪೇಟೆ: ಕುಸಿಯುತ್ತಿರುವ ಚಾವಣಿ, ಮಳೆ ಬಂದರೆ ನೀರು ನಿಲ್ಲುವ ಕೊಠಡಿಗಳು, ಬಿರುಕು ಬಿಟ್ಟಿರುವ ಗೋಡೆಗಳು, ಮುರಿದು ಬಿದ್ದಿರುವ ಕಿಟಿಕಿಗಳು, ಶೌಚಾಲಯೇ ಇಲ್ಲದ ಶಾಲೆಗಳು....
ಇದು ತಾಲ್ಲೂಕಿನ ಕಾಮಸಮುದ್ರ ಪ್ರೌಢಶಾಲೆ, ಸಾಕರಸನಹಳ್ಳಿ, ಕುಂದರಸನಹಳ್ಳಿ, ತಳೂರು, ಮುಷ್ಟ್ರಹಳ್ಳಿ, ಬತ್ತಲಾಯೂರ, ಡಿ ಹೊಸಮನೆ, ಕದಿರೇನಹಳ್ಳಿ, ಚಿಕ್ಕ ಎಳೇಸಂದ್ರ, ಆರಿಮಾನಹಳ್ಳಿ, ಬೋಡೇನಹಳ್ಳಿ, ಕೇತಗಾನಹಳ್ಳಿ, ನಲ್ಲಗುಟ್ಲಹಳ್ಳಿ, ಹಾರೋಹಳ್ಳಿ, ಮುದುಗುಳಿ, ಯಲ್ಲಬುರ್ಗಿ, ನಾರಾಯಣಪುರ, ಚಂಬೇನಹಳ್ಳಿ, ದಾಸರ ಹೋಸಹಳ್ಳಿ, ದೊಡ್ಡೂರು, ಕಾವರನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗಳ ದುಸ್ಥಿತಿಯಾಗಿದೆ.
ಬಂಗಾರಪೇಟೆಯ ಕರ್ನಾಟಕ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವು ಹಳೆಯದಾಗಿದ್ದು, 15 ಕೊಠಡಿಗಳಿವೆ. ಎಲ್ಕಿಜಿಯಿಂದ ಎಂಟನೇ ತರಗತಿವರೆಗೆ 516 ಮಕ್ಕಳು ಕಲಿಯುತ್ತಿದ್ದು, 15 ಮಂದಿ ಶಿಕ್ಷಕರಿದ್ದಾರೆ. ಈ ಶಾಲೆಯಲ್ಲಿ 7 ಕೊಠಡಿಗಳು ದುಸ್ಥಿತಿಯಲ್ಲಿವೆ. ಶಾಲೆಯ ಶೌಚಾಲಯಗಳು ಶಿಥಿಲಾವಸ್ಥೆ ತಲುಪಿದ್ದು, ದುರ್ವಾಸನೆಯಿಂದ ಕೂಡಿವೆ. ಶಾಲೆಯ ಸುತ್ತಾಮುತ್ತ ಸ್ವಚ್ಛತೆ ಮರೀಚಿಕೆಯಾಗಿದ್ದು, ಶಾಲಾ ಕಿಟಿಕಿಗಳು ಮುರಿದು ಹೋಗಿವೆ.
ಕಾರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಸರ್ಕಾರ ಕನ್ನಡ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ (ಎನ್ಟಿಜಿಎಂಎಸ್) ಶಾಲೆಯನ್ನು ದಾನಿಗಳು ನಿರ್ಮಾಣ ಮಾಡಿದ್ದು, ಸುಮಾರು ವರ್ಷಗಳ ಇತಿಹಾಸ ಹೊಂದಿದೆ. ಈ ಶಾಲೆಯಲ್ಲಿ ಮೂರು ಕೊಠಡಿಗಳಿದ್ದು, ಎರಡು ಕಟ್ಟಡಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ಒಂದು ಕೊಠಡಿಯ ಚಾವಣಿ ಕುಸಿದಿದ್ದು, ಮಕ್ಕಳು ಭಯದಿಂದ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದು ಪ್ರಸ್ತುತ ಶಾಲೆಯನ್ನು ಬಾಡಿಗೆ ಕಟ್ಟಡಕ್ಕೆ ವರ್ಗಾವಣೆ ಮಾಡಲಾಗಿದೆ.
ತಾಲ್ಲೂಕಿನ ದೇವರಗುಟ್ಟಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳು ಹಾಗೂ ಮೂಲಸೌಕರ್ಯಗಳಿಲ್ಲದೆ ದೇವಾಲಯದ ವಟಾರವೇ ಶಾಲೆಯಾಗಿದೆ. ವಿದ್ಯಾರ್ಥಿಗಳು ಮಳೆಯಲ್ಲಿ ನೆನೆಯುತ್ತಾ, ಬಿಸಿಲಲ್ಲಿ ಒಣಗುತ್ತ ಪಾಠ ಕೇಳುವಂತಾಗಿದೆ.
ದೋಣಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದರಿನತ್ತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1990ರಲ್ಲಿ ಪ್ರಾರಂಭವಾಗಿದ್ದು, ಇಲ್ಲ 1 ರಿಂದ ಏಳನೇ ತರಗತಿಯವರೆಗೆ ಒಟ್ಟು 50 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಬ್ಬರು ಕಾಯಂ ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಣಸನಹಳ್ಳಿಯ ಶಾಲೆಯ ಕಿಟಕಿಗಳು ಮುರಿದು ಬಿದ್ದಿದ್ದು, ಮಳೆ ಬಂದರೆ ಕೊಠಡಿ ತುಂಬಾ ನೀರು ನಿಲ್ಲುತ್ತದೆ. ಇದರಿಂದ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ. ಜತೆಗೆ ಮಳೆ ಬಂದಾಗ ಕಟ್ಟಡ ಸೋರುವುದರಿಂದ ವಿಧಿ ಇಲ್ಲದೆ ಪುಸ್ತಕಗಳನ್ನು ತಲೆ ಮೇಲೆ ಇಟ್ಟುಕೊಂಡು ಕುಳಿತುಕೊಳ್ಳಬೇಕಿದೆ ಎಂಬುದು ವಿದ್ಯಾರ್ಥಿಗಳ ಮಾತಾಗಿದೆ.
ಶಿಥಿಲ ಕೊಠಡಿ: ಮಕ್ಕಳ ಕೂರಿಸುವಂತಿಲ್ಲ
ತಾಲ್ಲೂಕಿನಲ್ಲಿ ಶಿಥಿಲಾವ್ಯವಸ್ಥೆಯಲ್ಲಿರುವ ಶಾಲಾ ಕೊಠಡಿಗಳನ್ನು ಪಟ್ಟಿ ಮಾಡಿ ಕಾರ್ಯಪಾಲಕ ಇಂಜಿಯರ್ಗೆ ತಿಳಿಸಲಾಗಿದೆ. ಶಿಥಿಲಾವ್ಯವಸ್ಥೆಯಲ್ಲಿರುವ ಕೊಠಡಿಗಳಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ಕೂರಿಸಿ ತರಗತಿ ನೆಡಸಬಾರದು ಎಂದು ಈಗಾಗಲೇ ಆದೇಶಿಸಲಾಗಿದೆ.
- ಸುಕನ್ಯಾ, ಕ್ಷೇತ್ರ ಶಿಕ್ಷಣಾಧಿಕಾರಿ,ಬಂಗಾರಪೇಟೆ
ಆತಂಕದಲ್ಲಿ ಓದುವ ಮಕ್ಕಳು
ಶಿಥಿಲಾವಸ್ಥೆ ತಲುಪಿದ ಸರ್ಕಾರಿ ಶಾಲಾ ಕೊಠಡಿಗಳ ಸ್ಥಿತಿ ಇನ್ನೂ ಬದಲಾಗಿಲ್ಲ. ಮಕ್ಕಳು ಈ ವರ್ಷವೂ ಸೋರುತ್ತಿರುವ, ಕುಸಿಯುವ ಹಂತದಲ್ಲಿರುವ ಕಟ್ಟಡದಲ್ಲಿ ಆತಂಕದಿಂದ ಓದುವಂತಾಗಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಕೊಠಡಿಗಳು ಅನಾಹುತಕ್ಕೆ ಆಹ್ವಾನ ನೀಡುವ ಪರಿಸ್ಥಿತಿ ಇದ್ದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ಆತಂಕಕಾರಿ ವಿಷಯವಾಗಿದೆ.
- ಚಂದ್ರಪ್ಪ, ಎಸ್ಡಿಎಂಸಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.