ADVERTISEMENT

ವೇಮಗಲ್ | ಬಸ್ ಅಪಘಾತ: ಪ್ರಾಣಾಪಾಯದಿಂದ ಪಾರಾದ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 13:43 IST
Last Updated 14 ಜೂನ್ 2024, 13:43 IST
ಅಪಘಾತದ ರಭಸಕ್ಕೆ ಬಸ್ಸಿನ ಮುಂಭಾಗ ನುಜ್ಜುಗೊಂಡಿರುವುದು.
ಅಪಘಾತದ ರಭಸಕ್ಕೆ ಬಸ್ಸಿನ ಮುಂಭಾಗ ನುಜ್ಜುಗೊಂಡಿರುವುದು.   

ವೇಮಗಲ್: ಪಟ್ಟಣದ ಬೆಟ್ಟಹೊಸಪುರ ಗೇಟ್ ಸಮೀಪ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಬಸ್ ಮತ್ತು ಪಿಕಪ್ ವಾಹನದ ನಡುವೆ ಅಪಘಾತ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ನರಸಾಪುರ ಕೈಗಾರಿಕಾ ಪ್ರದೇಶದ ಐಫೋನ್ ತಯಾರಿಕಾ ಕಂಪನಿ ಟಾಟಾ ಗ್ರೂಪ್ಸ್ (ಹಳೆಯ ವಿಸ್ಟ್ರಾನ್) ಕಂಪನಿಗೆ ಕಾರ್ಮಿಕರನ್ನು ಕರೆದುಕೊಂಡು ಹೋಗುವ ಬಸ್, ರಾತ್ರಿ ಪಾಳಿಯ ಕೆಲಸಕ್ಕೆ ಚಿಂತಾಮಣಿ ಭಾಗದಿಂದ ಮಹಿಳಾ ಕಾರ್ಮಿಕರನ್ನು ಕರೆದುಕೊಂಡು ಕಂಪನಿ ಕಡೆ ಹೊರಟಿತ್ತು. ವೇಮಗಲ್ - ನರಸಾಪುರ ರಸ್ತೆಯಲ್ಲಿ ಬೆಟ್ಟ ಹೊಸಪುರ ಗೇಟ್ ಸಮೀಪ ಎದುರಿನಿಂದ ಬಂದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಬಸ್ಸಿನ ಮುಂಭಾಗ ಜಖ ಗೊಂಡಿದೆ.

ಬಸ್ಸಿನಲ್ಲಿದ ಮಹಿಳಾ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಕೋಲಾರ ಮತ್ತು ಹೊಸಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬಸ್ಸಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು ಘಟನೆಗೆ ಕಾರಣ ತಿಳಿಯಬೇಕಾಗಿದೆ. ಸ್ಥಳಕ್ಕೆ ವೇಮಗಲ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ADVERTISEMENT

ಅತಿವೇಗದ ಬಸ್ಸುಗಳು: ಟಾಟಾ ಗ್ರೂಪ್ಸ್ ಐಫೋನ್ ತಯಾರಿಕಾ ಕಂಪನಿ ಕಾರ್ಮಿಕರಿಗೆ ಕಂಪನಿಯೇ ಬಸ್ ವ್ಯವಸ್ಥೆ ಮಾಡಿದೆ. ಆದರೆ, ಈ ಬಸ್ಸುಗಳಿಗೆ ಯಾವುದೇ ವೇಗ ನಿಯಂತ್ರಕ ಸಾಧನಗಳನ್ನು ಅಳವಡಿಸಿರುವುದಿಲ್ಲ, ಕಾರ್ಮಿಕರನ್ನು ಕಂಪನಿಗೆ ಸೇರಿಸುವ ಧಾವಂತದಲ್ಲಿ ಅತಿ ವೇಗವಾಗಿ ಚಾಲನೆ ಮಾಡುತ್ತಾರೆ. ಇವರ ಅತಿ ವೇಗದ ಚಾಲನೆಯಿಂದಾಗಿ ವಾರಕ್ಕೆ ಕನಿಷ್ಠ ಒಂದೆರಡು ಸಣ್ಣ ಪುಟ್ಟ ಜಗಳಗಳನ್ನು ಇತರೆ ವಾಹನಗಳ ಚಾಲಕರೊಂದಿಗೆ ನಡೆಸುವುದು ಸರ್ವೇಸಾಮಾನ್ಯ. ಪಾಳಿಯ ಅವಧಿ ಮುಗಿದ ನಂತರ ಒಂದೇ ಬಾರಿ ರಸ್ತೆಗಳಿಯುವ ಈ ಬಸ್ಸುಗಳು ಜಿದ್ದಿಗೆ ಬಿದ್ದವರಂತೆ, ಅತಿ ವೇಗದಲ್ಲಿ ಸಾರ್ವಜನಿಕರಲ್ಲಿ ಭಯ ಉಂಟು ಮಾಡುವಂತೆ ಚಲಾಯಿಸುತ್ತಾರೆ. ಜೊತೆಗೆ ಸರಿಯಾದ ತರಬೇತಿ ಇಲ್ಲದ ಚಾಲಕರು, ನಿದ್ದೆ ರಹಿತ ಚಾಲನೆ, ಇವೇ ಈ ಅಪಘಾತಕ್ಕೆ ಕಾರಣವಾಗಿದೆ. ಇನ್ನೂ ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಇದರ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಪಘಾತದಿಂದ ಜಕಂಗೊಂಡಿರುವ ಬುಲೆರೋ ಪಿಕಪ್ ವಾಹನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.