ವೇಮಗಲ್: ನಾಲ್ಕಾರು ಬಗೆ ದೋಸೆ, ಇಡ್ಲಿ, ರೈಸ್ಬಾತ್, ಪೂರಿ, ಉದ್ದಿನ ವಡೆ ಐಟಂಗಳಿಂದಲೇ ಚಾರಿ ಟಿಫನ್ ಸೆಂಟರ್ ವೇಮಗಲ್ ಪಟ್ಟಣದಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ಸಿಗುವ ದೋಸೆ, ಇಡ್ಲಿಗೆ ಕೊಡುವ ಕೆಂಪುಚಟ್ನಿ, ಸಾಗು ತಿನ್ನಲು ಪ್ರತಿ ದಿನವೂ ಸಂಜೆ ಸಮಯ ಜಾತ್ರೆಗೆ ಬಂದಂತೆ ಜನ ಬರುತ್ತಾರೆ. ಬಾಯಿ ಚಪ್ಪರಿಸುತ್ತಾ ತಿನ್ನುತ್ತಾರೆ.
ಕೆಂಪು ಚಟ್ನಿ ಸವಿ, ಪುದೀನಾ ಚಟ್ನಿ ರುಚಿ, ದೋಸೆ ಮೃದುತ್ವ, ತುಪ್ಪದ ಘಮಲು ಹಿತವಾಗಿ ಕೈತಾಕುವ ಬಿಸಿ, ಇವೆಲ್ಲವೂ ಸೇರಿದಾಗ ದೋಸೆ ರುಚಿ ಹೇಗಿರಬಹುದು ? ಈ ರುಚಿಗಾಗಿ ಸಂಜೆ ವೇಳೆಗೆ ಜನ ತುಂಬಿರುತ್ತಾರೆ. ಪ್ರತಿದಿನ ಸಂಜೆ 6ಕ್ಕೆ ಸಣ್ಣ ಆಟೊದಲ್ಲಿ ಪಟ್ಟಣದ ಅಂಬೇಡ್ಕರ್ ಭವನದ ಮುಂಭಾಗ ಬರುವ ಚಾರಿ ಟಿಫನ್ ಸೆಂಟರ್, ಕೇವಲ ಪ್ರಾರಂಭವಾದ ಆರು ಏಳು ತಿಂಗಳಗಳಲ್ಲಿ ತನ್ನ ರುಚಿ ಮತ್ತು ಶುಚಿಗೆ ಈ ಭಾಗದ ತಿಂಡಿ ಪ್ರಿಯರ ಅಚ್ಚುಮೆಚ್ಚು ಆಗಿದೆ.
ಪದವಿ ಮುಗಿಸಿ ಸ್ವಲ್ಪ ದಿನ ಕಾರ್ಪೆಂಟರ್ ವೃತ್ತಿ ಮಾಡಿಕೊಂಡಿದ್ದ ಈ ಯುವಕ, ಎಲ್ಲರಂತೆ ಬೇರೆ ಕಡೆ ಕೆಲಸ ಮಾಡುವ ಮೊದಲು ತಾನೇ ಸಣ್ಣದಾಗಿ ಸ್ವಂತ ಉದ್ಯೋಗ ಪ್ರಾರಂಭಿಸಿ, ಬದುಕು ರೂಪಿಸಿಕೊಂಡಿದ್ದಾರೆ.
ಇಲ್ಲಿ ಸಿಗುವ ದೋಸೆ, ಇಡ್ಲಿಗೆ ಬಳಸುವ ಪದಾರ್ಥ ಗುಣಮಟ್ಟದ್ದಾಗಿರುತ್ತದೆ. ಹಾಗಾಗಿ ರುಚಿಗೆ ಮುಖ್ಯ ಕಾರಣ. ಗುಣಮಟ್ಟದಲ್ಲಿ ರಾಜಿನೇ ಇಲ್ಲ ಎನ್ನುತ್ತಾರೆ. ಹೆಚ್ಚಿನ ಲಾಭದ ಆಸೆ ಇಲ್ಲದೆ, ಬಂದಷ್ಟು ಬಂದರೆ ಸಾಕು ಎನ್ನುವ ತೃಪ್ತಿ ಇದೆ ಎಂದು ಮಾಲೀಕ ನಾಗೇಂದ್ರ ಚಾರಿ ಅಭಿಪ್ರಾಯಪಡುತ್ತಾರೆ.
ಪ್ರತಿದಿನ ಸಂಜೆ 6ಕ್ಕೆ ಆಟೊದಲ್ಲಿ ಶುರುವಾಗುವ ಈ ಚಾರಿ ಟಿಫನ್ ಸೆಂಟರ್ ರಾತ್ರಿ 11:00ವರೆಗೂ ಪಟ್ಟಣದ ಜನರ ಹಸಿವು ನೀಗಿಸುತ್ತಿದೆ. ಇವರ ಗಾಡಿ ಬರುವುದಕ್ಕಾಗಿ ಜನ ಕಾದು ಕುಳಿತಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.