ಪ್ರಜಾವಾಣಿ ವಾರ್ತೆ
ಕೋಲಾರ: ‘ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ. ಅದಕ್ಕಾಗಿ ಹಾಲಿನ ದರ ಏರಿಕೆ ಕುರಿತಂತೆ ಮುಖ್ಯಮಂತ್ರಿ ಹೇಳಿಕೆಗೆ ನಮ್ಮ ಬೆಂಬಲವಿದೆ. ಹಾಲಿನ ದರ ಏರಿಸಿ, ರೈತರಿಗೆ ನೀಡಲು ನಿರ್ಧಾರ ಮಾಡಿದ್ದೇವೆ’ ಎಂದು ಕೋಚಿಮುಲ್ ಅಧ್ಯಕ್ಷರೂ ಆಗಿರುವ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ತಾಲ್ಲೂಕಿನ ರಾಮಸಂದ್ರ ಗಡಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬೇರೆ ರಾಜ್ಯಗಳಿಂದ ಹಾಲು ಬರುತ್ತಿದ್ದು, ನಂದಿನಿ ಹಾಲಿನ ಉತ್ಪಾದನೆ ಹೆಚ್ಚಿಸಬೇಕು. ನಂದಿನಿಯನ್ನು ಅಮುಲ್ಗಿಂತಲೂ ಹೆಚ್ಚಾಗಿ ಉತ್ಪಾದಿಸಿ ದೇಶದಾದ್ಯಂತ ವಿಸ್ತರಣೆಗೆ ಕ್ರಮಕೈಗೊಳ್ಳಲಾಗುವುದು’ ಎಂದರು.
‘ಗ್ರಾಹಕರಿಗಿಂತಲೂ ಕಷ್ಟದ ಜೀವಿಗಳ ಕಡೆ ಗಮನಹರಿಸಬೇಕು. ರೈತರು, ಹಾಲು ಉತ್ಪಾದಕರ ಕಷ್ಟಗಳು ಹೆಚ್ಚಾಗಿವೆ. ಮನಬಂದಂತೆ ಒಕ್ಕೂಟಗಳಿಂದ ಏರಿಕೆ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದ್ದೇ ಆದಲ್ಲಿ ಒಕ್ಕೂಟಗಳು ಬೀಗ ಹಾಕಿಕೊಂಡು ಹೋಗಬೇಕಾಗುತ್ತದೆ’ ಎಂದು ಹೇಳಿದರು.
‘ಹಾಲು ಪ್ರೋತ್ಸಾಹಧನ 6 ತಿಂಗಳಿಂದ ಬಾಕಿ ಉಳಿದಿಲ್ಲ. ಬಿಜೆಪಿ ಸರ್ಕಾರ ಬಾಕಿ ಇರಿಸಿದ್ದ ಹಣವನ್ನು ನೀಡುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಹಾಲು ಉತ್ಪಾದಕರಿಗೆ ಉತ್ತಮ ಬೆಲೆ ನೀಡಬೇಕೆಂದು ಮುಖ್ಯಮಂತ್ರಿ ಹೇಳಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಯವರು ಎಂದಿಗೂ ರೈತರು, ಹಾಲು ಉತ್ಪಾದಕರ ಪರ ಇರುವುದಿಲ್ಲ, ಎಲ್ಲವನ್ನೂ ವಿರೋಧಿಸುವುದೇ ಅವರ ಕೆಲಸವಾಗಿದ್ದು, ಹಾಲು ಉತ್ಪಾದಕರು ಬಿಜೆಪಿಯವರ ವಿರುದ್ಧ ಹೋರಾಟಕ್ಕೆ ಮುಂದಾಗುವ ಬಗ್ಗೆ ನನ್ನ ಬಳಿ ಚರ್ಚಿಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.