ಚಿಂತಾಮಣಿ: ನಗರದ ಮಾಳಪ್ಪಲ್ಲಿಯಲ್ಲಿ ಮಂಗಳವಾರ ನವ ಕರ್ನಾಟಕ ರೈತ ಸಂಘದ ನೂತನ ಕಾರ್ಯಾಲಯವನ್ನು ಉದ್ಘಾಟಿಸಲಾಯಿತು.
ಕಚೇರಿ ಉದ್ಘಾಟಿಸಿ ಮಾತನಾಡಿದ ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ದಯಾನಂದ ಸಿ. ಪಾಟೀಲ್, ‘ತಮ್ಮ ಹಕ್ಕು ಮತ್ತು ನ್ಯಾಯ ಕೇಳಲು ಹೋಗುವ ಅನ್ನದಾತರನ್ನು ಪೊಲೀಸ್ ಬಲದ ಮೂಲಕ ಹತ್ತಿಕ್ಕುವ ಸರ್ಕಾರಗಳು ರೈತ ವಿರೋಧಿ ಧೋರಣೆ ಅನುಸರಿಸುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಒಂದು ಸಾವಿರ ಕೋಟಿ ಬೆಳೆವಿಮೆ ಮಾಡಿಸಿರುವ ರೈತರಿಗೆ ಅತಿವೃಷ್ಟಿ, ಅನಾವೃಷ್ಟಿ, ಬೆಳೆಹಾನಿ ಮುಂತಾದ ಸಂದರ್ಭಗಳಲ್ಲಿ ಬೆಳೆ ವಿಮಾ ಮೊತ್ತ ನೀಡದೆ ಕಂಪನಿಗಳು ರೈತರನ್ನು ವಂಚಿಸಿವೆ. ಬರಗಾಲ ಘೋಷಣೆಯಾಗಿದ್ದರೂ ಸರ್ಕಾರ ಬರಪರಿಹಾರ ನೀಡಿಲ್ಲ. ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಮಾರ್ಚ್ 29, 30, 31ರಂದು ಮೂರು ದಿನ ರಾಜ್ಯಮಟ್ಟದ ರೈತರ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ. ಮೇಧಾ ಪಾಟ್ಕರ್, ಅಣ್ಣಾ ಹಜಾರೆ, ಬಾನ್, ವಿ.ಎಂ. ಸಿಂಗ್, ರಾಜೇಂದ್ರ ಬಾಬು, ದಶರಥ ಕುಮಾರ್, ಸುಧಾಮೂರ್ತಿ ಸೇರಿ ಹಲವು ಗಣ್ಯರು ಭಾಗವಹಿಸುತ್ತಾರೆ ಎಂದರು.
ನವ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆ.ಎಲ್.ಶ್ರೀನಾಥ್, ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಎಚ್.ವಿ.ಮೋಹನ್ ಅವರನ್ನು ನೇಮಕ ಮಾಡಲಾಯಿತು. ಸಂಘದ ರಾಜ್ಯ ಕಾರ್ಯದರ್ಶಿ ಎಸ್.,ಲ್ಲಿಕಾರ್ಜುನ್, ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜಸ್ವಾಮಿ, ನಿವೃತ್ತ ಮುಖ್ಯ ಶಿಕ್ಷಕ ವೆಂಕಟೇಶಪ್ಪ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.