ADVERTISEMENT

ಕೋಲಾರ ಜಿಲ್ಲೆಯಲ್ಲಿ ಮಳೆ ಅಬ್ಬರ: 24 ದಿನಗಳಲ್ಲಿ 205 ಮಿ.ಮೀ ಮಳೆ

ಬಯಲುಸೀಮೆಯಲ್ಲಿ ಮಲೆನಾಡಿನ ವಾತಾವರಣ!

ಕೆ.ಓಂಕಾರ ಮೂರ್ತಿ
Published 25 ಅಕ್ಟೋಬರ್ 2024, 7:34 IST
Last Updated 25 ಅಕ್ಟೋಬರ್ 2024, 7:34 IST
ಕೋಲಾರದಲ್ಲಿ ಮಳೆಯ ದೃಶ್ಯ
ಕೋಲಾರದಲ್ಲಿ ಮಳೆಯ ದೃಶ್ಯ   

ಕೋಲಾರ: ಸತತ ಮಳೆಯಿಂದ ಬಯಲುಸೀಮೆ ಜಿಲ್ಲೆಯಲ್ಲಿ ಮಲೆನಾಡಿನ ವಾತಾವರಣ ನಿರ್ಮಾಣವಾಗಿದ್ದು, ಕಳೆದ 24 ದಿನಗಳಲ್ಲಿ ಬರೋಬ್ಬರಿ 205 ಮಿ.ಮೀ (20.5 ಸೆ0.ಮೀ.) ಮಳೆಯಾಗಿದೆ.

ಅಕ್ಟೋಬರ್‌ 1ರಿಂದ 24ವರೆಗಿನ ಅವಧಿಯ ಮಳೆಯ ಪ್ರಮಾಣ ಇದಾಗಿದ್ದು, ಈ ಅವಧಿಯಲ್ಲಿ ವಾಡಿಕೆ ಮಳೆ 110 ಮಿ.ಮೀ (11 ಸೆಂ.ಮೀ) ಇರುತ್ತದೆ. ಆದರೆ, ಈ ಬಾರಿ ಶೇ 75ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ.

ಈ ಬಾರಿ ಮುಂಗಾರಿನ ಹಂಗಾಮಿನ ಅವಧಿಯಲ್ಲಿ ಮಳೆ ಕೊರತೆ ಎದುರಿಸಿದ ಜಿಲ್ಲೆಯಲ್ಲಿ ಈ ತಿಂಗಳು ಅಬ್ಬರಿಸುತ್ತಿದೆ. ನಿರೀಕ್ಷೆಗೂ ಮೀರಿ ಸುರಿದ ಮಳೆ ಅಬ್ಬರದಿಂದ ಬೆಳೆ ಹಾನಿಯಾಗಿದ್ದರೂ ಜಿಲ್ಲೆಯಲ್ಲಿನ ಅಂತರ್ಜಲ ಮಟ್ಟ ಏರಿಕೆ ಕಂಡಿದೆ. ಕೆರೆ ಕಟ್ಟೆ ಬಾವಿ ತುಂಬಿಕೊಂಡಿವೆ. ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ.

ADVERTISEMENT

ಜಿಲ್ಲೆಯಲ್ಲಿ ಕೆಜಿಎಫ್‌ ತಾಲ್ಲೂಕಿನಲ್ಲಿ ಅತ್ಯಧಿಕ ಮಳೆಯಾಗಿದೆ. 103.9 ಮಿ.ಮೀ ವಾಡಿಕೆ ಮಳೆ ಎದುರಾಗಿ 237.7 ಮಿ.ಮೀ ಮಳೆ ಸುರಿದಿದೆ. ಅಂದರೆ ಶೇ 129ರಷ್ಟು ಅಧಿಕ ಮಳೆಯಾಗಿದೆ. ನಂತರ ಮಾಲೂರು ತಾಲ್ಲೂಕು ಇದೆ. ಇದಕ್ಕೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಂಕಿಅಂಶಗಳೇ ಸಾಕ್ಷಿ.

ಜನವರಿ 1ರಿಂದ ಅ.24ವರೆಗೆ 674 ಮಿ.ಮೀ (67.4 ಸೆಂ.ಮೀ.) ಮಳೆಯಾಗಿದೆ. ಈ ಅವಧಿಯ ವಾಡಿಕೆ ಮಳೆ 627 ಮಿ.ಮೀ (62.7 ಸೆಂ.ಮೀ) ಆಗಿದೆ.

‘ಈ ವರ್ಷ ಮುಂಗಾರಿನಲ್ಲಿ ಕೋಲಾರ ಸೇರಿದಂತೆ ಕೆಲವೆಡೆ ಮಳೆ ಕಡಿಮೆ ಆಗಿದೆ. ಕೋಲಾರ ಜಿಲ್ಲೆಯಲ್ಲಿ ಶೇ 11ರಷ್ಟು ಮಳೆ ಕೊರತೆಯಾಯಿತು. ವಾಡಿಕೆಯ 399 ಮಿ.ಮೀ ಬದಲು 356 ಮಿ.ಮೀ. ಮಳೆಯಾಯಿತು. ಆದರೆ, ಹಿಂಗಾರಿನಲ್ಲೂ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದೆ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

2021ರಲ್ಲಿ ಜಿಲ್ಲೆಯಲ್ಲಿ ಡಿಸೆಂಬರ್‌ ಅಂತ್ಯಕ್ಕೆ ಒಟ್ಟು 1,316 ಮಿ.ಮೀ.(131 ಸೆ.ಮೀ.) ಮಳೆಯಾಗಿತ್ತು. ಅದು ಜಿಲ್ಲೆಯಲ್ಲೇ ಅತ್ಯಧಿಕ ಮಳೆಯಾದ ವರ್ಷ ಕೂಡ. ಈವರೆಗೆ ಆ ದಾಖಲೆ ಮುರಿಯಲು ಸಾಧ್ಯವಾಗಿಲ್ಲ. 2022ರಲ್ಲಿ ಅಕ್ಟೋಬರ್‌ ವೇಳೆಗೆ 1,043 ಮಿ.ಮೀ (104 ಸೆಂ.ಮೀ.) ಮಳೆಯಾಗಿತ್ತು. ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 734.22 ಮಿ.ಮೀ. (73 ಸೆಂ.ಮೀ.). ಆದರೆ, 2023ರಲ್ಲಿ ಮಳೆ ಕೊರತೆಯಿಂದ ಬರಗಾಲ ನಿರ್ಮಾಣವಾಗಿತ್ತು. ಜಿಲ್ಲೆಯ ಆರೂ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿತ್ತು.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಲಕ್ಷ್ಮಿಸಾಗರ ಗ್ರಾಮದ ಹೊಲಗಳಿಗೆ ಈಚೆಗೆ ನುಗ್ಗಿದ್ದ ಮಳೆ ನೀರು

ಬೆಳೆ ನಷ್ಟ; ರೈತರ ಪರದಾಟ

ಜಿಲ್ಲೆಯಲ್ಲಿ ಸತತ ಮಳೆ ಕಾರಣ ರೈತರಿಗೆ ಅಪಾರ ನಷ್ಟ ಉಂಟಾಗಿದೆ. ಮುಂಗಾರು ಹಂಗಾಮು ಅವಧಿಯಲ್ಲಿ ಮಳೆ ಕೊರತೆ ಉಂಟಾಗಿತ್ತು. ಈಗ ವಿಪರೀತ ಮಳೆಯಾಗಿ ಬೆಳೆ ಹಾನಿ ಆಗುತ್ತಿದೆ. ಟೊಮೆಟೊ ಪಪ್ಪಾಯಿ ಕೋಸು ಕೊತ್ತಂಬರಿ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿ ಉಂಟಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ತೋಟಗಳಲ್ಲಿ ನೀರು ನಿಂತುಕೊಂಡಿದ್ದು ಬೆಳೆ ಕೊಳೆಯುತ್ತಿದೆ. ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರೈತರು ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಮಾಲೂರು ತಾಲ್ಲೂಕಿನ ಲಕ್ಷ್ಮಿಸಾಗರ ಗ್ರಾಮದ ಬಳಿ ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿತ್ತು. ಪಕ್ಕದಲ್ಲೇ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ವೇ ಕಾರಿಡಾರ್‌ ಕಾಮಗಾರಿ ನಡೆಯುತ್ತಿದ್ದು ಅವೈಜ್ಞಾನಿಕ ಕಾಮಗಾರಿ ಕಾರಣ ಈ ಸಮಸ್ಯೆ ಆಗಿದೆ ಎಂದು ರೈತರು ದೂರಿದ್ದರು.

ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ

ಸತತ ಮಳೆ ಕಾರಣ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಜಿಲ್ಲೆಯಲ್ಲಿ ಹೈ ಅಲರ್ಟ್‌ ಘೋಷಿಸಿದ್ದು ಜನ ಜಾನುವಾರುಗಳಿಗೆ ಪ್ರಾಣ ಹಾನಿಯಾಗದಂತೆ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತಹಶೀಲ್ದಾರ್‌ ಸೇರಿದಂತೆ ಯಾರೂ ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ತಾಕೀತು ಮಾಡಿದ್ದಾರೆ. ಅನಾಹುತ ತಡೆಯಲು ಸಿದ್ಧತೆ ಮಾಡಿಕೊಳ್ಳುವಂತೆಯೂ ನಿರ್ದೇಶನ ನೀಡಿದ್ದಾರೆ. ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್‌ ರೂಂ (9740050061 ಅಥವಾ 1077 ಅಥವಾ 08152–243506) ಈಗಾಗಲೇ 24x7 ಕಾರ್ಯನಿರ್ವಹಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.