ಕೋಲಾರ: ‘ದೇವನಹಳ್ಳಿಯಿಂದ ತಮಿಳುನಾಡಿನ ಹೊಸೂರು ಗಡಿಯವರೆಗೆ ಕೋಲಾರ ಜಿಲ್ಲೆ ಮೂಲಕ ಹಾದು ಹೋಗಲಿರುವ 110.4 ಕಿ.ಮೀ ಉದ್ದದ ನಾಲ್ಕು ಪಥದ ಹೆದ್ದಾರಿ ನಿರ್ಮಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಯೋಜನೆಗೆ ₹3,190 ಕೋಟಿ ವೆಚ್ಚವಾಗಲಿದ್ದು, ರಸ್ತೆ ಕಾಮಗಾರಿಗೆ ₹2,032 ಕೋಟಿ ಹಾಗೂ ಭೂಸ್ವಾಧೀನಕ್ಕೆ ₹1,158 ಕೋಟಿ ನಿಗದಿಪಡಿಸಲಾಗಿದೆ’ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ನೆರವಿನೊಂದಿಗೆ ಕಾಮಗಾರಿ ಕೈಗೆತ್ತಿಕೊಳ್ಳಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಸದ್ಯದಲ್ಲೇ ಟೆಂಡರ್ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಮುಖ್ಯಮಂತ್ರಿ ಆಹ್ವಾನಿಸಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಶ್ರೀನಿವಾಸಪುರದ ಎಂಜಿನಿಯರ್ಯೊಬ್ಬರು ಈ ಯೋಜನೆಯ ನೀಲನಕ್ಷೆ ತಯಾರಿಸಿದ್ದಾರೆ’ ಎಂದರು.
‘ದೇವನಹಳ್ಳಿ, ವಿಜಯಪುರ, ಜಂಗಮನಕೋಟೆ ಕ್ರಾಸ್, ಎಚ್ ಕ್ರಾಸ್, ವೇಮಗಲ್, ನರಸಾಪುರ, ಕೈಗಾರಿಕಾ ಪ್ರದೇಶ, ಮಾಲೂರು, ಹೊಸೂರು ಗಡಿವರೆಗೆ ಈ ಹೆದ್ದಾರಿ ಇರಲಿದೆ. ಆ ಕಡೆ ತಮಿಳುನಾಡಿವರು ಕೂಡ ಅವರ ವ್ಯಾಪ್ತಿಯಲ್ಲಿ ಧರ್ಮಪುರಿಯಿಂದ ಹೆದ್ದಾರಿ ಪೂರ್ಣಗೊಳಿಸಿದ್ದಾರೆ. ಇದರಿಂದ ಬೆಂಗಳೂರು ಹಾಗೂ ಸುತ್ತಮುತ್ತ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಸಂಚಾರ ವ್ಯವಸ್ಥೆ ಸುಗಮವಾಗಲಿದೆ’ ಎಂದು ಹೇಳಿದರು.
‘ಈ ಹೆದ್ದಾರಿಯು ಶಿಡ್ಲಘಟ್ಟ, ಹೊಸಕೋಟೆ, ಕೋಲಾರ ಹಾಗೂ ಮಾಲೂರು ಸೇರಿದಂತೆ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಹಾದು ಹೋಗಲಿದೆ. ಯೋಜನೆ ಮಾಡಿಸಿಕೊಳ್ಳಲು ನಾನು, ಶಾಸಕರಾದ ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ಶರತ್ ಬಚ್ಚೇಗೌಡ, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸಾಕಷ್ಟು ಪ್ರಯತ್ನ ಹಾಕಿದ್ದೇವೆ. ಮುಖ್ಯಮಂತ್ರಿ ಭೇಟಿಯಾಗಿ ಸಚಿವ ಸಂಪುಟದಲ್ಲಿ ಈ ವಿಷಯ ತರುವಂತೆ ಮನವಿ ಮಾಡಿದ್ದೆವು. ಅದಕ್ಕೆ ಸ್ಪಂದನೆ ಸಿಕ್ಕಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಲೋಕೋಪಯೋಗಿ ಸಚಿವರು ಹಾಗೂ ಎರಡೂ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.