ಮುಳಬಾಗಿಲು: ತಾಲ್ಲೂಕಿನಲ್ಲಿ ನೊಣಗಳ ಹಾವಳಿ ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸಲು ಜನರು ಹರಸಾಹಸ ಪಡುತ್ತಿದ್ದಾರೆ. ಹಾಗಾಗಿ ಸ್ಥಳೀಯ ಆಡಳಿತಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಾಮಾನ್ಯವಾಗಿ ಮಾವಿನಹಣ್ಣಿನ ಋತುವಿನಲ್ಲಿ ಎಲ್ಲಾ ಕಡೆ ನೊಣಗಳ ಹಾವಳಿ ಇರುತ್ತದೆ. ಆದರೆ ಮನೆಗಳ ಎಲ್ಲಾ ಸಾಮಾನು, ಆಹಾರ ತಿನಿಸು, ಕಾಂಪೌಂಡ್, ಗೋಡೆ ಹೀಗೆ ಎಲ್ಲೆಡೆ ಗುಂಪು ಗುಂಪಾಗಿ ಕೂರುತ್ತಿವೆ.
ಇನ್ನು ಹಾಲಿನ ಕ್ಯಾನ್, ಟೀ, ಕಾಫಿ ಲೋಟ, ಸಿಹಿ ಪದಾರ್ಥಗಳ ಮೇಲೆ ಹೀಗೆ ಎಲ್ಲೆಂದರಲ್ಲಿ ನೊಣಗಳು ಕೂರುತ್ತಿದ್ದು, ಇದರ ನಿಯಂತ್ರಣಕ್ಕೆ ಪೆನಾಯಿಲ್ ಹಾಗೂ ಇನ್ನಿತರೆ ರಾಸಾಯನಿಕ ವಸ್ತುಗಳನ್ನು ಸಿಂಪಡಿಸಿ ನೊಣಗಳ ನಿಯಂತ್ರಕ್ಕೆ ಹರಸಾಹಸ ಪಡುತ್ತಿದ್ದಾರೆ.
ಆಹಾರ ಸೇವಿಸಲು ತಟ್ಟೆ ಊಟ ಹಾಕಿಕೊಂಡ ತಕ್ಷಣ ಊಟದ ಮೇಲೆಯೇ ನೊಣಗಳು ಕೂರುತ್ತಿದ್ದು, ಜನ ರೋಗ ಭೀತಿಯ ಆತಂಕದಲ್ಲಿದ್ದಾರೆ. ಹಾಗಾಗಿ ಕೂಡಲೇ ನಗರದಲ್ಲಿ ನಗರಸಭೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಆಯಾಯ ಗ್ರಾಮ ಪಂಚಾಯಿತಿಗಳು ಫಾಗಿಂಗ್ ಅಥವಾ ಬ್ಲೀಚಿಂಗ್ ಪೌಡರ್, ಮತ್ತಿತರರ ವಸ್ತುಗಳನ್ನು ಸಿಂಪಡಿಸಿ ಸೊಳ್ಳೆ ನಿಯಂತ್ರಣಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.
ಮಾಂಸ ಅಥವಾ ದಿನನಿತ್ಯದ ವಸ್ತುಗಳ ಮೇಲೆ ನೊಣಗಳು ಕುಳಿತು ಮೊಟ್ಟೆ ಇಡುತ್ತಾ ಮತ್ತಷ್ಟು ನೊಣಗಳು ಉತ್ಪತ್ತಿಯಾಗುತ್ತಿವೆ. ಇದರಿಂದ ದಿನೇ ದಿನೇ ನೊಣಗಳನ್ನು ನಿಯಂತ್ರಿಸಲಾಗದೆ ಜನರು ಚಿಂತಿತರಾಗಿದ್ದಾರೆ. ಹಾಗಾಗಿ ನೊಣಗಳ ನಿಯಂತ್ರಣಕ್ಕೆ ಒತ್ತಾಯಿಸಿದ್ದಾರೆ.
ಜನರಲ್ಲಿ ಜಾಗೃತಿ ಮೂಡಿಸಲಾಗುವುದು
ಮಾವಿನಹಣ್ಣಿನ ಋತುಮಾನ ಹಾಗೂ ಕೆಲವು ಕಡೆ ಕೋಳಿ ಫಾರಂಗಳಿಂದಾಗಿ ನೊಣಗಳ ಹಾವಳಿ ಹೆಚ್ಚಾಗಿದೆ. ಹಾಗಾಗಿ ಆರೋಗ್ಯ ಇಲಾಖೆ ಹಾಗೂ ಪಂಚಾಯಿತಿ ಸಹಯೋಗದೊಂದಿಗೆ ಎಂಟು ದಿನ ವಿಶೇಷ ಯೋಜನೆ ಹಮ್ಮಿಕೊಂಡು ಎಲ್ಲಾ ಹಳ್ಳಿಗಳ ಚರಂಡಿ ನೀರು ನಿಲ್ಲುವ ವಸ್ತುಗಳ ಸ್ವಚ್ಛತೆ ಮಾಡಿಸಿ ಬೀಚಿಂಗ್ ಪೌಡರ್ ಹಾಗೂ ಫಾಗಿಂಗ್ ಮಾಡಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಕೆ.ಸರ್ವೇಶ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.