ಕೋಲಾರ: ‘ಈಚೆಗೆ ಕೊಲೆಯಾದ ಚಿತ್ರದುರ್ಗದ ರೇಣುಕಸ್ವಾಮಿ ಅವರ ಕುಟುಂಬಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಪರಿಹಾರ ನೀಡಿದ್ದು ತಪ್ಪು. ಏಕೆಂದರೆ ರೇಣುಕಸ್ವಾಮಿ ಮಂಡಳಿಯ ಸದಸ್ಯರಲ್ಲ. ಬೇಕಾದರೆ ಅಧ್ಯಕ್ಷರು ತಮ್ಮ ಜೇಬಿನಿಂದ ಕೊಡಲಿ, ಮಂಡಳಿ ಹಣ ನೀಡಬಾರದಿತ್ತು. ನಟ ದರ್ಶನ ವಿರುದ್ಧದ ಹಳೆಯ ಸೇಡಿನಿಂದ ಅವರು ಈ ರೀತಿ ಮಾಡಿದ್ದಾರೆ’ ಎಂದು ಕನ್ನಡ ಫಿಲಂ ಚೇಂಬರ್ ಅಧ್ಯಕ್ಷ ಎಂ.ಎಸ್.ರವೀಂದ್ರ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕನ್ನಡ ಚಲನಚಿತ್ರ ರಂಗ ಮುಳುಗುವ ಹಂತ ತಲುಪಿದ್ದು, ಈಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸದಸ್ಯತ್ವ ದುಬಾರಿಯಾಗಿದ್ದು, ಯಾರಿಗೂ ನೀಡುತ್ತಿಲ್ಲ. ಹೊಸ ಕಲಾವಿದರಿಗೆ, ಸದಸ್ಯರಾಗಬೇಕೆಂದವರಿಗೆ ಅನ್ಯಾಯ ಮಾಡುತ್ತಿದೆ’ ಎಂದು ದೂರಿದರು
‘ಸಿನಿಮಾ ಕ್ಷೇತ್ರದ ಎಲ್ಲ ವಿಭಾಗದವರನ್ನೂ, ಕಲಾವಿದರನ್ನೂ ಒಳಗೊಂಡಂತೆ ಕನ್ನಡ ಫಿಲಂ ಚೇಂಬರ್ ಎಂಬ ಹೊಸ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ಬಡ ಕಲಾವಿದರಿಗೆ ಸಹಾಯ ಮಾಡುವ ಉದ್ದೇಶದಿಂದ ಸಂಘ ಸ್ಥಾಪನೆ ಮಾಡಲಾಗಿದೆ’ ಎಂದು ತಿಳಿಸಿದರು.
‘ನಮ್ಮಲ್ಲಿ ಈಗಾಗಲೇ 450 ಸದಸ್ಯರು ಇದ್ದಾರೆ. ನೋಂದಣಿ ಶುಲ್ಕ ಕೇವಲ ₹ 2 ಸಾವಿರ. ಸಿನಿಮಾಗೆ ಸಂಬಂಧಪಟ್ಟ ಕಲಾವಿದರು, ನಿರ್ದೇಶಕರು, ಕ್ಯಾಮೆರಾಮೆನ್, ಸಂಗೀತ, ನೃತ್ಯ, ಸಾಹಸ ಕಲಾವಿದರಿಗೂ ಸದಸ್ಯತ್ವ ನೀಡಲಾಗುವುದು. ಕನ್ನಡ ಫಿಲಂ ಚೇಂಬರ್ ಚುನಾವಣೆಯಲ್ಲಿ ಮತದಾನ ಮಾಡುವ ಅರ್ಹತೆ ಹೊಂದಿದ್ದು, ಸ್ಪರ್ಧೆಯನ್ನು ಮಾಡಬಹುದು’ ಎಂದರು.
ಇದೇ ಸಂದರ್ಭದಲ್ಲಿ ಅವರು ಚೇಂಬರ್ನ ಪೋಸ್ಟರ್ ಬಿಡುಗಡೆ ಮಾಡಿದರು. ಚೇಂಬರ್ನ ಆಂಜಿನಪ್ಪ, ಹೇಮಲತಾ, ಸದಸ್ಯರು, ಕಲಾವಿದರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.