ADVERTISEMENT

ಕೆಜಿಎಫ್ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಕಟ್ಟಡ: ಅನೈತಿಕ ಚಟುವಟಿಕೆಗಳ ತಾಣ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 7:06 IST
Last Updated 5 ಏಪ್ರಿಲ್ 2024, 7:06 IST
ಕೆಜಿಎಫ್ ಸ್ವಾಮಿನಾಥಪುರಂನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಟ್ಟಡ ಸ್ಥಿತಿ
ಕೆಜಿಎಫ್ ಸ್ವಾಮಿನಾಥಪುರಂನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಟ್ಟಡ ಸ್ಥಿತಿ   

ಕೆಜಿಎಫ್: ನಗರದ ಸ್ವಾಮಿನಾಥಪುರಂನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ಗೃಹ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಕೆಜಿಎಫ್ ಹೊಸದಾಗಿ ತಾಲ್ಲೂಕು ರಚನೆಯಾದ ಮೇಲೆ ಸರ್ಕಾರದಿಂದ ತಾಲ್ಲೂಕು ಪಂಚಾಯಿತಿ ಕಚೇರಿ ಸ್ಥಾಪನೆಗೆ ಅನುಮತಿ ಸಿಕ್ಕಿತು. ತುರ್ತಾಗಿ ಕಚೇರಿಯನ್ನು ಸ್ಥಾಪಿಸಬೇಕಾಗಿದ್ದರಿಂದ ನಗರದ ಸ್ವಾಮಿನಾಥಂಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಹಾಸ್ಟೆಲ್ ಅನ್ನು ಕಚೇರಿ ಸಮುಚ್ಚಯ ಮಾಡಿಕೊಳ್ಳಲು ಜಿಲ್ಲಾಡಳಿತ ನಿರ್ಧಾರ ತೆಗೆದುಕೊಂಡಿತು. ಅದರಂತೆ ಬಹುತೇಕ ಇಲಾಖೆಗಳು ಇಲ್ಲಿಗೆ ವರ್ಗಾವಣೆಯಾದವು. ನಂತರ ಪಾರಾಂಡಹಳ್ಳಿಯಲ್ಲಿ ಹೊಸದಾಗಿ ತಾಲ್ಲೂಕು ಪಂಚಾಯಿತಿ ಕಟ್ಟಡ ನಿರ್ಮಾಣವಾಯಿತು. ಹೊಸ ಕಟ್ಟಡಕ್ಕೆ ತಾಲ್ಲೂಕು ಪಂಚಾಯಿತಿ ವರ್ಗಾವಣೆಯಾಯಿತು. ಆದ ಕೆಲ ದಿನಗಳ ನಂತರ ಹೊಸದಾಗಿ ತಾಲ್ಲೂಕು ಆಡಳಿತ ಕಚೇರಿ ಕೂಡ ನಿರ್ಮಾಣಗೊಂಡು, ಸಮಾಜ ಕಲ್ಯಾಣ, ಅರಣ್ಯ, ಸೇರಿದಂತೆ ಬಹುತೇಕ ಕಚೇರಿಗಳು ಅಲ್ಲಿಗೆ ವರ್ಗಾವಣೆಯಾದವು.

ಆದರೆ, ಕೃಷಿ, ರೇಷ್ಮೆ, ತೋಟಗಾರಿಕೆ ಇಲಾಖೆಗೆ ಸರ್ಕಾರದಿಂದ ಸ್ವತಂತ್ರ ಹುದ್ದೆ ನೇಮಕವಾಗದ ಕಾರಣ ಅವುಗಳು ಮಾತ್ರ ವರ್ಗಾವಣೆಯಾಗಲೇ ಇಲ್ಲ. ಕೇವಲ ನಾಮಫಲಕಕ್ಕೆ ಈ ಮೂರು ಇಲಾಖೆಗಳು ಸೀಮಿತಗೊಂಡಿದ್ದವು. ಬಂಗಾರಪೇಟೆಯಲ್ಲಿರುವ ಸಹಾಯಕ ನಿರ್ದೇಶಕರ ಕಚೇರಿಯಿಂದಲೇ ಎಲ್ಲಾ ವ್ಯವಹಾರಗಳು ನಡೆಯುತ್ತಿದ್ದವು. ಕೃಷಿಗೆ ಸಂಬಂಧಿಸಿದ ಮೂರು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಕಾರಣ, ಕೊನೆ ಪಕ್ಷ ತಮಗೆ ಮಂಜೂರಾಗಿದ್ದ ಕೊಠಡಿಯ ಬಾಗಿಲನ್ನು ಕೂಡ ಈ ಇಲಾಖೆಗಳು ತೆಗೆಯಲಿಲ್ಲ. ತಾಲ್ಲೂಕು ಆಡಳಿತ ಸೌಧ ನಿರ್ಮಾಣವಾದ ಮೇಲೆ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ನಾಮಫಲಕಗಳು ಕಾಣೆಯಾದವು.

ADVERTISEMENT

ಎಲ್ಲಾ ಇಲಾಖೆಗಳು ಒಂದರ ನಂತರ ಒಂದು ಕಚೇರಿ ಪ್ರಾಂಗಣವನ್ನು ಖಾಲಿ ಮಾಡಿದ ಮೇಲೆ, ಅದಕ್ಕೆ ಬೀಗ ಜಡಿಯಲಾಯಿತು. ಯಾರೂ ಓಡಾಡದ ಕಾರಣ, ಪೊದೆಗಳು ಬೆಳೆದುಕೊಂಡವು. ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಬಹುತೇಕ ಎಲ್ಲಾ ಕಚೇರಿಗಳು ತಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗಿವೆ. ಆದರೆ ಅರಣ್ಯ ಇಲಾಖೆ ಮಾತ್ರ ಕೆಲ ವಸ್ತುಗಳನ್ನು ಕೊಠಡಿಯಲ್ಲಿ ಇಟ್ಟುಕೊಂಡಿದ್ದು, ಅದರ ಬೀಗ ಕೊಟ್ಟಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಮೂಲಗಳು ತಿಳಿಸಿವೆ.

ಹೆಸರಿಗೆ ಮಾತ್ರ ಇರುವ ರೇಷ್ಮೆ ಇಲಾಖೆಯ ನಾಮಫಲಕ

ಕಟ್ಟಡ ದುರಸ್ಥಿಗೊಳಿಸಿ ಉಪಯೋಗಿಸಲು ತೀರ್ಮಾನ

ಕಟ್ಟಡವು ಈಗ ಉಪಯೋಗದಲ್ಲಿ ಇಲ್ಲ. ಅದರಲ್ಲಿ ಬಾಲಕಿಯರಿಗೆ ಹಾಸ್ಟೆಲ್‌ ಮಾಡುವ ಯೋಚನೆ ಇದೆ. ಆದರೆ ಪಕ್ಕದಲ್ಲಿಯೇ ಬಾಲಕರ ಹಾಸ್ಟೆಲ್ ಇರುವುದರಿಂದ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪಾರಾಂಡಹಳ್ಳಿಯಲ್ಲಿರುವ ಫ್ರಿ ಮೆಟ್ರಿಕ್ ಹಾಸ್ಟೆಲ್ ಕೂಡ ಇಲ್ಲಿಗೆ ವರ್ಗಾವಣೆ ಮಾಡುವ ಯೋಚನೆ ಇದೆ. ಆದರೆ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ದೂರವಾಗುತ್ತದೆ ಎಂಬ ಅಳಕು ಇದೆ. ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದು ಈಗಿರುವ ಕಟ್ಟಡವನ್ನು ದುರಸ್ತಿಗೊಳಿಸಿ ಸಮಾಜ ಕಲ್ಯಾಣ ಇಲಾಖೆಗೆ ಉಪಯೋಗಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಶಿವಾರೆಡ್ಡಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.