ಮಾಲೂರು: ಮಳೆ ಬಂದರೆ ಸೋರುವ ಕಟ್ಟಡ, ಯಾವಾಗ ಕುಸಿಯುತ್ತದೆಯೋ ಆತಂಕದಿಂದ ಶಿಥಿಲ ಕಟ್ಟಡದಲ್ಲಿ ಸ್ಥಳಾವಕಾಶವು ಇಲ್ಲದೆ ನಿಂತು ಓದುತ್ತಿರುವ ವಿದ್ಯಾರ್ಥಿಗಳು...
ಇದು ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಚಿತ್ರಣ.
ಸಾರ್ವಜನಿಕ ಗ್ರಂಥಾಲಯಕ್ಕೆ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಸುಸಜ್ಜಿತ ಕಟ್ಟಡಬೇಕೆಂಬ ಇಲ್ಲಿನ ಜನರ ದಶಕದ ಬೇಡಿಕೆಗೆ ಸ್ಥಳೀಯರು ಜನಪಪ್ರತಿನಿಧಿಗಳಾಗಲಿ ಹಾಗೂ ಅಧಿಕಾರಿಗಳಾಗಲಿ ಕಿವಿಯಾಗಿಲ್ಲ. ಇದರಿಂದ ಶಿಥಿಲಗೊಂಡ ಕಟ್ಟಡದೊಳಗೆ ಕಿರಿದಾದ ಜಾಗದಲ್ಲಿ ವಿದ್ಯಾರ್ಥಿಗಳು ಕಷ್ಟಪಟ್ಟು ಓದುವ ದುಸ್ಥಿತಿ ಇದೆ. ಇನ್ನೂ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಜೋಡಿಸಲು ಸೂಕ್ತ ಜಾಗವಿಲ್ಲದೆ ಪುಸ್ತಕಗಳನ್ನು ಮೂಟೆ ಕಟ್ಟಿ ಇಡಲಾಗಿದೆ.
50 ವರ್ಷಗಳ ಇತಿಹಾಸ ಹೊಂದಿರುವ ಈ ಗ್ರಂಥಾಲಯ ಕಟ್ಟಡ ಜನಪ್ರತಿನಿದಿಗಳ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಕುಸಿಯುವ ಹಂತ ತಲುಪಿದೆ.
ಪಟ್ಟಣದ ಹಳೆ ಎಸ್ ಬಿಎಂ ಬ್ಯಾಂಕ್ ಬಳಿ ಖಾಸಗಿ ಸಂಕಿರ್ಣದಲ್ಲಿ 1970ರಲ್ಲಿ ಸಾರ್ವಜನಿಕ ಗ್ರಂಥಾಲಯ ಆರಂಭವಾಯಿತು. ನಂತರ ಹಳೆ ಕೋರ್ಟ್ ಕಟ್ಟಡಕ್ಕೆ ಸ್ಥಳಾಂತರವಾಯಿತು. 1995ರಲ್ಲಿ ಗ್ರಂಥಾಲಯ ಸ್ವಂತ ಕಟ್ಟಡ ಹೊಂದಿತು. ಆದರೆ ಅಂದಿನಿಂದಲೂ ಕಟ್ಟಡದ ಚಾವಣಿ ಸೋರುತ್ತಿದೆ.
ಗ್ರಂಥಾಲಯದಲ್ಲಿ ಕುಡಿಯುವ ನೀರು, ಶೌಚಾಲಯ ಇಲ್ಲ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಇಲ್ಲಿನ ಓದುಗ ಬಳಗ ನಲುಗಿದೆ.
ಸರ್ಕಾರ ಪತ್ರಿ ವರ್ಷ ಗ್ರಂಥಾಲಯಗಳಿಗೆ ಲಕ್ಷಂತಾರ ಮೌಲ್ಯದ ಪುಸ್ತಕಗಳನ್ನು ಪೂರೈಸುತ್ತಿದೆ. ಆದರೆ ಇಲ್ಲಿ ಪೂರೈಕೆಯಾದ ಪುಸ್ತಕಗಳು ಕಟ್ಟಡ ಶಿಥಿಲವಾಗಿರುವ ಕಾರಣ ಕಪಾಟುಗಳಲ್ಲಿ ತುಂಬಿಡಲಾಗುತ್ತಿದೆ. ಹೆಚ್ಚು ಬೆಲೆ ಪುಸ್ತಕಗಳನ್ನು ಸ್ಥಳವಿಲ್ಲದೆ ಮೂಟೆಗಳಲ್ಲಿ ತುಂಬಿಸಿ ಇಡಲಾಗಿದ್ದು, ಓದುಗರಿಂದ ದೂರ ಉಳಿದಿವೆ.
ಗ್ರಂಥಾಲಯದಲ್ಲಿ ಮಕ್ಕಳು ಓದಲು ಯಾವು ಪುಸ್ತಕಗಳು ಇಲ್ಲ. 1900 ಜನರು ಗ್ರಂಥಾಲಯ ಸದಸ್ಯತ್ವ ಪಡೆದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪುಸ್ತಕಗಳು ಕೂಡ ಇಲ್ಲ.
ಗ್ರಂಥಾಲಯದಲ್ಲಿ ಕೇವಲ 15 ಆಸನಗಳ ವ್ಯವಸ್ಥೆ ಮಾತ್ರ ಇದೆ. ಹೆಚ್ಚು ಜನರು ಬಂದರೆ ನಿಂತು ಓದಬೇಕಾದ ಸ್ಥಿತಿ ಇದೆ.
ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿರುವ ನೂರಾರು ಯುವಕರು ದಿನ ಪತ್ರಿಕೆಗಳು ಮತ್ತು ಅಗತ್ಯ ಪುಸ್ತಕ ಅಭ್ಯಾಸ ಮಾಡಲು ಗ್ರಂಥಾಲಯಕ್ಕೆ ಬರುತ್ತಾರೆ. ಆದರೆ ಕುಳಿತುಕೊಳ್ಳುವ ಆಸನ, ಕುಡಿಯುವ ನೀರು, ಶೌಚಾಲಯ ಹಾಗೂ ಸಮರ್ಪಕ ವಿದ್ಯುತ್ ಸೌಕರ್ಯ ಇಲ್ಲ. ತೊಂದರೆ ಅನುಭವಿಸುತ್ತಿದ್ದಾರೆ.
ಗ್ರಂಥಾಲಯ ನಿವೇಶನ ನೀಡಿ ಖಾತೆ ಮಾಡಿಕೊಡಲು ಪುರಸಭೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಪ್ರಕ್ರಿಯೆ ಮುಗಿದ ತಕ್ಷಣ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಲಾಗುವುದು. ಸಿ .ಗಣೇಶ್ ಉಪನಿರ್ದೇಶಕ ಜಿಲ್ಲಾ ಗ್ರಂಥಾಲಯ
ಗ್ರಂಥಾಲಯ ಗುರುತಿಸುವುದು ಕಷ್ಟ ಪಟ್ಟಣದ ಚಿಲ್ಲರೆ ತರಕಾರಿ ಮಾರುಕಟ್ಟೆಯ ಬಳಿ ಗ್ರಂಥಾಲಯ ಇರುವುದರಿಂದ ಸದಾ ಗಿಜಿಗುಡುವ ಸದ್ದು ಇರುತ್ತದೆ. ಗ್ರಂಥಾಲಯ ಕಟ್ಟಡವನ್ನು ತರಕಾರಿ ಅಂಗಡಿಗಳು ಆವರಿಸಿರುವುದರಿಂದ ಗ್ರಂಥಾಲಯ ಕಟ್ಟಡ ಗುರುತಿಸುವುದು ಕಷ್ಟವಾಗುತ್ತಿದೆ. ಸಮೀಪದಲ್ಲಿಯೇ ಕೋಳಿ ಅಂಗಡಿ ಇರುವುದರಿಂದ ದುರ್ವಾಸನೆಗೆ ಮೂಗು ಮುಚ್ಚಿಕೊಂಡು ಓದುವಂತಾಗಿದೆ. ಉಪಗ್ರಂಥಾಲಯ ಆರಂಭಿಸಿ ಪಟ್ಟಣದ ಸಮತಾ ನಗರ ಇಂದಿರಾ ನಗರ ಲಕ್ಷ್ಮಿ ಬಡಾವಣೆ ಮತ್ತು ಅಶೋಕ್ ನಗರ ಸೆರಿದಂತೆ ರೈಲ್ವೆ ಬಡಾವಣೆಯಲ್ಲಿ ಪಟ್ಟಣದ 252627ನೇ ವಾರ್ಡ್ ವ್ಯಾಪ್ತಿಯಲ್ಲಿ ಹೆಚ್ಚಾಗಿ ಬಡವರು ಕೂಲಿ ಕಾರ್ಮಿಕರು ಹೆಚ್ಚು ವಾಸವಾಗಿದ್ದಾರೆ. ಪೋಷಕರು ಕೂಲಿಗೆ ತೆರಳಿದ ಸಂಧರ್ಭದಲ್ಲಿ ಮಕ್ಕಳು ಶಾಲೆ ಮುಗಿಸಿ ಪೋಷಕರು ಬರುವ ತನಕ ಮನೆಗಲ ಬಳಿ ಕಾಲ ಹರಣ ಮಾಡುತ್ತಿರುತ್ತಾರೆ. ಅದರಿಂದ ಈ ಬಡಾವಣೆಗಳಲ್ಲಿ ಸರ್ಕಾರ ಉಪ ಗ್ರಂಥಾಲಯ ಪ್ರಾರಂಭಿಸಬೇಕು ಎಂದು ಹಿರಿಯ ಓದುಗ ಸದಸ್ಯರು ಒತ್ತಾಯವಾಗಿದೆ. *** ನೋವಿನ ಸಂಗತಿ 60 ಸಾವಿರಕ್ಕೂ ಹೆಚ್ಚು ಕುಟುಂಬಗಳು ಇರುವ ಪಟ್ಟಣದಲ್ಲಿ ಸುಸಜ್ಜಿತ ಗ್ರಂಥಾಲಯ ಇಲ್ಲದಿರುವುದು ನೋವಿನ ಸಂಗತಿ. ವಿದ್ಯಾರ್ಥಿಗಳು ನಿವೃತ್ತ ಅಧಿಕಾರಿಗಳು ಮಹಿಳೆಯರು ಸೇರಿದಂತೆ ಓದುಗರಿಗೆ ಕುಳಿತು ಓದುವ ಸೌಕರ್ಯ ಇಲ್ಲದ್ದಾಗಿದೆ. ಅದ್ದರಿಂದ ಸುಸಜ್ಜಿತ ಗ್ರಂಥಾಲಯ ನಿರ್ಮಾಣ ಮಾಡಬೇಕು. ಡಾ.ನಾ.ಮುನಿರಾಜು ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.