ಟೇಕಲ್: ಕೋಲಾರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕೋಲಾರ ಹಾಲು ಒಕ್ಕೂಟ ಸಹಯೋಗದಲ್ಲಿ ಚರ್ಮ ಗಂಟು ರೋಗದ ವಿರುದ್ಧ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಚರ್ಮ ಗಂಟು ರೋಗ ಜಾನುವಾರುಗಳಿಗೆ ಮಾರಕ ಕಾಯಿಲೆಯಾಗಿದ್ದು, ಇದನ್ನು ತಡೆಗಟ್ಟಲು ಸರ್ಕಾರದ ವತಿಯಿಂದ ಉಚಿತ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಪ್ರತಿಯೊಬ್ಬ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಎಂದು ತಿಳಿಸಿದರು.
ರೋಗ ತಡೆಗಟ್ಟಲು ರೈತರು ಜಾನುವಾರುಗಳನ್ನು ಸರಿಯಾಗಿ ಹಾರೈಕೆ ಮಾಡಬೇಕು. ದನದ ಕೊಟ್ಟಿಗೆಯನ್ನು ಸ್ವಚ್ಛವಾಗಿ ನೋಡಿಕೊಳ್ಳಬೇಕು. ಸೊಳ್ಳೆ, ನೊಣ ಬಾರದಂತೆ ಎಚ್ಚರಿಕೆ ವಹಿಸಬೇಕು. ರೋಗ ಬಂದರೆ ಜಾನುವಾರುಗಳು ಜೊಲ್ಲು ಸುರಿಸುತ್ತವೆ ಹಾಗೂ ಹಾಲು ಉತ್ಪಾದನೆ ಕಡಿಮೆಯಾಗುತ್ತದೆ ಎಂದರು.
ಕೋಲಾರ ಪಶುಪಾಲನಾ ಇಲಾಖೆ ಉಪನಿರ್ದೇಶಕ ಜಿ.ಪಿ.ರಾಮಯ್ಯ ಮಾತನಾಡಿ, ಜಾನುವಾರುಗಳಲ್ಲಿ ಕಂಡು ಬರುವ ಚರ್ಮಗಂಟು ರೋಗ ತಡೆಗಟ್ಟಲು ಜಿಲ್ಲೆಯಾದ್ಯಂತ ಜೂನ್ 20 ರಿಂದ ಜುಲೈ 20 ರವರೆಗೆ ಉಚಿತ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 2,35,000 ರಾಸುಗಳಿವೆ ಪಶುಪಾಲನೆ ಇಲಾಖೆ ಹಾಗೂ ಹಾಲು ಒಕ್ಕೂಟದ ವತಿಯಿಂದ 200 ಮಂದಿ ಲಸಿಕೆದಾರರು ಬೆಳಗ್ಗೆ 6 ರಿಂದ ಮನೆ ಬಳಿಗೆ ಬಂದು ಲಸಿಕೆ ಹಾಕುತ್ತಾರೆ. ಜತೆಗೆ ಮಳೆಗಾಲದಲ್ಲಿ ಕುರಿಗಳಿಗೆ ಕರಳು ಬೇನೆ, ನೀಲಿ ನಾಲಿಗೆ ರೋಗ ಬಾರದಂತೆ ಸುಮಾರು 5,77,000 ಕುರಿಗಳಿಗೆ ಲಸಿಕೆ ಹಾಕಲಾಗುತ್ತದೆ ಎಂದು ತಿಳಿಸಿದರು.
ರತ್ನಮ್ಮ ನಂಜೇಗೌಡ ,ಗಿರೀಶ್ ಗೌಡ, ವೀಣಾ ಹಾಗೂ ಪಶು ವೈದ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.