ಕೋಲಾರ: ‘ಕನ್ನಡ ನಾಡಿನಲ್ಲಿ ಕನ್ನಡದ ಮೊದಲ ರಾಜವಂಶ ಕದಂಬರದ್ದಾಗಿದ್ದು, ನಾಡಿಗೆ ಇವರ ಕೊಡುಗೆ ಅನನ್ಯವಾದುದು’ ಎಂದು ಉಪನ್ಯಾಸಕ ಜೆ.ಜಿ.ನಾಗರಾಜ್ ತಿಳಿಸಿದರು.
ನಗರದ ಜಯ ಕರ್ನಾಟಕ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಕನ್ನಡದ ರಾಜವಂಶ ಕದಂಬರು’ ಒಂದು ನೆನಪು ಕಾರ್ಯಕ್ರಮದಲ್ಲಿ ‘ಕದಂಬ ಮಯೂರ ಶರ್ಮ’ ಪುಸ್ತಕವನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಈ ನೆಲದಲ್ಲಿ ಮೊದಲು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಆದೇಶಿಸಿ ಕನ್ನಡದ ಆಳ್ವಿಕೆಯನ್ನು ಮಾಡಿದ ಮೊದಲ ರಾಜವಂಶ ಕದಂಬರದ್ದಾಗಿದೆ. ಸ್ಕಂಧ ಎಂಬ ಕನ್ನಡ ನಾಣ್ಯವನ್ನು ಚಲಾವಣೆಗೆ ತಂದಿದ್ದು, ಈ ವಿಚಾರ ಇಂದಿನ ಪೀಳಿಗೆಗೆ ಅರ್ಥವಾಗಬೇಕಾಗಿದೆ, ಕನ್ನಡದ ಪ್ರೀತಿ ಗಟ್ಟಿಗೊಳ್ಳಬೇಕಾಗಿದೆ’ ಎಂದರು.
‘ಡಾ.ರಾಜ್ಕುಮಾರ್ ನಟಿಸಿದ ಮಯೂರ ಸಿನಿಮಾ ಕದಂಬರ ಮಯೂರ ವರ್ಮನ ಇತಿಹಾಸವನ್ನು ನೆನಪಿಸುವಂತಹದ್ದಾಗಿದೆ. ಇದರಿಂದ ನಾಡಿನಲ್ಲಿ ಕನ್ನಡ ಅಭಿಮಾನ ಹೆಚ್ಚಾಯಿತು’ ಎಂದು ತಿಳಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್.ತ್ಯಾಗರಾಜ್, ‘ಕದಂಬ ವಂಶದ ಮಯೂರ ವರ್ಮ ಸಾಮ್ರಾಜ್ಯ ಸ್ಥಾಪಿಸಿದ ದಿನ ಮೇ 28. ಈ ದಿನವನ್ನು ಕನ್ನಡ ದೇಶದ ಏಕೀಕರಣ ದಿನವನ್ನಾಗಿ ಜಯ ಕರ್ನಾಟಕ ಸಂಘಟನೆಯಿಂದ ರಾಜ್ಯದಾದ್ಯಂತ ಆಚರಿಸಲಾಗುತ್ತಿದೆ. ಎರಡು ಶತಮಾನ ಕನ್ನಡ ನಾಡನ್ನು ಆಳಿದ ಕದಂಬ ರಾಜವಂಶವನ್ನು ನೆನಪಿಸುವ ಕಾರ್ಯಕ್ರಮವನ್ನು ರೂಪಿಸಿರುವುದರ ಉದ್ದೇಶ ಇಂದಿನ ಕನ್ನಡಿಗರಿಗೆ ಕದಂಬರ ಕನ್ನಡ ಪ್ರೀತಿಯ ಬದ್ಧತೆ ಅರ್ಥೈಸುವುದಾಗಿದೆ’ ಎಂದರು.
‘ರಾಜ್ಯ ಸರ್ಕಾರವು ಕನ್ನಡದ ರಾಜವಂಶ ಕದಂಬರ ಆಳ್ವಿಕೆಯನ್ನು ನೆನಪಿಸಿಕೊಳ್ಳುವಂಥ ಕಾರ್ಯಕ್ರಮ ರೂಪಿಸಬೇಕು’ ಎಂದು ಹೇಳಿದರು.
ನಗರಸಭೆ ಸದಸ್ಯ ಎಂ.ಪ್ರಸಾದ್ ಬಾಬು, ಅಶ್ವಥ್ ನಾರಾಯಣಗೌಡ, ನಿವೃತ್ತ ಎಎಸ್ಐ ರವಿಂದ್ರನಾಥ್, ರಮೇಶ್ ಬಾಬು, ವಿ.ಸುಬ್ರಮಣಿ, ನಂದೀಶ್, ಕೆ.ಎನ್.ಮುನಿಕೃಷ್ಣ. ಎಂ.ಶಬರೀಶ್, ರವಿ ಕೀಲುಕೋಟೆ, ಕೆ.ಎಂ.ಶಿವಕುಮಾರ್, ಧನಂಜಯ, ಅಭಿಲಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.