ADVERTISEMENT

ಬಂಗಾರಪೇಟೆ: ಮಕ್ಕಳಿಗೆ ಆಸರೆ ‘ಕೂಸಿನ ಮನೆ’

ಬಂಗಾರಪೇಟೆ ತಾಲ್ಲೂಕಿನಲ್ಲಿ 16 ಮನೆಗಳಲ್ಲಿ ಕಾರ್ಯನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 7:11 IST
Last Updated 26 ಜೂನ್ 2024, 7:11 IST
   

ಬಂಗಾರಪೇಟೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕಳೆದ ಎರಡು ತಿಂಗಳಿನಿಂದ ತಾಲ್ಲೂಕಿನಲ್ಲಿ ಆರಂಭಿಸಲಾಗಿರುವ ‘ಕೂಸಿನ ಮನೆ’ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆಸರೆಯಾಗಿದ್ದು, ದಿನಕಳೆದಂತೆ ಪೋಷಕರ ಗಮನ ಸೆಳೆಯುತ್ತಿವೆ.

ತಾಲ್ಲೂಕಿನಲ್ಲಿ 16 ಕೂಸಿನ ಮನೆಗಳು ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಿದೆ. ಪ್ರತಿನಿತ್ಯ ಕೆಲಸಕ್ಕೆ ಹೋಗುವ ಪೋಷಕರು ತಮ್ಮ ಆರು ತಿಂಗಳಿಂದ ಮೂರು ವರ್ಷದ ಒಳಗಿನ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದಾರೆ. ಬೆಳಿಗ್ಗೆ 9.30 ರಿಂದ ಸಂಜೆ 4 ರವರೆಗೆ ಕೂಸಿನ ಮನೆ ಕಾರ್ಯನಿರ್ವಹಿಸುತ್ತಿದ್ದು, ಶಿಶು ಆರೈಕೆದಾರರು ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.

ಆರಂಭದಲ್ಲಿ ಮಕ್ಕಳು ನಿರೀಕ್ಷಿತ ಪ್ರಮಾಣದಲ್ಲಿ ಕೂಸಿನ ಮನೆಗೆ ದಾಖಲಾಗಿರಲಿಲ್ಲ. ಪಂಚಾಯಿತಿ ಸಿಬ್ಬಂದಿ ಹಾಗೂ ಶಿಶು ಆರೈಕೆದಾರರ ಜಾಗೃತಿ ಫಲವಾಗಿ ಈಗ ಮಹಿಳಾ ಕಾರ್ಮಿಕರು ಕೂಸಿನ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದಾರೆ. ಇದರಿಂದ ದಿನಕಳೆದಂತೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ.

ADVERTISEMENT

ಚಿಕ್ಕಅಂಕಂಡಹಳ್ಳಿ ಗ್ರಾಮ ಪಂಚಾಯಿತಿಯ ಚಿಕ್ಕಅಂಕಂಡಹಳ್ಳಿಯಲ್ಲಿ ಮೊದಲ ಕೂಸಿನ ಮನೆ ಪರಿಚಯ ಮಾಡಲಾಯಿತು. ಪ್ರಾರಂಭದಲ್ಲಿ ಕಾರ್ಮಿಕರ ಹತ್ತು ಮಕ್ಕಳು ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದರು. ಈಗ ಆ ಸಂಖ್ಯೆ 14ಕ್ಕೇರಿದೆ.

ಪುಟ್ಟ ಮಕ್ಕಳಿರುವ ಗ್ರಾಮೀಣ ಮಹಿಳೆಯರು ನೆಮ್ಮದಿಯಿಂದ ಮನೆ ಕೆಲಸ ಮಾಡಲು ಹಾಗೂ ಹೊರಗೆ ಹೋಗಿ ದುಡಿಯಲು ಕೂಸಿನ ಮನೆ ಅನುಕೂಲ ಮಾಡಿಕೊಟ್ಟಿವೆ.
ವಾಣಿ, ಪ್ರಭಾರ ತಾ.ಪಂ. ಸಹಾಯಕ ನಿರ್ದೇಶಕಿ

ಅಲಂಬಾಡಿ ಜೋತೇನಹಳ್ಳಿ, ಬಲಮಂದೆ, ಬೂದಿಕೋಟೆ, ದೋಣಿಮಡುಗು, ದೊಡ್ಡವಲಗಮಾದಿ, ಮಾಗೊಂದಿ, ಗುಲ್ಲಹಳ್ಳಿ, ಹುಲಿಬೆಲೆ, ಐನೋರ ಹೊಸಹಳ್ಳಿ, ಕಾಮಸಮುದ್ರ, ಹುನ್ಕುಂದ, ಮಾವಹಳ್ಳಿ, ಸೂಲಿಕುಂಟೆ, ತೊಪ್ಪನಹಳ್ಳಿ, ಯಳೇಸಂದ್ರ ಸೇರಿದಂತೆ ತಾಲ್ಲೂಕಿನ 16 ಗ್ರಾಮ ಪಂಚಾಯಿತಿಗಳಲ್ಲಿ ಕೂಸಿನ ಮನೆ ಪ್ರಾರಂಭವಾಗಿದೆ. ತಾಲ್ಲೂಕಿನ ಎಲ್ಲಾ ಕೂಸಿನಮನೆಗಳಲ್ಲಿ ಒಟ್ಟು 113 ಮಕ್ಕಳು ಹೋಗುತ್ತಿದ್ದಾರೆ.

ತಾಲ್ಲೂಕಿನ ಬಹುತೇಕ ಕೂಸಿನ ಮನೆಗಳಲ್ಲಿ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಿದೆ. ಕೆಸರನಹಳ್ಳಿ, ಡಿಕೆಹಳ್ಳಿ, ಚಿನ್ನಕೋಟೆ, ಕಾರಹಳ್ಳಿ ಮತ್ತು ಕೇತಗಾನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಕೂಸಿನ ಮನೆ ಪ್ರಾರಂಭವಾಗಲಿವೆ ಎಂದು ತಾಲ್ಲೂಕು ಪಂಚಾಯಿತಿ ಇಒ ರವಿಕುಮಾರ್ ತಿಳಿಸಿದ್ದಾರೆ.

ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬಗಳಾಗಿ ಬದಲಾಗಿರುವ ಸಮಾಜದಲ್ಲಿ ಕೆಲಸದ ಅವಶ್ಯಕತೆ ಹೆಚ್ಚಿದ್ದು, ಅಂತಹ ಪೋಷಕರಿಗೆ ಕೂಸಿನ ಮನೆ ಅನುಕೂಲವಾಗಿದೆ. ತಾಯಂದಿರು ತಮ್ಮ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಿ ತಾವು ಉತ್ತಮ ಆಹಾರ ಸೇವಿಸದೆ ಅಪೌಷ್ಠಿಕತೆಗೆ ಒಳಗಾಗುತ್ತಿದ್ದರು. ಈಗ ಮಕ್ಕಳಿಗೆ ಕೂಸಿನ ಮನೆಯಲ್ಲೇ ಪೌಷ್ಠಿಕ ಆಹಾರ ನೀಡುವುದರಿಂದ ತಾಯಂದಿರು ಪೌಷ್ಠಿಕ ಆಹಾರ ಸೇವಿಸಲು ಅವಕಾಶ ಸಿಗುತ್ತಿದೆ. ತಾಯಿ-ಮಗುವಿನ ಅಪೌಷ್ಠಿಕತೆ ನಿವಾರಣೆಯಾಗಲು ಕೂಸಿನ ಮನೆ ಯೋಜನೆಯು ಉತ್ತಮ ಮಾರ್ಗವಾಗಿದೆ ಎಂಬುದು ಅವರ ಮಾತಾಗಿದೆ.

ಗೋಡೆ ಮೇಲೆ ಬಗೆ ಬಗೆಯ ಚಿತ್ರ: 

ಕೂಸಿನ ಮನೆಯ ಗೋಡೆಗಳು ಬಗೆ ಬಗೆಯ ಚಿತ್ರಗಳಿಂದ ಮಕ್ಕಳ ಚಿತ್ತವನ್ನು ತಮ್ಮತ್ತ ಸೆಳೆಯುತ್ತಿವೆ. ಪ್ರಾಥಮಿಕ ಶಾಲೆ, ಅಂಗನವಾಡಿ ಕಾರ್ಯನಿರ್ವಹಿಸದ ಸರ್ಕಾರಿ ಕಟ್ಟಡಗಳಲ್ಲಿ ಸದ್ಯ ಕೂಸಿನ ಮನೆ ಕಾರ್ಯನಿರ್ವಹಿಸುತ್ತಿವೆ. ಕಟ್ಟಡಗಳ ಗೋಡೆ ಮೇಲೆ ಛೋಟಾ ಭೀಮ್, ಮೀನು, ಕಪ್ಪೆ, ಚಿಟ್ಟೆ, ಮರ, ಹಣ್ಣು, ಹಂಪಲುಗಳ ಚಿತ್ರಗಳಿವೆ. ಕನ್ನಡ, ಹಿಂದಿ, ಇಂಗ್ಲಿಷ್ ವರ್ಣಮಾಲೆ, ನಾಣ್ನುಡಿ ಹಾಗೂ ಜಾನಪದ ಗೀತೆಗಳೂ ಇಲ್ಲಿ ಸ್ಥಾನ ಪಡೆದುಕೊಂಡಿವೆ.

ಗ್ರಾಮ ಪಂಚಾಯಿತಿಗೆ ಒಂದರಂತೆ ಕೂಸಿನ ಮನೆ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ಆರೈಕೆಗೆ ಇಬ್ಬರು ಕೇರ್ ಟೇಕರ್ಸ್ ಕಾರ್ಯನಿರ್ವಹಿಸುತ್ತಾರೆ. ಮನೆಗೆ ದಾಖಲಾಗುವ ಮೂರು ವರ್ಷದೊಳಗಿನ ಮಕ್ಕಳಿಗೆ ನೀಡಬೇಕಾದ ಪೌಷ್ಠಿಕ ಆಹಾರವನ್ನು ಸಹ ನೀಡಲಾಗುತ್ತದೆ.

ಪಂಚಾಯಿತಿಯಿಂದ ಕೂಸಿನ ಮನೆ ಮಕ್ಕಳ ಆರೈಕೆಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ ಎಂಬುದು ಶಿಶು ಆರೈಕೆದಾರೆ ಸ್ವಾತಿ ಮಾತಾಗಿದೆ.

‘ನೆಮ್ಮದಿಯಿಂದ ಕೆಲಸಕ್ಕೆ ಹೋಗುತ್ತೇವೆ’

ಮಕ್ಕಳನ್ನು ಬಿಟ್ಟು ಕೆಲಸ ಹಾಗೂ ಹೊಲಕ್ಕೆ ಹೋಗಲು ಸಮಸ್ಯೆಯಾಗುತ್ತಿತ್ತು. ಈಗ ನೆಮ್ಮದಿಯಿಂದ ಕೆಲಸಕ್ಕೆ ಹೋಗುತ್ತಿದ್ದೇವೆ. ಕೂಸಿನ ಮನೆಯಲ್ಲಿ ನಮ್ಮ ಮಕ್ಕಳು ಸುರಕ್ಷಿತವಾಗಿ ಇರುತ್ತಾರೆ ಎಂಬ ವಿಶ್ವಾಸ ಮೂಡಿದೆ- ತೇಜಸ್ವಿ, ಪೋಷಕಿ

'ಯೋಜನೆ ಸದುಪಯೋಗವಾಗಲಿ’

ಪುಟ್ಟ ಮಕ್ಕಳಿರುವ ಮಹಿಳಾ ಕಾರ್ಮಿಕರಿಗೆ ಕೂಸಿನ ಮನೆಗಳು ಬಹಳ ಅನುಕೂಲಕರವಾಗಿವೆ. ಪುಟ್ಟ ಮಕ್ಕಳಿರುವ ಮಹಿಳಾ ಕಾರ್ಮಿಕರು ನರೇಗಾ ಯೋಜನೆಯಡಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಿ - ಚಿತ್ರಾ, ಪ್ರಭಾರ ತಾ.ಪಂ. ವ್ಯವಸ್ಥಾಪಕ ನಿರ್ದೇಶಕಿ ಬಂಗಾರಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.