ADVERTISEMENT

ಕಣಿವೇನಹಳ್ಳಿಗಿಲ್ಲ ಮೂಲ ಸೌಕರ್ಯ

ಈಗಲಾದರೂ ಸರ್ಕಾರ ನಮ್ಮ ಕಡೆ ಕಣ್ಬುಟ್ಟು ನೋಡಲಿ ಎಂಬುದು ಗ್ರಾಮಸ್ಥರ ಭರವಸೆ

ವಿ.ರಾಜಗೋಪಾಲ್
Published 12 ಡಿಸೆಂಬರ್ 2023, 7:28 IST
Last Updated 12 ಡಿಸೆಂಬರ್ 2023, 7:28 IST
ಮಾಲೂರು ತಾಲ್ಲೂಕಿನ ಕಣಿವೇನಹಳ್ಳಿಯಲ್ಲಿನ ಗುಡಿಸಲು ಮನೆ
ಮಾಲೂರು ತಾಲ್ಲೂಕಿನ ಕಣಿವೇನಹಳ್ಳಿಯಲ್ಲಿನ ಗುಡಿಸಲು ಮನೆ   

ಮಾಲೂರು: ರಸ್ತೆ, ಚರಂಡಿ, ವಿದ್ಯುತ್ ದೀಪ ಸೇರಿದಂತೆ ಮುಂತಾದ ಮೂಲ ಸೌಕರ್ಯ ಕೊರತೆಯಿಂದ ಕಣಿವೇನಹಳ್ಳಿ ಗ್ರಾಮದ ಜನತೆ ನಲುಗಿದ್ದಾರೆ.

ತಾಲ್ಲೂಕಿನ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೇನಹಳ್ಳಿ ಗ್ರಾಮದಲ್ಲಿ ಬಹುತೇಕ ಕೃಷಿ ಕಾರ್ಮಿಕ ವರ್ಗದ ಜನತೆ ವಾಸವಾಗಿದ್ದು, ಮೂಲ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ.

ಕಣಿವೇನಹಳ್ಳಿಯಲ್ಲಿ ಸುಮಾರು 328 ಮತದಾರರಿದ್ದು, 94 ಕುಟುಂಬಗಳು ವಾಸವಾಗಿದ್ದಾರೆ. ಗ್ರಾಮದಲ್ಲಿನ ಮನೆಗಳಿಗೆ ರಸ್ತೆ ಸೌಕರ್ಯವಿಲ್ಲದೆ, ದ್ವಿಚಕ್ರ ವಾಹನ ಸಹ ಮನೆಗಳ ಬಳಿ ಹೋಗಲು ತೊಂದರೆ ಪಡುವಂತಾಗಿದೆ. ಕಾಲು ದಾರಿಯಲ್ಲೇ ಸಾಗಿ ಮನೆ ಸೇರಬೇಕಾಗಿದೆ.

ADVERTISEMENT
ಕಣುವೇನಹಳ್ಳಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲ

ಗ್ರಾಮದ ಮದ್ಯ ಭಾಗದಲ್ಲಿ ಒಂದೇ ಒಂದು ಚರಂಡಿಯಿದ್ದು, ಅದರಲ್ಲಿ ಕಸ ತುಂಬಿ ಕೊಳಚೆ ನೀರು ಹರಿಯಲು ಸಾಧ್ಯವಾಗದೆ ಚರಂಡಿಯಲ್ಲೇ ನಿಂತಿದ್ದು, ಸೊಳ್ಳೆ ಕಾಟ ಹೆಚ್ಚಾಗಿದೆ. ಜತೆಗೆ ಮನೆ ಮುಂದೆಯೇ ಕೊಳಚೆ ನೀರು ಹರಿಯುತ್ತಿದ್ದು, ಮಕ್ಕಳು ಅದೇ ನೀರಲ್ಲಿ ಮಿಂದು ತೇಲುತ್ತಾರೆ.

ಹಾವುಗಳ ಕಾಟ: ಕಣುವೇನಹಳ್ಳಿಯ ಬಹತೇಕ ಮನೆಗಳಿಗೆ ರಸ್ತೆ ಸೇರಿದಂತೆ ವಿದ್ಯುತ್ ದೀಪಗಳ ಸೌಕರ್ಯವಿಲ್ಲ. ಸ್ವಚ್ಛತೆ ಇಲ್ಲದೆ ಮನೆ ಸುತ್ತಾ ಗಿಡಗಳು ಬೆಳೆದಿದ್ದು,  ಹಾವುಗಳ ಕಾಟ ಹೆಚ್ಚಗಿದೆ. ಸಂಜೆ ಆಗುತ್ತಿದ್ದಂತೆ ಪೋಷಕರು ತಮ್ಮ ಮಕ್ಕಳನ್ನು ಮನೆಯೊಳಗೆ ಹೊರಗೆ ಕಳುಹಿಸಲು ಭಯಪಡುವಂತಾಗಿದೆ.

ಗ್ರಾಮದಲ್ಲಿ ವಸತಿ ಸೌಕರ್ಯ ಇಲ್ಲದೇ ಗುಡಿಸಿಲಿನಲ್ಲಿ ಅನೇಕ ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಸರ್ಕಾರದವರು ಈಗಲಾದರೂ ಎಚ್ಚೆತ್ತು ಗ್ರಾಮಕ್ಕೆ ಮೂಲ ಸೌಕರ್ಯ ನೀಡಿ ಎಂಬುದು ಗ್ರಾಮಸ್ಥರ ಕೂಗಾಗಿದೆ.

ರಸ್ತೆ ಸೌಲಭ್ಯವಿಲ್ಲದೆ ಕಾಲು ದಾರಿಯೇ ಮುಖ್ಯ ರಸ್ತೆಯಾಗಿರುವುದು
ಮನೆಗಳಿಗೆ ರಸ್ತೆ ಇಲ್ಲ ವಿದ್ಯುತ್ ದೀಪ ಅಳವಡಿಸಿಲ್ಲ. ಗಿಡಗಳು ಹೆಚ್ಚಾಗಿದ್ದು ಹಾವುಗಳ ಕಾಟ ಹೆಚ್ಚಾಗಿದೆ. ಹಾಗಾಗಿ ಸಂಜೆ ಆಗುತ್ತಿದ್ದಂತೆ ಮಕ್ಕಳನ್ನು ಮನೆಯಿಂದ ಹೊರ ಬರದಂತೆ ಕಾಯಬೇಕಿದೆ.  
ರಾಣಿ ಕಣಿವೇನಹಳ್ಳಿ ಗ್ರಾಮದ ನಿವಾಸಿ
ಮನೆ ಹತ್ತಿರ ಬೈಕ್‌ ಬರುವಷ್ಟು ರಸ್ತೆಯಿಲ್ಲ. ರೋಗಿಗಳನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ಹೊತ್ತುಕೊಂಡು ಗ್ರಾಮದ ಮುಖ್ಯ ರಸ್ತೆಗೆ ಬರಬೇಕಾದ ಪರಸ್ಥಿತಿ ಇದೆ. ಹಾಗಾಗಿ ರಸ್ತೆ ಅಭಿವೃದ್ಧಿಪಡಿಸಿ.
ಚಂದ್ರಪ್ಪ ಕಣಿವೇನಹಳ್ಳಿ ಗ್ರಾಮಸ್ಥ 
ನರೇಗಾ ಅನುದಾನ ಮೂಲಕ ಕ್ರಮ
ಪಂಚಾಯಿತಿಗೆ ಪಿಡಿಒ ಆಗಿ ಬಂದು ಒಂದು ತಿಂಗಳು ಕಳೆದಿದೆ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ನಿವಾರಿಸಲು ನರೇಗಾ ಯೋಜನೆಯಲ್ಲಿ ಅನುದಾನ ನೀಡುವ ಮೂಲಕ ಕ್ರಮ ಕೈಗೊಳ್ಳಲಾಗುವುದು- ಮಹಾಲಿಂಗಪ್ಪ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ
ಅನುದಾನ ಸಾಲುತ್ತಿಲ್ಲ
ಪಂಚಾಯಿತಿಯಿಂದ ಅನುದಾನ ಬರುವುದು ಸಾಲುತ್ತಿಲ್ಲ. 15ನೇ ಹಣಕಾಸು ಯೋಜನೆಯಲ್ಲಿ ಒಂದು ಅಥವಾ ಎರಡು ಲಕ್ಷ ಅನುದಾನ ನೀಡುತ್ತಾರೆ. ಅದರಲ್ಲಿ ರಸ್ತೆ ಮಾಡಲು ಸಾಧ್ಯವಿಲ್ಲ. ಇನ್ನು ಸಣ್ಣಪುಟ್ಟ ಮೋರಿ ಕೆಲಸ ಮಾಡಿದ್ದೇವೆ. ಅನುದಾನದ ಕೊರತೆ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ- ವೆಂಕಟಮ್ಮ‌ ಕಣಿವೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.