ADVERTISEMENT

ವೇಮಗಲ್ | ಗದ್ದೆಯಲ್ಲ ಇದು; ವಾರದ ಸಂತೆ!

ಮಳೆ ಬಂದರೆ ಕೆಸರು ರಸ್ತೆಯಲ್ಲೇ ವಾರದ ವಾಹಿವಾಟು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 4:30 IST
Last Updated 17 ಅಕ್ಟೋಬರ್ 2024, 4:30 IST
ವೇಮಗಲ್ ನ ಬುಧವಾರ ಸಂತೆಯಲ್ಲಿ ಮಳೆಯಿಂದ ಸಂತೆಯ ರಸ್ತೆಗಳು ಕೆಸರುಮಯವಾಗಿ ಓಡಾಡಲು ತೊಂದರೆ ಉಂಟಾಗುತ್ತಿದೆ.
ವೇಮಗಲ್ ನ ಬುಧವಾರ ಸಂತೆಯಲ್ಲಿ ಮಳೆಯಿಂದ ಸಂತೆಯ ರಸ್ತೆಗಳು ಕೆಸರುಮಯವಾಗಿ ಓಡಾಡಲು ತೊಂದರೆ ಉಂಟಾಗುತ್ತಿದೆ.   

ವೇಮಗಲ್: ಸಾಮಾನ್ಯವಾಗಿ ತರಕಾರಿ ಮಾರುಕಟ್ಟೆ ಎಂದರೆ ಹತ್ತಾರು ತರಕಾರಿ, ಹಣ್ಣು ಸೇರಿದಂತೆ ಇನ್ನಿತರ ಅಂಗಡಿಗಳು ಇರುತ್ತವೆ. ಆದರೆ, ವೇಮಗಲ್‌ನಲ್ಲಿರುವ ವಾರದ ಸಂತೆಯಲ್ಲಿ ಹಣ್ಣು, ತರಕಾರಿಗಳ ಜೊತೆಗೆ ಮಳೆ ಬಂದಾಗ ಕೆಸರನ್ನು ಮತ್ತು ಮಳೆ ಬಾರದೆ ಇದ್ದಾಗ ದೂಳನ್ನೂ ಕಾಣಬಹುದಾಗಿದೆ. 

ಹೌದು, ಪಟ್ಟಣದ ಹೃದಯ ಭಾಗದಲ್ಲಿರುವ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಸಂತೆಯನ್ನು ವರ್ಷದ ಹಿಂದೆ ಸೀತಿ ರಸ್ತೆಯ ಸಂತೆ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ಇಲ್ಲಿ ಕನಿಷ್ಠ ಮೂಲಸೌಕರ್ಯಗಳೇ ಇಲ್ಲ. ಜೊತೆಗೆ ಸಂತೆ ನಡೆಯುವ ಜಾಗದಲ್ಲಿ ಮಳೆ ಬಂದಾಗ ಕೆಸರಾಗದಂತೆ ಮತ್ತು ಬಿಸಿಲು ಇದ್ದಾಗ ದೂಳು ಉಂಟಾಗದಂತೆ ಕನಿಷ್ಠ ಬಂಡೆಗಲ್ಲು ಅಥವಾ ಕಾಂಕ್ರೀಟ್ ನೆಲಹಾಸನ್ನು ಮಾಡಿಲ್ಲ. ಇದರಿಂದಾಗಿ ಕೆಸರುಮಯವಾದ ಸ್ಥಳದಲ್ಲೇ ವಾರದ ಸಂತೆಯಲ್ಲಿ ವ್ಯಾಪಾರ–ವಹಿವಾಟು ನಡೆಸುವ ಅನಿವಾರ್ಯತೆ ಇದೆ ಎನ್ನುತ್ತಾರೆ ವರ್ತಕರು. 

ಬಿಸಿಲು ಇದ್ದಾಗ ದೂಳಿನ ಜೊತೆಗೆ ಮತ್ತು ಮಳೆ ಬಂದಾಗ ಕೆಸರುಮಯವಾದ ರಸ್ತೆಯ ಪಕ್ಕದಲ್ಲೇ ವರ್ತಕರು ತರಕಾರಿ ಮಾರಾಟದಲ್ಲಿ ತೊಡಗುತ್ತಾರೆ. ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಇಲ್ಲಿ ನಡೆದಾಡಲು ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿ ಇದೆ. ಅಲ್ಲದೆ, ಒಂದು ಕ್ಷಣ ಮೈಮರೆತರೂ ಕಾಲು ಜಾರಿ ಬೀಳುವುದು ಖಚಿತ ಎಂದು ವರ್ತಕರು ಬೇಸರ ವ್ಯಕ್ತಪಡಿಸುತ್ತಾರೆ. ಇದರಿಂದಾಗಿ ಜನರು ಸ್ಥಳೀಯ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ. 

ADVERTISEMENT

ಮಳೆಯಿಂದ ಕೆಸರುಮಯವಾಗುವ ಸಂತೆಯೊಳಗೆ ಹೋಗಲು ಇಷ್ಟಪಡದ ಕೆಲವರು, ಸೀತಿ ಮುಖ್ಯ ರಸ್ತೆಯ ಪಕ್ಕದಲ್ಲೇ ಅಂಗಡಿ–ಮುಂಗಟ್ಟುಗಳನ್ನು ಹಾಕುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಜೊತೆಗೆ ಸಮೀಪವೇ ಸರ್ಕಾರಿ ಆಸ್ಪತ್ರೆ ಇದ್ದು, ಸಂತೆಯ ದಿನ ಈ ಮಾರ್ಗವಾಗಿ ಆಸ್ಪತ್ರೆಗೆ ಹೋಗುವವರು ಪರದಾಡುವಂತಾಗಿದೆ ಎಂಬುದು ಸ್ಥಳೀಯರ ದೂರು.

ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿ

ಗ್ರಾಮದ ಪ್ರತಿಯೊಬ್ಬರು ಮನೆಗೆ ಬೇಕಿರುವ ತರಕಾರಿಗಳನ್ನು ವೇಮಗಲ್ ಸಂತೆಯಿಂದಲೇ ಖರೀದಿಸುತ್ತೇವೆ. ಆದರೆ, ಈಗ ಸಂತೆ ಜಾಗಕ್ಕೆ ಹೋಗಲು ಬೇಸರವಾಗುತ್ತದೆ. ಎಲ್ಲಿ ನೋಡಿದರೂ, ಕೆಸರುಮಯವಾಗಿದ್ದು, ಜಾರಿ ಬೀಳುತ್ತೇವೆ ಎಂಬ ಭಯ ಕಾಡುತ್ತದೆ. ಮಕ್ಕಳು ಮತ್ತು ಮಹಿಳೆಯರು ಸಂಚರಿಸಲು ಸಾಧ್ಯವೇ ಆಗದು. ಈ ಬಗ್ಗೆ ಸ್ಥಳೀಯ ಆಡಳಿತ ಗಮನಹರಿಸಿ ಕಾಂಕ್ರೆಟ್ ರಸ್ತೆ ನಿರ್ಮಿಸಬೇಕು

–ಕಲ್ವ ಮಂಜಲಿ ರಾಮು ಶಿವಣ್ಣ, ಅಧ್ಯಕ್ಷ,‌ ಕನ್ನಡ ರಾಜ್ಯ ರೈತ ಸಂಘ

‘ಶೌಚಾಲಯ ವ್ಯವಸ್ಥೆ ಇಲ್ಲ’
ಇಲ್ಲಿ ನಡೆಯುವ ವಾರದ ಸಂತೆಗೆ ಸುತ್ತಮುತ್ತಲಿನ 8–10 ಗ್ರಾಮಗಳ ಜನರು ಬಂದು ವ್ಯಾಪಾರ–ವಹಿವಾಟು ನಡೆಸುತ್ತಾರೆ. ಇದರಿಂದಾಗಿ ಸ್ಥಳೀಯ ಆಡಳಿತವು ಸಂತೆಯ ಹರಾಜಿನಿಂದ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತದೆ. ಆದರೆ, ಸುಸಜ್ಜಿತವಾದ ವ್ಯವಸ್ಥೆ ಅಥವಾ ಸೌಲಭ್ಯಗಳನ್ನು ಮಾತ್ರ ಕಲ್ಪಿಸಲಾಗಿಲ್ಲ. ಸಂತೆಯಲ್ಲಿನ ವ್ಯಾಪಾರಿಗಳಿಗೆ ಶೌಚಾಲಯ, ಸ್ವಚ್ಛವಾದ ಕುಡಿಯುವ ನೀರು ಸಹ ಒದಗಿಸಲಾಗಿಲ್ಲ. ಸಂತೆಯಲ್ಲಿ ಎರಡು ಬೃಹತ್ ಶೆಡ್ಡುಗಳನ್ನು ಹೊರತುಪಡಿಸಿದರೆ, ಗ್ರಾಹಕರು ಅಥವಾ ವರ್ತಕರಿಗಾಗಲೀ ಯಾವುದೇ ವ್ಯವಸ್ಥೆ ಇಲ್ಲ ಎಂದು ವರ್ತಕರ ಆಕ್ರೋಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.