ADVERTISEMENT

ನನ್ನನ್ನು ಸೋಲಿಸಿದ್ದೀರಿ, ಯಾರನ್ನು ನಂಬುವುದು?: ರಮೇಶ್‌ ಕುಮಾರ್‌

ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ರಮೇಶ್‌ ಕುಮಾರ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 17:02 IST
Last Updated 18 ಏಪ್ರಿಲ್ 2024, 17:02 IST
ಕೆ.ಆರ್‌.ರಮೇಶ್‌ ಕುಮಾರ್
ಕೆ.ಆರ್‌.ರಮೇಶ್‌ ಕುಮಾರ್   

ಶ್ರೀನಿವಾಸಪುರ: ‘ಸಭೆಯಲ್ಲಿ ಇಷ್ಟೊಂದು ಜನ ಸೇರಿದ್ದೀರಿ. ನಾನು ಯಾರನ್ನು ನಂಬುವುದು ಯಾರನ್ನು ಬಿಡುವುದು. ಅನೇಕರು ವಿವಿಧ ಪ್ರಯೋಜನ ಪಡೆದುಕೊಂಡು ನನ್ನನ್ನು ಸೋಲಿಸಿದ್ದೀರಿ’ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ರಾಯಲ್ಪಾಡು ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಮತಯಾಚನ ಸಭೆಯಲ್ಲಿ ಅವರು ಮಾತನಾಡಿದರು.

‘11 ತಿಂಗಳಿನಿಂದ ನಾನು ತೋಟದಲ್ಲಿ ಕುರಿಗಳ ಜೊತೆ ಹಾಗೂ ತೋಟ ಸುತ್ತುತ್ತಾ ಕಾಲ ಕಳೆದಿದ್ದೇನೆ. ಅನೇಕ ಬಾರಿ ಯೋಚನೆ ಮಾಡಿ ನನ್ನ ಬಳಿ ಇಲ್ಲದ್ದು, ಅವರ (ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ) ಬಳಿ ಇರುವುದಾದರೂ ಏನು ಎಂದು ನನ್ನನ್ನು ನಾನೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದೆ’ ಎಂದರು.

ADVERTISEMENT

‘ರಾತ್ರಿ 11 ಗಂಟೆಗೂ ಜನರ ಕಷ್ಟ ಆಲಿಸುತ್ತೇನೆ. ವಸತಿ ಯೋಜನೆಯಲ್ಲಿ ಮನೆಗಳಿಗೆ ಬಿಲ್ಲು ಆಗಲಿಲ್ಲ ಎಂದರೆ ಸಂಬಂಧಪಟ್ಟ ಅಧಿಕಾರಿ ಜೊತೆ ಮಾತನಾಡಿ ಸ್ಪಂದಿಸುತ್ತೇನೆ. ವಾಹನವನ್ನು ಪೊಲೀಸರು ಹಿಡಿದುಕೊಂಡರೆ ಮಾತನಾಡಿ ಅನುಕೂಲ ಮಾಡಿಕೊಡುತ್ತಿದ್ದೆ. ಈಗ ನೀವು ಯಾರ ಬಳಿ ಹೋಗಿ ಮಾತನಾಡುತ್ತೀರಿ’ ಎಂದು ಪ್ರಶ್ನಿಸಿದರು.

‘ಈ ವಯಸ್ಸಿನ ನನಗೆ ಬೆನ್ನಿಗೆ ಚೂರಿ ಚುಚ್ಚುವುದರಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ತಾಲ್ಲೂಕಿನ ಜನತೆಗೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಿಧಾನಸಭಾ ಚುನಾವಣೆಗೆ ಮುನ್ನ ಬ್ಯಾಂಕ್‌ಗಳಲ್ಲಿ ಪಡೆದ ಸಾಲ ವಜಾ ಎಂದು ಹೇಳುತ್ತಿದ್ದವರು ಈಗ ಕೊಳಚೆ ನೀರು ಎಂದು ಹೀಯಾಳಿಸುತ್ತಿದ್ದಾರೆ. ಈಗ ಮುದವಾಡಿ ಕೆರೆ, ಕಲ್ಲೂರು ಕೆರೆಯಲ್ಲಿ ನೀರು ಇಲ್ಲ. ಕೆರೆಗಳಲ್ಲೇ ಒಣಗುತ್ತಿದೆ. ತಮ್ಮ ಜಾತಿ ಕೆರೆಗಳು ಒಣಗಿ ಹೋಗುತ್ತಿದೆಯಲ್ಲಾ, ಈಗ ದೇವೇಗೌಡ ಕೊಳವೆ ತಿರುವುದು, ಕುಮಾರಸ್ವಾಮಿ ಪೈಪುಗಳನ್ನು ಅಡ್ಜಸ್ಟ್‌ ಮಾಡುವುದು’ ಎಂದು ವ್ಯಂಗ್ಯವಾಡಿದರು.

‘ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲು ಮನವಿ ಮಾಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷವು ದೇಶಕ್ಕೆ ಅವಶ್ಯಕವಾಗದೆ. ಕಾಂಗ್ರೆಸ್ ಪಕ್ಷ ಉಳಿಸಬೇಕಿದೆ’ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಆರ್.ಕೃಷ್ಣಮೂರ್ತಿ, ಜಿ.ಪಂ ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ, ತಾ.ಪಂ ಮಾಜಿ ಸದಸ್ಯರಾದ ಆರ್.ಜಿ.ನರಸಿಂಹಯ್ಯ ಕೆ.ಕೆ.ಮಂಜು, ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯೋಗೀಂದ್ರಗೌಡ, ಗ್ರಾ,ಪಂ ಅಧ್ಯಕ್ಷ ಆರ್.ಗಂಗಾದರ್, ಕೂರಿಗೇಪಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ವಿಶ್ವನಾಥರೆಡ್ಡಿ, ಗೌನಿಪಲ್ಲಿ ಗ್ರಾ.ಪಂ.ಸದಸ್ಯ ಬಕ್ಷು ಸಾಬ್, ಆಕ್ಬರ್‌ಶರೀಫ್ ಮುಖಂಡರಾದ ಸುಣ್ಣಕಲ್ಲು ಮಂಜು ಹಾಗೂ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.