ADVERTISEMENT

ಕೋಲಾರ: ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ದೋಸೆ ತಿಂದು 18 ಮಕ್ಕಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 10:04 IST
Last Updated 9 ಆಗಸ್ಟ್ 2024, 10:04 IST
<div class="paragraphs"><p>ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ</p></div>

ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ

   

ಕೋಲಾರ: ತಾಲ್ಲೂಕಿನ ವೇಮಗಲ್ ಹೋಬಳಿಯ ಅಮ್ಮನಲ್ಲೂರು ಗ್ರಾಮದಲ್ಲಿರುವ ಅಂಬೇಡ್ಕರ್ ವಸತಿ ನಿಲಯದಲ್ಲಿ ಶುಕ್ರವಾರ ಬೆಳಿಗ್ಗೆ ತಿಂಡಿ ತಿಂದಿದ್ದ 18 ಮಕ್ಕಳು ಅಸ್ವಸ್ಥರಾಗಿದ್ದಾರೆ.

ದೋಸೆ ಚಟ್ನಿ ತಿಂದ ಐವರು ವಾಂತಿ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಹೊಟ್ಟೆ ನೋವಿನಿಂದ ಬಳಲಿದ್ದಾರೆ. ಐವರನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ಚಿಂತಾಮಣಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಅಮ್ಮನಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ‌.

ADVERTISEMENT

ಎಲ್ಲಾ ಮಕ್ಕಳು ಚೇತರಿಸಿಕೊಳ್ಳುತ್ತಿದ್ದು ಯಾವುದೇ ಅಪಾಯ ಇಲ್ಲವೆಂದು ವೈದ್ಯಾಧಿಕಾರಿ ಅಕ್ಷಯ್ ಕುಮಾರ್ ತಿಳಿಸಿದ್ದಾರೆ.

ಇವರೆಲ್ಲಾ ಶ್ರೀಚೌಡೇಶ್ವರಿ ಹಿರಿಯ ಪ್ರಾಥಮಿಕ,‌‌ ಪ್ರೌಢಶಾಲೆ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಗೆ ಸೇರಿದ 5ರಿಂದ 10ನೇ ತರಗತಿಯ ವಿದ್ಯಾರ್ಥಿಗಳು. ಅಂಬೇಡ್ಕರ್ ವಸತಿ ನಿಲಯದಲ್ಲಿ ಇದ್ದುಕೊಂಡು ಓದುತ್ತಿದ್ದಾರೆ.

ಅಸ್ವಸ್ಥರಾದ ಮಕ್ಕಳನ್ನು ವಿದ್ಯಾರ್ಥಿ ನಿಲಯದ ಅಡುಗೆ ಸಹಾಯಕ ನರಸಿಂಹಪ್ಪ ಮತ್ತು ಶಾಲಾ ಶಿಕ್ಷಕ ಚಿಕ್ಕಪ್ಪಯ್ಯ ಆಸ್ಪತ್ರೆಗೆ ಸೇರಿಸಿದರು.

5ನೇ ತರಗತಿಯ ವಿಕ್ರಮ್, ಗೌತಮ್, 6ನೇ ತರಗತಿಯ ಸುಜನ್, ಅರವಿಂದ್, 7ನೇ ತರಗತಿಯ ಕಿಶೋರ್, ರಂಜಿತ್, ಕೋಮಲ್ ಕುಮಾರ್, ಮದನ್ ಕುಮಾರ್, 8ನೇ ತರಗತಿಯಮೋಹಿತ್, 9ನೇ ತರಗತಿಯ ಅಂಬರೀಶ್, ಅಜಯ್ ಕುಮಾರ್, ವಿವೇಕ್, ಮದನ್, ಮದನ್ ಕುಮಾರ್, 10ನೇ ತರಗತಿಯ ಸುದಾನಂದ, ಸಾಯಿಚರಣ್, ಗಗನ್ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿಯ ಮೇಘನಾನಂದ ಅಸ್ವಸ್ಥಗೊಂಡವರು.

ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ವಿಕ್ರಮ್, ಗೌತಮ್, ಮದನ್, ಮದನ್ ಕುಮಾರ್ ಹಾಗೂ ಮೇಘನಾನಂದ ಚಿಕಿತ್ಸೆ ಪಡೆಯುತ್ತಿರುತ್ತಾರೆ.

ಚಿಂತಾಮಣಿ ಮತ್ತು ಅಮ್ಮನಲ್ಲೂರು ಗ್ರಾಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸನ್, ವೇಮಗಲ್ ಠಾಣೆಯ ಪೊಲೀಸರು, ಕೋಲಾರ ತಹಶೀಲ್ದಾರ್ ಡಾ. ನಯನಾ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು‌.

ವಿದ್ಯಾರ್ಥಿಗಳು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಆಹಾರದ ಮಾದರಿ ಸಂಗ್ರಹಿಸಿದ್ದು, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ
ಆರ್‌.ಶ್ರೀನಿವಾಸನ್‌, ಜಂಟಿ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ, ಕೋಲಾರ
ದೋಸೆ ಚಟ್ನಿ ತಿಂದು ಶಾಲೆಗೆ ಹೊರಡಲು ಶೂ ಹಾಕಿಕೊಳ್ಳುತ್ತಿದ್ದಾಗ ಸುಸ್ತಾಗಿ ವಾಂತಿಯಾಯಿತು. ಎರಡು ದಿನದ ಹಿಂದಿನ ಅನ್ನವನ್ನು ದೋಸೆ ಹಿಟ್ಟಿಗೆ ಬೆರೆಸಿದ್ದಾರೆ
ಅಸ್ವಸ್ಥ ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.