ಕೋಲಾರ: 'ವಾಲ್ಮೀಕಿ ನಿಗಮ ಹಗರಣದಲ್ಲಿ ಬಿ.ನಾಗೇಂದ್ರ ಪಾಲು ಶೇ 20 ಮಾತ್ರ; ಇನ್ನುಳಿದ ಶೇ 80 ಲೂಟಿ ಹೊಡೆದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗ್ಯಾಂಗ್. ಮುಖ್ಯಮಂತ್ರಿ ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ವಿಧಾನಸಭೆ ಅಧಿವೇಶನದಲ್ಲೂ ಪಟ್ಟು ಹಿಡಿದು ಹೋರಾಟ ನಡೆಸುತ್ತೇವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ತಿಳಿಸಿದರು.
ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಮತ್ತೆ ವರ್ಗಾವಣೆ ದಂಧೆ ಶುರುವಾಗುತ್ತಿದೆ. ಮತ್ತೆ ಲೂಟಿ ಆರಂಭವಾಗಲಿದೆ ಎಂದು ಆರೋಪಿಸಿದರು.
‘ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತರ ₹187 ಕೋಟಿ ಲೂಟಿ ಹೊಡೆದು ಬಾರ್, ವೈನ್ ಸ್ಟೋರ್ಗಳಿಗೆ ನೀಡಿದೆ. ಈ ಹಗರಣದಲ್ಲಿ ಈಗಾಗಲೇ ಒಂದು ವಿಕೆಟ್ ಬಿದ್ದಿದೆ. ಇನ್ನೂ ಮೂರ್ನಾಲ್ಕು ವಿಕೆಟ್ ಬೀಳುವುದಿದೆ. ಹಾಗೆಯೇ ಇನ್ನೂ ಎರಡು ಮೂರು ಇಲಾಖೆಯಲ್ಲಿ ಅವ್ಯವಹಾರ ನಡೆದಿದ್ದು, ಅದನ್ನೂ ಹೊರತರುತ್ತೇವೆ' ಎಂದರು.
‘ಮತ್ತೊಂದು ಕಡೆ ಮೂರು ಉಪಮುಖ್ಯಮಂತ್ರಿ ಬೇಕೆಂದು ಪ್ರಹಸನ ನಡೆಯುತ್ತಿದೆ. 32 ಸಚಿವರನ್ನೂ ಡಿಸಿಎಂ ಮಾಡಿ ಕರ್ನಾಟಕ ಲೂಟಿ ಮಾಡಲು ಹೊರಟಿದ್ದಾರೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ. ಇವರ ಪಾಪ, ಶಾಸಕರ ಶಾಪದಿಂದ ಶೀಘ್ರದಲ್ಲೇ ಸರ್ಕಾರ ಪತನವಾಗಲಿದೆ. ನಾವು ಸರ್ಕಾರ ಬೀಳಿಸಲ್ಲ; ಅವರ ಶಾಸಕರೇ ಬೀಳಿಸುತ್ತಾರೆ. ಸರ್ಕಾರ ಬಿದ್ದ ಮೇಲೆ ಏನು ಮಾಡಬೇಕೆಂದು ಯೋಚಿಸುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.