ADVERTISEMENT

ಮಾಲೂರಿಗೆ ಯರಗೋಳ್‌ ಡ್ಯಾಂ ನೀರು ಪೂರೈಕೆ

ಸೋಮವಾರದಿಂದ ಪ್ರತಿದಿನ 3.2 ದಶಲಕ್ಷ ಲೀಟರ್ ಪೂರೈಕೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 13:17 IST
Last Updated 21 ಜೂನ್ 2024, 13:17 IST
ಮಾಲೂರಿನಲ್ಲಿ ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕಿಗೆ ಹರಿದು ಬಂದಿರುವ ಯರಗೋಳ್‌ ಡ್ಯಾಂ ನೀರು ಪಟ್ಟಣಕ್ಕೆ ಸರಬರಾಜು ಮಾಡಲು ಶಾಸಕ ಕೆ.ವೈ.ನಂಜೇಗೌಡ ಚಾಲನೆ ನೀಡಿದರು
ಮಾಲೂರಿನಲ್ಲಿ ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕಿಗೆ ಹರಿದು ಬಂದಿರುವ ಯರಗೋಳ್‌ ಡ್ಯಾಂ ನೀರು ಪಟ್ಟಣಕ್ಕೆ ಸರಬರಾಜು ಮಾಡಲು ಶಾಸಕ ಕೆ.ವೈ.ನಂಜೇಗೌಡ ಚಾಲನೆ ನೀಡಿದರು   

ಮಾಲೂರು: ಪಟ್ಟಣದ ಮಾರುತಿ ಬಡಾವಣೆ ಬಳಿ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ವತಿಯಿಂದ ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕ್‌ಗೆ ಯರಗೋಳ್‌ ಡ್ಯಾಂ ನೀರು ಪೂರೈಸಿ, ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಚಾಲನೆ ನೀಡಲಾಯಿತು.

ಈ ವೇಳೆ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಯರಗೋಳ್‌ ಕುಡಿಯುವ ನೀರಿನ ಯೋಜನೆಯಿಂದ ಪಟ್ಟಣದ ಓವರ್ ಹೆಡ್ ಟ್ಯಾಂಕ್‌ಗೆ ಪೈಪ್‌ಲೈನ್ ಮೂಲಕ ನೀರು ಪೂರೈಕೆಯಾಗಿದ್ದು, ಪಟ್ಟಣದ ಜನತೆಗೆ ಇದೇ ಸೋಮವಾರದಿಂದ ಪ್ರತಿನಿತ್ಯ 3.2 ದಶಲಕ್ಷ ಲೀಟರ್ ಶುದ್ಧ ಕುಡಿಯುವ ನೀರು ಪುರಸಭೆಯಿಂದ ಸರಬರಾಜು ಮಾಡಲಾಗುವುದು ಎಂದು ಹೇಳಿದರು.

ಯರಗೋಳ್‌ ಡ್ಯಾಮ್‌ನಿಂದ ನೀರು ಸರಬರಾಜು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ 6 ತಿಂಗಳ ಹಿಂದೆ ಚಾಲನೆ ನೀಡಿದ್ದರು. ಆದರೆ, ಪಟ್ಟಣಕ್ಕೆ ನೀರು ತಲುಪಿರಲಿಲ್ಲ. ಈ ಹಿಂದೆ ಯರಗೋಳ್ ಡ್ಯಾಂ ನಿರ್ಮಾಣಕ್ಕೂ ಮೊದಲು ಪೈಪ್‌ಲೈನ್ ಮಾಡಿದ್ದರಿಂದ, ಪೈಪ್‌ಲೈನ್ ದುರಸ್ತಿಯಾದ ಕಾರಣ ಇಲಾಖೆ ಅಧಿಕಾರಿಗಳು ಪೈಪ್‌ಲೈನ್ ದುರಸ್ತಿಗೊಳಿಸಿ ಓವರ್ ಹೆಡ್ ಟ್ಯಾಂಕಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗಿದೆ. ಇದೇ ಸೋಮವಾರದಿಂದ ಪಟ್ಟಣದ 12 ವಾರ್ಡ್‌ಗಳಿಗೆ ನೀರು ಸರಬರಾಜು ಆಗುತ್ತದೆ ಎಂದು ತಿಳಿಸಿದರು.

ADVERTISEMENT

ನೀರು ಪೈಪ್‌ಲೈನ್‌ ಮೂಲಕ ಸರಬರಾಜು ಆಗುತ್ತಿರುವುದರಿಂದ ಪೈಪ್‌ಲೈನ್‌ ಶುದ್ಧೀಕರಣ ಆಗಬೇಕಿದೆ. ಹಾಗಾಗಿ 15 ದಿನ ಪಟ್ಟಣದ ನಾಗರಿಕರು ಈ ನೀರನ್ನು ಬಳಕೆ ಮಾತ್ರ ಉಪಯೋಗಿಸಿಕೊಳ್ಳಬೇಕು. ನಂತರದ ದಿನಗಳಲ್ಲಿ ಕುಡಿಯಲು ಬಳಸಿಕೊಳ್ಳಬಹುದು ಎಂದರು.

ಕೆ.ರಮೇಶ್, ಪ್ರದೀಪ್ ಕುಮಾರ್, ಇಮ್ತಿಯಾಜ್ ಖಾನ್, ಎ.ರಾಜಪ್ಪ, ಜಾಕಿರ್ ಖಾನ್, ಮುರುಳಿಧರ್, ನಹಿಂ ಉಲ್ಲಾ ಖಾನ್, ಹನುಮಂತಪ್ಪ, ಚಂದ್ರಶೇಖರ್, ಶಿವಕುಮಾರ್, ಅಶೋಕ್, ಶಾಲಿನಿ, ನಾಗರಾಜ್, ರಮೇಶ್, ಶಬೀರ್, ಶ್ರೀನಿವಾಸ್, ರಾಜಣ್ಣ, ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.