ADVERTISEMENT

ಆನೆಗೊಂದಿ ಉತ್ಸವ: ಅಚ್ಚುಕಟ್ಟಾಗಿ ನಡೆಸಲು ಶಾಸಕ ಸೂಚನೆ

ಜಿ.ಜನಾರ್ದನರೆಡ್ಡಿ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸರಣಿ ಸಭೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 6:40 IST
Last Updated 7 ಮಾರ್ಚ್ 2024, 6:40 IST
ಗಂಗಾವತಿ ತಾಲ್ಲೂಕಿನ ವಿರುಪಾಪುರಗಡ್ಡೆ ಅರಣ್ಯ ಇಲಾಖೆ ಪ್ರವಾಸಿ ಮಂದಿರದಲ್ಲಿ ಬುಧವಾರ ಶಾಸಕ ಜಿ.ಜನಾರ್ದನರೆ ಡ್ಡಿ ನೇತೃತ್ವದಲ್ಲಿ ಆನೆಗೊಂದಿ ಉತ್ಸವದ ಕುರಿತ ಅಧಿಕಾರಿಗ ಳ ಜೊತೆಗೆ ಪೂರ್ವಭಾವಿ ಸಭೆ ಜರುಗಿತು.
ಗಂಗಾವತಿ ತಾಲ್ಲೂಕಿನ ವಿರುಪಾಪುರಗಡ್ಡೆ ಅರಣ್ಯ ಇಲಾಖೆ ಪ್ರವಾಸಿ ಮಂದಿರದಲ್ಲಿ ಬುಧವಾರ ಶಾಸಕ ಜಿ.ಜನಾರ್ದನರೆ ಡ್ಡಿ ನೇತೃತ್ವದಲ್ಲಿ ಆನೆಗೊಂದಿ ಉತ್ಸವದ ಕುರಿತ ಅಧಿಕಾರಿಗ ಳ ಜೊತೆಗೆ ಪೂರ್ವಭಾವಿ ಸಭೆ ಜರುಗಿತು.   

ಗಂಗಾವತಿ: ಆನೆಗುಂದಿ ಉತ್ಸವ ಅಚ್ಚುಕಟ್ಟಾಗಿ ನಡೆಸಲು ಶಾಸಕ ಜಿ.ಜನಾರ್ದನರೆಡ್ಡಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಾಲ್ಲೂಕಿನ ವಿರೂಪಾಪುರಗಡ್ಡೆಯಲ್ಲಿರುವ ಅರಣ್ಯ ಇಲಾಖೆ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಆನೆಗೊಂದಿ ಉತ್ಸವ ಅದ್ದೂರಿಯಾಗಿ ನಡೆಸಲು ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಅಧಿಕಾರಿಗಳು ತಮಗೆ ನೀಡಿದ ಜವಾಬ್ದಾರಿಯನ್ನ ನಿಗದಿತ ಸಮಯಕ್ಕೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಆನೆಗೊಂದಿ ಉತ್ಸವ ಯಾವ ಕಾರಣಕ್ಕೂ ಕಳೆಗುಂದ ಬಾರದು, ರಾಮಾಯಣ ಮತ್ತು ವಿಜಯನಗರ ಕಾಲದ ಇತಿಹಾಸದ ಗೈತವೈಭವ ಸಾರುವ ರೀತಿಯಲ್ಲಿ ಸಂಭ್ರಮದಿಂದ ನಡೆಯಬೇಕು. ಊಟ, ವಸತಿ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ, ಬಂದೋಬಸ್ತ್ ವ್ಯವಸ್ಥಿತವಾಗಿರಬೇಕು ಎಂದರು.

ADVERTISEMENT

ನಂತರ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹಾಂತೇಶ ಮಾಲಗಿತ್ತಿ ಮಾತನಾಡಿ, ಕನಕಗಿರಿ ಉತ್ಸವದಲ್ಲಿ ಕಾರ್ಯ ನಿರ್ವಹಿಸಿದ ಸಮಿತಿಗಳ ಅಧಿಕಾರಿಗಳೇ ಆನೆಗೊಂದಿ ಉತ್ಸವದಲ್ಲಿ ಕಾರ್ಯನಿರ್ವ ಹಿಸಲಿದ್ದು, ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಸೂಚಿಸಿದರು.

ವೇದಿಕೆ ನಿರ್ಮಾಣ ಮತ್ತು ಜನರು ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ನಲಿನ್ ಅತುಲ್‌, ಸಿಬ್ಬಂದಿಯೊಬ್ಬರು ಟ್ಯಾಬ್ ಮೂಲಕ ಚಿತ್ರಗಳನ್ನು ತೋರಿಸಿ, ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಕಲಾವಿದರಿಗೆ ವಿತರಿಸುವ ಸ್ಮರಣಿಕೆ ಬಗ್ಗೆ ಮಾಹಿತಿ ಕೇಳಿದಾಗ, ಕಲಾವಿದರಿಗೆ ನೀಡಲು 700, ಹಿರಿಯ ಮತ್ತು ವಿಶೇಷ ಕಲಾವಿದರಿಗೆ ನೀಡಲು 50, ಪೇಟಾ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ನಂತರ ಆಹಾರ ಸಮಿತಿ ಅಧಿಕಾರಿ ಮಾತನಾಡಿ, ಉತ್ಸವದ ಎರಡು ದಿನ 40-60 ಸಾವಿರ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆಹಾರ ತಯಾರಿಕೆ ಬಗ್ಗೆ ಯಾವುದಾದರೂ ಸಲಹೆಗಳಿದ್ದರೆ ಪಾಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕ್ರೀಡಾ ಸಮಿತಿ ಅಧಿಕಾರಿ ಮಾತನಾಡಿ, ಉತ್ಸವದಲ್ಲಿ ಮಾರ್ಚ್ 8 ರಿಂದ 10ರವರೆಗೆ ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್, ಕಬಡ್ಡಿ, ಕ್ರಿಕೆಟ್‌, ಮ್ಯಾರಥಾನ್, ಹ್ಯಾಂಡ್‌ಬಾಲ್, ರಂಗೋಲಿ, ಕುಸ್ತಿ ಸೇರಿ ಒಟ್ಟು 9 ಕ್ರೀಡೆಗಳು ನಡೆಯಲಿವೆ ಎಂದರು.

ನಂತರ ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, ಸ್ವಾಗತ ಸಮಿತಿ, ಸಾಂಸ್ಕೃತಿಕ ಸಮಿತಿ, ವೇದಿಕೆ ಸಮಿತಿ, ಆಹಾರ ಸಮಿತಿ, ವಸತಿ ಸಮಿತಿ ಸೇರಿ ಇತರೆ ಸಮಿತಿಗಳಲ್ಲಿನ ಅಧಿಕಾರಿಗಳು ತಮಗೆ ನೀಡಿದ ಉತ್ಸವದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.

ಎಸ್ಪಿ ಯಶೋಧಾ ವಂಟಗೋಡಿ, ಕನಕಗಿರಿ ತಹಶೀಲ್ದಾರ ವಿಶ್ವನಾಥ ಮುರಡಿ, ಗಂಗಾವತಿ ತಹಶೀಲ್ದಾರ ಯು.ನಾಗರಾಜ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪೊಲೀಸ್ ಪಾಟೀಲ, ಗಂಗಾವತಿ ಗ್ರಾಮೀಣ ಠಾಣೆ ಪಿಐ ಸೋಮಶೇಖರ್ ಜುತ್ತಲ್ ಸೇರಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಸಿಬ್ಬಂದಿ ಉಪ ಸ್ಥಿತರಿದ್ದರು.

ಆನೆಗೊಂದಿ ಗ್ರಾ.ಪಂನಲ್ಲಿಯೂ ಆನೆಗೊಂದಿ ಹಾಗೂ ಸಾಣಾಪುರ ಗ್ರಾ.ಪಂ ಸದಸ್ಯರ ಜತೆ ಶಾಸಕರು ಸಭೆ ನಡೆಸಿದರು.

ಆನೆಗೊಂದಿ ಗ್ರಾ.ಪಂ ಸದಸ್ಯ ವೆಂಕಟೇಶ ಬಾಬು ಮಾತನಾಡಿ, ಆನೆಗೊಂದಿ ಗ್ರಾಮದ ತಳವಾರಘಟ್ಟ ನದಿಯಿಂದ ಆನೆಗೊಂದಿ ಪ್ರೌಢಶಾಲೆವರೆಗೆ ಶಾಶ್ವತ ಕುಡಿಯುವ ನೀರಿನ ಪೈಪ್ಲೈನ್ ವ್ಯವಸ್ಥೆ, ಗ್ರಾ.ಪಂ ವ್ಯಾಪ್ತಿಯಲ್ಲಿ ವಿದ್ಯುತ್ ಪೋಲು ಅಳವಡಿಕೆ ಮಾಡಬೇಕು. ಹಾಗೆಯೇ ಸೇಲ್ಫಿ ವಿತ್ ಸಂವಿಧಾನ ಅಭಿಯಾನ, ಸ್ಥಳೀಯ ಕಲಾವಿದರಿಗೆ ಉತ್ಸವದಲ್ಲಿ ಅವಕಾಶ, ಸ್ಥಳೀಯ ಸಾಧಕರಿಗೆ ಸನ್ಮಾನ, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉತ್ಸವಕ್ಕೆ ಆಗಮಿಸಲು ಉಚಿತ ಬಸ್ ವ್ಯವಸ್ಥೆ, ವಿಜಯನಗರ ಕಾಲದ ಇತಿಹಾಸ ಸಾರುವ ವಿಚಾರ ಸಂಕಿರಣ ನಡೆಸಬೇಕು ಎಂದು ಒತ್ತಾಯಿಸಿ ಶಾಸಕರಿಗೆ ಮನವಿ ಸಲ್ಲಿಸಿದರು.

ಆನೆಗೊಂದಿ ಗ್ರಾ.ಪಂ ಅಧ್ಯಕ್ಷೆ ಮಹಾದೇವಿ, ಸದಸ್ಯ ಮಲ್ಲಿಕಾರ್ಜುನ ಸ್ವಾಮಿ, ಸಾಣಾಪುರ ಗ್ರಾ.ಪಂ ಉಪಾಧ್ಯಕ್ಷೆ ಸಂತೋಷಮ್ಮ, ಸದಸ್ಯ ನಾಗೇಶ ಕೋಡಿ ಸೇರಿ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.

ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ಗ್ರಾ.ಪಂ ಕ ಚೇರಿಯಲ್ಲಿ ಶಾಸಕ ಜಿ.ಜನಾರ್ದನರೆಡ್ಡಿ ಅವರು ಬುಧವಾರ ಆನೆ ಗೊಂದಿ ಮತ್ತು ಸಾಣಾಪುರ ಗ್ರಾ.ಪಂ ಸದಸ್ಯರ ಜೊತೆ ಉ ತ್ಸವದ ಬಗ್ಗೆ ಪೂರ್ವಭಾವಿ ಸಭೆ ನಡೆಸಿದರು.
ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ಗ್ರಾ.ಪಂ ಕ ಚೇರಿಯಲ್ಲಿ ಶಾಸಕ ಜಿ.ಜನಾರ್ದನರೆಡ್ಡಿ ಅವರು ಬುಧವಾರ ಆನೆ ಗೊಂದಿ ಮತ್ತು ಸಾಣಾಪುರ ಗ್ರಾ.ಪಂ ಸದಸ್ಯರ ಜೊತೆ ಉ ತ್ಸವದ ಬಗ್ಗೆ ಪೂರ್ವಭಾವಿ ಸಭೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.