ಕಾರಟಗಿ: ಕಳ್ಳರು ಎಕ್ಸೆಸ್ ಬ್ಯಾಂಕ್ ದರೋಡೆಗೆ ಯತ್ನಿಸುತ್ತಿರುವಾಗ ಬ್ಯಾಂಕ್ ಕಟ್ಟಡದ ಮಾಲೀಕರ ಸಂಬಂಧಿಯೊಬ್ಬರನ್ನು ನೋಡಿ ಕಳ್ಳತನಕ್ಕೆ ತಂದಿದ್ದ ಸಲಕರಣೆಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದ ಘಟನೆ ಮಂಗಳವಾರ ನಸುಕಿನ ಜಾವ ತಾಲ್ಲೂಕಿನ ಮರ್ಲಾನಹಳ್ಳಿಯಲ್ಲಿ ಜರುಗಿದೆ.
ಎಕ್ಸೆಸ್ ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ ವಾಲಿ ಮಂಗಳವಾರ ರಾತ್ರಿ ನೀಡಿದ ದೂರಿನನ್ವಯ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ಹೆದ್ದಾರಿಗೆ ಅಂಟಿಕೊಂಡಿರುವ ಮರ್ಲಾನಹಳ್ಳಿಯ ಎಕ್ಸೆಸ್ ಬ್ಯಾಂಕ್ನ ದರೋಡೆಗೆ ಬಂದಿದ್ದ ಕಳ್ಳರು ವಿವಿಧ ಸಲಕರಣೆಗಳಿಂದ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕಳವಿಗೆ ಮುಂದಾಗಿದ್ದರು. ಇದರ ಸಪ್ಪಳ ಕೇಳಿ ಕಟ್ಟಡದ ಮಾಲೀಕರ ಸಂಬಂಧಿಯ ಮನೆಯಲ್ಲಿ ಬಾಡಿಗೆ ಇರುವ ಮದನ್ ರಸ್ತೆಗೆ ಬರುತ್ತಿದ್ದಂತೆಯೇ ಕಳ್ಳರು ಪಲಾಯನ ಮಾಡಿದ್ದಾರೆ.
ಕಟ್ಟಡದ ಮಾಲೀಕ ಶ್ರೀಹರಿ ಅವರು ಬ್ಯಾಂಕ್ ಮ್ಯಾನೇಜರ್ಗೆ ನಸುಕಿನ ಜಾವವೇ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬ್ಯಾಂಕ್ ವ್ಯವಸ್ಥಾಪಕರು ಶಾಖೆಗೆ ಬಂದು ವೀಕ್ಷಿಸಿದಾಗ ಕಳ್ಳರು ದರೋಡೆಗೆ ತಂದಿದ್ದ ಕಟ್ಟಿಂಗ್ ಯಂತ್ರ, ಕಟ್ಟಿಂಗ್ ಪ್ಲೇಯರ್, ಜಿಯೋ ದೊಂಗಲ್, ಕಪ್ಪು ಬಣ್ಣದ ಬ್ಯಾಗ್, ವಿದ್ಯುತ್ ಸಂಪರ್ಕಕ್ಕೆ ಬಳಸುವ ತಂತಿ ಸಮೇತ ಎಲ್ಲಾ ವಸ್ತುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುವುದು ಕಂಡುಬಂದಿದೆ.
ಈ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಇನ್ಸ್ಪೆಕ್ಟರ್ ಸಿದ್ರಾಮಯ್ಯಸ್ವಾಮಿ ಬಿ.ಎಂ. ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.