ADVERTISEMENT

LS Polls | ಲೋಕದ ಸವಾಲಿಗೆ ‘ಸಂತೋಷ’ ಸೂತ್ರ

​ಪ್ರಜಾವಾಣಿ ವಾರ್ತೆ
Published 5 ಮೇ 2024, 6:21 IST
Last Updated 5 ಮೇ 2024, 6:21 IST
ಕೊಪ್ಪಳದಲ್ಲಿ ಶನಿವಾರ ನಡೆದ ಜಿಲ್ಲಾ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಬಿ.ಎಲ್‌. ಸಂತೋಷ್‌ ಪ್ರಜಾವಾಣಿಯಲ್ಲಿ ಪ್ರಕಟವಾದ ಸಂದರ್ಶನ ಪ್ರದರ್ಶಿಸಿದರು
ಕೊಪ್ಪಳದಲ್ಲಿ ಶನಿವಾರ ನಡೆದ ಜಿಲ್ಲಾ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಬಿ.ಎಲ್‌. ಸಂತೋಷ್‌ ಪ್ರಜಾವಾಣಿಯಲ್ಲಿ ಪ್ರಕಟವಾದ ಸಂದರ್ಶನ ಪ್ರದರ್ಶಿಸಿದರು   

ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಅಭ್ಯರ್ಥಿ ಗೆಲುವಿಗಾಗಿ ತಮ್ಮ ಪಕ್ಷದ ಪ್ರಮುಖರು ಉಳಿದ ಅವಧಿಯಲ್ಲಿ ಹೇಗೆ ಕೆಲಸ ಮಾಡಬೇಕು ಎನ್ನುವ ’ಸೂತ್ರ’ವನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.‌ ಸಂತೋಷ್‌ ನಗರದಲ್ಲಿ ಶನಿವಾರ ನಡೆದ ಜಿಲ್ಲಾ ಶಕ್ತಿ ಕೇಂದ್ರ ಪ್ರಮುಖರ ಸಭೆಯಲ್ಲಿ ಹೇಳಿಕೊಟ್ಟರು.

ಮೇ 7ರಂದು ಮತದಾನ ಜರುಗಲಿದ್ದು ಈಗಾಗಲೇ ಸಾಕಷ್ಟು ಪ್ರಚಾರ ಮಾಡಲಾಗಿದೆ. ಹೀಗಾಗಿ ಉಳಿದ ಸಮಯದಲ್ಲಿ ಜಿಲ್ಲಾ ಶಕ್ತಿ ಕೇಂದ್ರ ಪ್ರಮುಖರು ಮತದಾರರ ಮನೆಮನೆಗೆ ಭೇಟಿನೀಡಿ ಕೇಂದ್ರದ ಯೋಜನೆಗಳು, ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮನವರಿಕೆ ಮಾಡಿಕೊಡಬೇಕು ಎಂದರು.

ಮತದಾರರ ಬಳಿ ಹೋಗುವಾಗ ದೊಡ್ಡ ತಂಡವನ್ನು ಕಟ್ಟಿಕೊಳ್ಳದೆ ಮೂರ್ನಾಲ್ಕು ಜನರ ತಂಡದೊಂದಿಗೆ ಮಾತ್ರ ಹೋಗಬೇಕು. ಬಿಸಿಲಿನ ಪ್ರಮಾಣವೂ ಹೆಚ್ಚಿರುವ ಕಾರಣ ಬೆಳಿಗ್ಗಿನ ಅವಧಿಯಲ್ಲಿ ಹೆಚ್ಚು ಮತದಾನವಾಗುವಂತೆ ನೋಡಿಕೊಳ್ಳಬೇಕು. ಮತದಾರರು ಬಂದು ಹೋಗಲು ಅನುಕೂಲ ಮಾಡಿಕೊಡಬೇಕು ಎಂದು ಪ್ರಮುಖರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಇದಕ್ಕೂ ಮೊದಲು ಅವರು ಪಕ್ಷದ ಕಚೇರಿಯಲ್ಲಿ ಪ್ರಮುಖರ ಜೊತೆ ಚರ್ಚಿಸಿ ಚುನಾವಣೆ ಸವಾಲು ಎದುರಿಸಲು ಕ್ಷೇತ್ರದಲ್ಲಿ ಮಾಡಿಕೊಂಡ ತಯಾರಿಗಳು ಏನು? ಎನ್ನುವ ಮಾಹಿತಿ ಸಂಗ್ರಹಿಸಿದರು. ಏನಾದರೂ ಸಮಸ್ಯೆಗಳು ಇವೆಯೇ ಎನ್ನುವ ಮಾಹಿತಿಯನ್ನೂ ಮಾಡಿದುಕೊಂಡು ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಹಲವರ ಜೊತೆ ಚರ್ಚಿಸಿದರು ಎಂದು ಗೊತ್ತಾಗಿದೆ. ಪಕ್ಷದ ಸಂಘಟನಾತ್ಮಕ ವಿಷಯಗಳ ಬಗ್ಗೆಯೂ ಹಲವು ವಿಷಯಗಳನ್ನು ಹಂಚಿಕೊಂಡರು.

ಪ್ರಮುಖರ ಸಭೆಯಲ್ಲಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್‌ ಮಾತನಾಡಿ ‘ಇಷ್ಟು ದಿನಗಳ ಅವಧಿಯಲ್ಲಿ ಸಾಕಷ್ಟು ಪ್ರಚಾರ ಮಾಡಲಾಗಿದೆ. ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ನನ್ನನ್ನು ಗೆಲ್ಲಿಸಿ’ ಎಂದು ಮನವಿ ಮಾಡಿದರು.   

ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ, ಕೊಪ್ಪಳ ಲೋಕಸಭಾ ಪ್ರಭಾರಿಯೂ ಆದ ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ, ಕ್ಷೇತ್ರದ ಸಂಚಾಲಕ ಗಿರೇಗೌಡ ಹೊಸಕೇರಾ, ಬಳ್ಳಾರಿ ವಿಭಾಗ ಸಂಘಟನಾ ಪ್ರಭಾರಿ ಪೂಜಪ್ಪ, ಸಹ ಪ್ರಭಾರಿ ಚಂದ್ರಶೇಖರ್ಗೌಡ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ನಾಡಿಗೇರ ಸುನೀಲ್ ಹೇಸರೂರು, ಶಿವಕುಮಾರ ಅರಕೇರಿ, ಖಜಾಂಚಿ ನರಸಿಂಗ್ ರಾವ್ ಕುಲಕರ್ಣಿ ಹಾಗೂ ಜಿಲ್ಲಾ ಶಕ್ತಿ ಕೇಂದ್ರದ ಪ್ರಮುಖರು, ಮುಖಂಡರು ಪಾಲ್ಗೊಂಡಿದ್ದರು.

ಜಿಲ್ಲಾ ಶಕ್ತಿ ಕೇಂದ್ರ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಕಾರ್ಯಕರ್ತರು
ಪ್ರಜಾವಾಣಿ’ ಸಂದರ್ಶನ
ಪ್ರದರ್ಶನ ಜಿಲ್ಲಾ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಬಿ.ಎಲ್‌. ಸಂತೋಷ್‌ ಅವರು ‘ಪ್ರಜಾವಾಣಿ’ಯಲ್ಲಿ ಶನಿವಾರ ಪ್ರಕಟವಾಗಿದ್ದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್‌ ಅವರ ಸಂದರ್ಶನವನ್ನು ಪ್ರದರ್ಶಿಸಿದರು. ಪತ್ರಿಕೆ ಪ್ರದರ್ಶಿಸಿ ‘ನಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸ್ಪಷ್ಟವಾಗಿದೆ. ಆದರೆ ಕಾಂಗ್ರೆಸ್‌ ಪಕ್ಷಕ್ಕೆ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದೇ ಖಚಿತವಾಗಿಲ್ಲ. ಇದರ ಬಗ್ಗೆ ಅವರು ಎಲ್ಲಿಯೂ ಪ್ರಸ್ತಾಪ ಮಾಡುತ್ತಿಲ್ಲ. ನಾವು ಎಲ್ಲ ಕಡೆಯೂ ಮೋದಿಯೇ ಮುಂದಿನ ಪ್ರಧಾನಿ ಎನ್ನುತ್ತಿದ್ದೇವೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.