ಕುಕನೂರು: ಬದುಕಿರುವವರೆಗೂ ರಂಗಭೂಮಿಗೆ ಜೀವನ ಮುಡುಪಾಗಿಟ್ಟ ಕಲಾವಿದ ಬಾಬಣ್ಣ ಕಲ್ಮನಿಯವರ ರಂಗ ಸೇವೆ ಅನನ್ಯ ಎಂದು ಹಿರಿಯ ಸಾಹಿತಿ ಕೆ. ಬಿ.ಬ್ಯಾಳಿ ಅಭಿಪ್ರಾಯಪಟ್ಟರು.
ಇಲ್ಲಿನ ಪಂಚಾಕ್ಷರಿ ಸಂಗೀತ ಪಾಠಶಾಲೆಯಲ್ಲಿ ಮಂಗಳವಾರ ಪಂಚಾಕ್ಷರಿ ಸಾಹಿತ್ಯ ಸಂಗೀತ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಹಿರಿಯ ರಂಗಭೂಮಿ ಕಲಾವಿದ ದಿ.ಬಾಬಣ್ಣ ಕಲ್ಮನಿಯವರ ಸ್ವರ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲಾತಪಸ್ವಿ ರೆಹಮಾನವ್ವ ಕಲ್ಮನಿ ಹಾಗೂ ಅವರ ಕುಟುಂಬ ನಾಡಿನ ರಂಗಭೂಮಿ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಒಂದು ಗ್ರಾಮೀಣ ಪ್ರತಿಭೆ ರಾಜ್ಯದ್ಯಂತ ಹೆಸರು ಮಾಡಿ ಪ್ರತಿಯೊಬ್ಬರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ಮೇರು ಪ್ರತಿಭೆಗಳು ಎಂದರು.
ತಾಯಿಯ ಕಲೆಯನ್ನು ಮೈಗೂಡಿಸಿಕೊಂಡ ಬಾಬಣ್ಣನವರು ಸಾವಿರಾರು ನಾಟಕಗಳನ್ನಾಡಿ ಸೈನಿಸಿಕೊಂಡಿದ್ದಾರೆ. ರಂಗಭೂಮಿ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದಿದ್ದಾರೆ ಎಂದರು.
ಪ್ರಾಚಾರ್ಯ ಎನ್. ಆರ್ ಕುಕನೂರ ಮಾತನಾಡಿ, ಜೀವನದಲ್ಲಿ ಸರಳ ಸಜ್ಜನಿಕೆಯಿಂದ ಜೀವನ ಸಾಗಿಸಿ ಪ್ರತಿಯೊಬ್ಬರಿಗೆ ಮಾದರಿಯಾದವರು ಕಲಾವಿದ ಬಾಬಣ್ಣ ಕಲ್ಮನಿಯವರು. ಅವರ ಅಗಲಿಕೆಯಿಂದ ರಂಗಭೂಮಿ ಕಲೆಗೆ ಅಪಾರ ನಷ್ಟವಾಗಿದೆ. ಬದುಕಿದ್ದಕ್ಕೂ ಕಷ್ಟ ಕಾರ್ಪಣ್ಯಗಳ ಜೊತೆ ಜೊತೆಗೆ ಸದಾ ಹಸನ್ಮುಖಿಯಾಗಿ ಬದುಕಿದವರು ಬಾಬಣ್ಣ ಎಂದರು.
ಮೈಬುಬಿ ಬಾಬಣ್ಣ ಕಲ್ಮನಿ, ಜಿ.ಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಸಾಹಿತಿ ಪಕೀರಪ್ಪ ವಜ್ಜಲಬಂಡಿ, ಬಸವರಾಜ ಬಣ್ಣದಬಾವಿ, ಅಲ್ಲಾವುದ್ದೀನ್ ಎಮ್ಮಿ, ರಶೀದಸಾಬ್ ಉಮಚಿಗಿ, ಹನುಮಂತಪ್ಪ ಜಳಕಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.