ಕೊಪ್ಪಳ: ಜಿಲ್ಲಾಕೇಂದ್ರ ಕೊಪ್ಪಳವೂ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ತ್ಯಾಗ, ಬಲಿದಾನ ಮತ್ತು ಭಾವೈಕ್ಯದ ಹಬ್ಬವಾದ ಬಕ್ರೀದ್ ಸಡಗರ ಕಂಡುಬಂದಿತು. ಮುಸ್ಲಿಂ ಸಮಾಜದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರು, ಧರ್ಮದವರು ಸೇರಿಕೊಂಡು ಮುಸ್ಲಿಮರಿಗೆ ಶುಭ ಕೋರಿದರು. ಇಲ್ಲಿನ ಹಳೆ ಜಿಲ್ಲಾಸ್ಪತ್ರೆ ಪಕ್ಕದ ಈದ್ಗಾ ಮೈದಾನದಲ್ಲಿ ಮುಫ್ತಿ ಆಫೀಜ್ ಇಸಾಕ್ ಖಾಜಿ ನೇತೃತ್ವದಲ್ಲಿ ಮತ್ತು ಹುಲಿಕೆರೆ ಪಕ್ಕದ ಈದ್ಗಾ ಮೈದಾನದಲ್ಲಿ ಮುಫ್ತಿ ನಜೀರ ಅಹ್ಮದ ಖಾದ್ರಿ ತಸ್ಕನಿ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಅಪ್ಪಿಕೊಳ್ಳುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಮಹಿಳೆಯರು ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು.
ಹುಲಿಕೆರೆ ಪಕ್ಕದ ಈದ್ಗಾ ಮೈದಾನದಲ್ಲಿ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಗವಿಸಿದ್ಧೇಶ್ವರ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜಶೇಖರ ಅಡೂರು, ಮುಸ್ಲಿಂ ಸಮಾಜದ ಅಧ್ಯಕ್ಷ ಬಾಷುಸಾಬ್ ಖತೀಬ್, ಜಾಫರ ಖಾನಸಾಬ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್ ಸೇರಿದಂತೆ ಅನೇಕರು ಹಬ್ಬದ ಸಡಗರದಲ್ಲಿ ಭಾಗಿಯಾದರು.
ಈದ್ಗಾ ಮೈದಾನದಲ್ಲಿ ಸಂಸದ ಕೆ.ರಾಜಶೇಖರ ಹಿಟ್ನಾಳ್, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಮುಖಂಡರಾದ ಅಮರೇಶ ಕರಡಿ, ಪ್ರಸನ್ನ ಗಡಾದ, ಬಸವರಾಜ ಭೋವಿ, ಉದ್ಯಮಿ ಕೆ.ಎಂ.ಸೈಯ್ಯದ್, ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್, ಮುತ್ತುರಾಜ ಕುಷ್ಟಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ನೂತನ ಸಂಸದರಾಗಿ ಇತ್ತೀಚೆಗಷ್ಟೇ ಆಯ್ಕೆಯಾದ ಕೆ. ರಾಜಶೇಖರ ಹಿಟ್ನಾಳ ಹಾಗೂ ರಾಘವೇಂದ್ರ ಅವರನ್ನು ಮುಸ್ಲಿಂ ಸಮುದಾಯದ ಮುಖಂಡರು ಸನ್ಮಾನಿಸಿದರು. ಹೊಸ ಬಟ್ಟೆ, ಟೊಪ್ಪಿಗೆ ತೊಟ್ಟು ಮಕ್ಕಳು ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.