ಕೊಪ್ಪಳ: ‘ಆಧುನಿಕ ಯುಗದಲ್ಲಿ ತಂತ್ರಜ್ಞಾನ ವೇಗದಲ್ಲಿದೆ. ತಂತ್ರಜ್ಞಾನದ ಬಳಕೆಯು ಕೂಡ ಅಷ್ಟೇ ಹೆಚ್ಚಾಗಿದ್ದು, ಬಳಕೆಯ ಜೊತೆಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು’ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಹೇಳಿದರು.
ನಗರದಲ್ಲಿ ಬಹುತ್ವ ಬಳಗದ ವತಿಯಿಂದ ವಿವಿಧ ಕಾಲೇಜುಗಳ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗಗಳ ಸಹಯೋಗದಲ್ಲಿ ನಡೆದ ಕೊಪಣ ಮೀಡಿಯಾ ಫೆಸ್ಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿಯುಳ್ಳರಿಗೆ ಭಾಷಾ ಪ್ರಾವೀಣ್ಯತೆ, ಭಾಷೆಯ ಹಿಡಿತ, ಉತ್ತಮ ಜ್ಞಾನ ಮುಖ್ಯವಾಗಿದೆ’ ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ, ‘ಮಾಧ್ಯಮ ಹಾಗೂ ಮಾಧ್ಯಮಗಳ ಶಿಕ್ಷಣವು ಸೇತುವೆಯಾಗಬೇಕು. ಮಾಧ್ಯಮ ಅಕಾಡೆಮಿಯನ್ನು ಉತ್ತುಂಗಕ್ಕೆ ಬೆಳೆಸುವ ಕೆಲಸ ಮಾಡುವೆ. ವಿದ್ಯಾರ್ಥಿಗಳು ಮಾಧ್ಯಮ ಅಕಾಡೆಮಿಯ ಕುರಿತು ತಿಳಿದುಕೊಳ್ಳಬೇಕು’ ಎಂದರು.
ಪತ್ರಕರ್ತ ಜಿ.ಎನ್.ಮೋಹನ್ ಮಾತನಾಡಿ, ‘ತರಗತಿಯಲ್ಲಿ ಕೇಳಿದ ಮಾಧ್ಯಮ ಶಿಕ್ಷಣ ಹಾಗೂ ಮಾಧ್ಯಮಗಳ ಪ್ರಾಯೋಗಿಕ ಕಲಿಕೆಗೆ ಬಹಳ ವ್ಯತ್ಯಾಸವಿದೆ. ಮಾಧ್ಯಮ ಎಂದರೇ ಪ್ರಶ್ನೆ ಕೇಳುವ ಪ್ರೇರೆಪಿಸುವ ಉದ್ಯಮವಾಗಿದೆ. ಪ್ರಸ್ತುತ ದಿನಗಳಲ್ಲಿ ಪ್ರಶ್ನೆ ಕೇಳುವುದೇ ಅಪರಾಧ ಎಂಬ ಸ್ಥಿತಿ ಉಂಟಾಗಿದೆ’ ಎಂದರು.
ಬಹುತ್ವ ಬಳಗದ ರಾಜಾಭಕ್ಷಿ ಒಂಟಿ ಅಧ್ಯಕ್ಷತೆ ವಹಿಸಿದ್ದರು. ರಾಜು.ಬಿ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ, ಗವಿಸಿದ್ದಪ್ಪ ಮುತ್ತಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೋಟ್ರೇಶ ಮರಬನಾಳ, ವಾರ್ತಾ ಇಲಾಖೆಯ ಅಧಿಕಾರಿ ಗವಿಸಿದ್ಧಪ್ಪ ಹೊಸಮನಿ, ಪತ್ರಕರ್ತರಾದ ಸಿರಾಜ್ ಬಿಸರಳ್ಳಿ, ಮಂಜುನಾಥ ಜಿ. ಗೊಂಡಬಾಳ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.