ADVERTISEMENT

ಮಾಂಸ ಮಾರುಕಟ್ಟೆಗೆ ಸೌಲಭ್ಯ ಒದಗಿಸಲು ಬದ್ದ: ಮುಖ್ಯಾಧಿಕಾರಿ ಸುರೇಶ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 6:32 IST
Last Updated 21 ಜನವರಿ 2024, 6:32 IST
ಕಾರಟಗಿಯ ಗ್ರಾಮೀಣ ಸಂತೆ ಮೈದಾನದ ಆವರಣದಲ್ಲಿರುವ ಮಾಂಸ ಮಾರಾಟದ ಮಾರುಕಟ್ಟೆಗೆ ಪುರಸಭೆ ಮುಖ್ಯಾಧಿಕಾರಿ ಸುರೇಶ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು
ಕಾರಟಗಿಯ ಗ್ರಾಮೀಣ ಸಂತೆ ಮೈದಾನದ ಆವರಣದಲ್ಲಿರುವ ಮಾಂಸ ಮಾರಾಟದ ಮಾರುಕಟ್ಟೆಗೆ ಪುರಸಭೆ ಮುಖ್ಯಾಧಿಕಾರಿ ಸುರೇಶ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು   

ಕಾರಟಗಿ: ಪಟ್ಟಣದಲ್ಲಿ ಎಲ್ಲೆಂದರಲ್ಲಿ ಮಾಂಸ ಮಾರಾಟದ ಅಂಗಡಿ ನಡೆಸುವುದಕ್ಕೆ ಅವಕಾಶವಿಲ್ಲ. ಗ್ರಾಮೀಣ ಸಂತೆ ಮೈದಾನದಲ್ಲಿ ಮಾಂಸ ಮಾರಾಟಕ್ಕೆ ಪ್ರತ್ಯೇಕ ಮಳಿಗೆಗಳ ವ್ಯವಸ್ಥೆ ಇದ್ದು, ಎಲ್ಲರೂ ಇದೇ ಜಾಗದಲ್ಲಿ ಮಾತ್ರ ಮಾಂಸ ಮಾರಾಟ ಮಾಡಬೇಕು. ಮಾರುಕಟ್ಟೆಯಲ್ಲಿ ಅವಶ್ಯವಿರುವ ಸೌಲಭ್ಯಗಳನ್ನು ದೊರಕಿಸಲು ಬದ್ದ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ ಹೇಳಿದರು.

ಶುಕ್ರವಾರ ಗ್ರಾಮೀಣ ಸಂತೆ ಮೈದಾನ ಹಾಗೂ ಮಾಂಸ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿ, ಮಾರುಕಟ್ಟೆಯಲ್ಲಿರುವ ಮಾಂಸ ಮಾರಾಟ ಮಾಡುವ ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸಿದ ಬಳಿಕ ಮಾತನಾಡಿದರು.

ಮಾರುಕಟ್ಟೆಯಲ್ಲಿ ಸೌಕರ್ಯಗಳಿಲ್ಲ ಎಂಬ ನೆಪ ಹೇಳಿ ಎಲ್ಲೆಡೆ ಅನಧಿಕೃತವಾಗಿ ಚಿಕನ್ ಅಂಗಡಿಗಳನ್ನು ತೆರೆದು ಮಾರಾಟ ಮಾಡುವಂತಿಲ್ಲ. ಈಗಾಗಲೇ ಅಂಥವರಿಗೆ ನೋಟೀಸ್ ನೀಡಿ, ಸಮಯಾವಕಾಶ ನೀಡಲಾಗಿದೆ. ಅವರು ನಮ್ಮ ಷರತ್ತನ್ನು ಪಾಲಿಸಬೇಕು ಎಂದು ತಿಳಿಸಿದರು.

ADVERTISEMENT

ಮಾರುಕಟ್ಟೆಯ ಬಳಿ ಸ್ವಚ್ಛತೆ ಇರದ ಬಗ್ಗೆ ವ್ಯಾಪಾರಿಗಳು ಗಮನ ಸೆಳೆದರಲ್ಲದೇ, ಇನ್ನಿತರ ಸೌಕರ್ಯ ಒದಗಿಸಲು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸುರೇಶ, ಚರಂಡಿ ನೀರು ನಿಲುಗಡೆ ಆಗುತ್ತಿರುವ ಪರಿಣಾಮ ಸ್ವಚ್ಛತೆಯ ಸಮಸ್ಯೆಯಾಗಿದೆ. ಸಮಸ್ಯೆಗೆ ಪರಿಹಾರವಾಗಿ ಈಗಾಗಲೇ ಕ್ರಿಯಾಯೋಜನೆ ಸಿದ್ದವಾಗಿದ್ದು, ₹ 10ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಸುತ್ತಲಿನ ತ್ಯಾಜ್ಯ ವಿಲೇವಾರಿ, ಮಾರುಕಟ್ಟೆ ಸುತ್ತ ಆವರಣಗೋಡೆ ನಿರ್ಮಾಣ, ವಿದ್ಯುತ್, ನೀರು ಸಹಿತ ಇತರ ಸೌಕರ್ಯಗಳನ್ನು ದೊರಕಿಸುವುದಾಗಿ ಹೇಳಿದರು.

ಪುರಸಭೆ ಸದಸ್ಯ ಆನಂದ ಮ್ಯಾಗಳಮನಿ ಮುಖಂಡರಾದ ಬಸವರಾಜ ಎತ್ತಿನಮನಿ, ಧನಂಜಯ ಎಲಿಗಾರ, ಎಂಜಿನಿಯರ್ ಮಂಜುನಾಥ ನಾಯಕ, ಆರೋಗ್ಯ ನಿರೀಕ್ಷಕಿ ಅಕ್ಷತಾ, ಚಿಕನ್ ಮಾರಾಟಗಾರರಾದ ಹೊನ್ನೂರಸಾಬ, ಜಾವೇದ ಖುರೇಶಿ, ಸಮದಾನಿ, ರಾಜಾಹುಸೇನ್, ಮಕ್ಬೂಲ್‌ಸಾಬ, ಗಫೂರ್, ಜಿಲಾನಿಪಾಶಾ, ಹುಸೇನಸಾಬ, ಮೌಲಾಸಾಬ, ಖಾದರಸಾಬ, ನಬಿಸಾಬ, ಶರ್ಮ ಅಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.