ಕೊಪ್ಪಳ: ಒಳಮೀಸಲಾತಿ ವಿಚಾರದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಸಚಿವ ಸಂಪುಟದಲ್ಲಿ ಹಾಗೂ ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲ್ಲೂಕಿನ ಗಿಣಗೇರಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹಿಂದುಳಿದ ವರ್ಗಗಳ ಆಯೋಗದ ವರದಿ ನವೆಂಬರ್ 1ರಂದು ಅನುಷ್ಠಾನಕ್ಕೆ ತರಬೇಕು ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಜಾತಿ ಗಣತಿ ವರದಿ ಸ್ವೀಕಾರ ಮಾಡಿದ್ದೇವೆ. ಜಾರಿ ಕುರಿತು ಚರ್ಚಿಸಲಾಗಿದೆ. ಮೊದಲು ಸಚಿವ ಸಂಪುಟದಲ್ಲಿ ಚರ್ಚಿಸಿ ಸದನದಲ್ಲೂ ಮಂಡಿಸಲಾಗುವುದು. ಬಳಿಕ ಅಂತಿಮ ನಿರ್ಣಯ ತೆಗೆದುಕೊಳ್ಳುತ್ತೇವೆ. ಈ ಕುರಿತು ಹಿಂದುಳಿದ ವರ್ಗಗಳ ಇಲಾಖೆ ಸಚಿವರ ಬಳಿ ಚರ್ಚಿಸುವೆ ಎಂದರು.
ಬಿಜೆಪಿ–ಜೆಡಿಎಸ್ ನಾಯಕರಿಗೆ ನಾನು ಅಧಿಕಾರದಲ್ಲಿರುವುದು ಇಷ್ಟವಿಲ್ಲ. ನಾನು ಅಧಿಕಾರದಲ್ಲಿ ಇದ್ದರೆ ದುರ್ಬಲರಾಗುತ್ತೇವೆ ಎನ್ನುವ ಆತಂಕ ಅವರಲ್ಲಿದೆ. ಜಿ.ಟಿ.ದೇವೆಗೌಡ ಯಾವ ಪಕ್ಷದವರು? ಅವರು ಹೇಳಿದ್ದು ಸರಿಯಾಗಿದೆ. ಪ್ರತಿ ವರ್ಷ ದಸರಾ ಕಾರ್ಯಕ್ರಮ ನಡೆಯುತ್ತದೆ. ಮುಂದಿನ ವರ್ಷವೂ ನಾನೇ ಬರುತ್ತೇನೆ. ಅಭಿವೃದ್ಧಿಗೆ ಆಶೀರ್ವಾದ ಮಾಡಲಿ ಎಂದು ಹೇಳಿರುವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.