ಗಂಗಾವತಿ: ತುಂಗಭದ್ರಾ ಜಲಾಶಯಕ್ಕೆ ಒಂದು ವಾರದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಬುಧವಾರ ಸಂಜೆ ಹತ್ತು ಕ್ರಸ್ಟರ್ ಗೇಟ್ಗಳ ಮೂಲಕ ತುಂಗಾಭದ್ರ ಜಲಾಶಯದಿಂದ ನದಿಗೆ ಹೆಚ್ಚುವರಿಯಾಗಿ ಇಪ್ಪತ್ತೈದು ಸಾವಿರ ಕ್ಯುಸೆಕ್ ನೀರು ಹರಿಬಿಡಲಾಗಿದೆ.
2-3 ದಿನಗಳ ಹಿಂದೆ 3 ಕ್ರಸ್ಟರ್ ಗೇಟ್ಗಳ ಮೂಲಕ 11 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಬಿಟ್ಟು, ನದಿಪಾತ್ರದ ಜನರಿಗೆ, ಮೀನುಗಾರರಿಗೆ, ಹರಿಗೋಲು ಸವಾರರಿಗೆ ಎಚ್ಚರಿಕೆ ಸಂದೇಶ ನೀಡಲಾಗಿತ್ತು. ತುಂಗಾಭದ್ರ ಜಲಾಶಯಕ್ಕೆ ಒಳಹರಿವು ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ ನದಿಗೆ ಕಡಿಮೆ ಪ್ರಮಾಣದ ನೀರು ಹರಿಬಿಡಲಾಗಿತ್ತು.
ಇದೀಗ ಜಲಾಶಯದಲ್ಲಿ 96 ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗಿ, ಒಳಹರಿವು ಹೆಚ್ಚಿರುವ ಕಾರಣ ನದಿಗೆ ನೀರು ಹರಿಸಲಾಗಿದೆ. ನೀರು ಹರಿಸುವ ಕುರಿತು ಮಧ್ಯಾಹ್ನವೇ ತಿಳಿಸಲಾಗಿದೆ.
ಹಾಗಾಗಿ ಸಾಣಾಪುರ, ಹನುಮನಹಳ್ಳಿ, ಆನೆಗೊಂದಿ, ಗೂಗಿಬಂಡಿ, ದೇವಘಾಟ್, ಲಕ್ಷ್ಮೀಪುರ, ನಾಗನಳ್ಳಿ, ಚಿಕ್ಕಂಜಂಕಲ್, ಅಯೋಧ್ಯೆ, ಮುಸ್ಟೂರು, ಢಣಾಪುರ, ಹೆಬ್ಬಾಳ ಭಾಗಕ್ಕೆ ನೀರು ನುಗ್ಗುವ ಸಂಭವ ಇದ್ದು, ಯುವಕರು ಸೆಲ್ಫಿಗಾಗಿ ಹಾಗೂ ರೈತರು ನದಿಪಾತ್ರದ ಜಮೀನುಗಳ ಬಳಿಗೆ ತೆರಳಬಾರದು ಎಂದು ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.