ADVERTISEMENT

‘ಮಕ್ಕಳ ಭವಿಷ್ಯ ಕಮರಿಸದಿರಿ’

ಬಾಲಕಾರ್ಮಿಕ ವಿರೋಧಿ ದಿನ, ನ್ಯಾಯಾಧೀಶ ಪೂಜೇರಿ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 6:51 IST
Last Updated 13 ಜೂನ್ 2024, 6:51 IST
ಕುಷ್ಟಗಿಯಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ನ್ಯಾಯಾಧೀಶ ಎಂ.ಎಲ್‌.ಪೂಜೇರಿ ಉದ್ಘಾಟಿಸಿದರು. ನ್ಯಾಯಾಧೀಶ ಮಹಾಂತೇಶ ಚೌಳಗಿ ಇತರರು ಇದ್ದರು
ಕುಷ್ಟಗಿಯಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ನ್ಯಾಯಾಧೀಶ ಎಂ.ಎಲ್‌.ಪೂಜೇರಿ ಉದ್ಘಾಟಿಸಿದರು. ನ್ಯಾಯಾಧೀಶ ಮಹಾಂತೇಶ ಚೌಳಗಿ ಇತರರು ಇದ್ದರು   

ಕುಷ್ಟಗಿ: ದುಡಿಮೆಗೆ ಕಳಿಸಿ ಮಕ್ಕಳ ಭವಿಷ್ಯ ಹಾಳು ಮಾಡದಿರಿ ಎಂದು ಇಲ್ಲಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶ ಎಂ.ಎಲ್‌.ಪೂಜೇರಿ ಹೇಳಿದರು.

ಸರ್ಕಾರಿ ಪದವಿ ಕಾಲೇಜಿನಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ನಿಮಿತ್ತ ಕಾನೂನು ಸೇವಾ ಸಮಿತಿ, ವಕೀಲರ ಸಂಘದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕುರಿ ಕಾಯುವುದು, ಇಟ್ಟಿಗೆ ಭಟ್ಟಿಗಳಲ್ಲಿ ಮಕ್ಕಳನ್ನು ಕಡಿಮೆ ಕೂಲಿಗೆ ದುಡಿಸಿಕೊಳ್ಳುವ ಪ್ರವೃತ್ತಿ ಅನೇಕ ಜನರಲ್ಲಿ ಕಾಣುತ್ತಿದ್ದು ಇದು ಸಾಮಾಜಿಕ ವ್ಯವಸ್ಥೆಗೆ ಕಳಂಕ ತರುವ ಪದ್ಧತಿಯಾಗಿದೆ ಎಂದರು.

ಮಕ್ಕಳಿಗೆ ಉತ್ತಮ ವಿದ್ಯೆ ದೊರೆತರೆ ಭವಿಷ್ಯದಲ್ಲಿ ಅವರು ಯಾವುದೇ ಉನ್ನತ ಸ್ಥಾನದಲ್ಲಿದ್ದು ದೇಶಕ್ಕೆ ಸೇವೆ ಸಲ್ಲಿಸಲು ಸಾಧ್ಯ. ಹಾಗಾಗಿ ಬಾಲ್ಯದಲ್ಲೇ ಅವರ ಬದುಕನ್ನು ಕಮರಿಸುವ ಕೆಲಸ ಮಾಡಬಾರದು. ಎಲ್ಲಿಯೇ ಆದರೂ ಬಾಲ ಕಾರ್ಮಿಕರು ಕಂಡುಬಂದರೆ ಅದನ್ನು ವಿರೋಧಿಸುವುದು ನಾಗರಿಕ ಸಮಾಜದ ಕರ್ತವ್ಯವೂ ಹೌದು ಎಂದರು.

ADVERTISEMENT

ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಮಹಾಂತೇಶ ಚೌಳಗಿ, ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್‌ ರವಿ.ಎಸ್‌.ಅಂಗಡಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ವಿಜಯಮಹಾಂತೇಶ ಕುಷ್ಟಗಿ ಇತರರು ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಸುವರ್ಣ, ಪದವಿ ಕಾಲೇಜಿನ ಉಪನ್ಯಾಸಕ ರವಿ, ವಕೀಲರ ಸಂಘದ ಕಾರ್ಯದರ್ಶಿ ಬಸವರಾಜ ಲಿಂಗಸಗೂರು ಇತರರು ಇದ್ದರು.

ಇದೇ ಸಂದರ್ಭದಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ನಿಮಿತ್ತ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಿದ್ಯಾರ್ಥಿಗಳು, ಕಾಲೇಜು ಹಾಗೂ ನ್ಯಾಯಾಲಯದ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಲ್ಲೂಕು ಪಂಚಾಯಿತಿಯಲ್ಲಿಯೂ ಬಾಲ ಕಾರ್ಮಿಕ ವಿರೋಧ ದಿನಾಚರಣೆ ಆಚರಿಸಲಾಯಿತು. ಕಾರ್ಯನಿರ್ವಹಣಾಧಿಕಾರಿ ನಿಂಗಪ್ಪ ಮಸಳಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.