ಅಳವಂಡಿ: ‘ದಾಂಪತ್ಯ ಜೀವನ ಅನ್ಯೋನ್ಯವಾಗಿ ನಡೆಯಬೇಕಾದರೆ ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಅವಶ್ಯವಾಗಿದೆ. ಸಾಮೂಹಿಕ ಮದುವೆಗಳು ಅವಶ್ಯಕ. ದುಂದು ವೆಚ್ಚಕ್ಕೆ ಕಡಿವಾಣ ಹಾಕುವದಲ್ಲದೇ ನೆಮ್ಮದಿಯ ಜೀವನಕ್ಕೆ ನಾಂದಿಯಾಗುತ್ತದೆ’ ಎಂದು ಮೈನಹಳ್ಳಿ-ಬಿಕನಳ್ಳಿಯ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಕವಲೂರು ಗ್ರಾಮದಲ್ಲಿ ದುರ್ಗಾದೇವಿ ಹಾಗೂ ಪಾರ್ವತಿ ಪರಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ನಂತರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 8 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
‘ದಾಂಪತ್ಯ ಜೀವನವನ್ನು ಅನೋನ್ಯವಾಗಿ ಹಾಗೂ ಮಾದರಿಯಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಂಸಾರವೆಂಬ ಬಂಡಿಯನ್ನು ಸರಾಗವಾಗಿ ನಡೆಸಿಕೊಂಡು ಹೋಗಬೇಕು, ಸಂಸಾರ ನಡೆಸುವಲ್ಲಿ ನಂಬಿಕೆ, ಸಮಾಧಾನ ಗುಣವನ್ನು ಅಳವಡಿಸಿಕೊಳ್ಳಬೇಕು’ ಎಂದರು.
ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ‘ಸಾಮೂಹಿಕ ಮದುವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಸರ್ವರಲ್ಲಿ ಸಮಾನತೆ ಹಾಗೂ ಒಗ್ಗಟ್ಟು ಬೆಳೆಯಲಿದೆ. ದುಡಿಮೆ ಜೀವನದ ಪ್ರಮುಖ ಕಾರ್ಯ ಆಗಬೇಕು. ದುಡಿದು ಜೀವನ ನಡೆಸಿದರೆ ಸಮಾಧಾನ ಲಭಿಸಲಿದೆ. ಯುವಕರು ದುಶ್ಚಟಗಳಿಗೆ ದಾಸರಾಗಬೇಡಿ. ಮೊಬೈಲ್, ಟಿವಿ ಕಾರ್ಯಕ್ರಮಗಳಲ್ಲಿ ಕಾಲಹರಣ ಮಾಡದೆ ನಿರ್ದಿಷ್ಟ ಗುರಿ ತಲುಪುವತ್ತ ಚಿತ್ತ ಹರಿಸಿ ಹಾಗೂ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜನರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಿ. ಎಲ್ಲರೂ ಒಂದಾಗಿ ಇಂತಹ ಕಾರ್ಯಕ್ರಮಗಳನ್ನು ಆಚರಿಸುವದರಿಂದ ಪ್ರಗತಿ ಸಾಧ್ಯ’ ಎಂದರು.
ಪ್ರಮುಖರಾದ ತಿಮ್ಮಣ್ಣ ಸಿದ್ನೆಕೊಪ್ಪ, ಮಹಾಂತೇಶ ಸಿಂದೋಗಿ, ಹೊನಕೇರಪ್ಪ ಮುಕ್ಕಣ್ಣವರ, ಮುತ್ತಣ್ಣ ಬಿಸರಳ್ಳಿ, ಅಪ್ಪಣ್ಣ ಭಾವಿಮನಿ, ಲಕ್ಷ್ಮಣ ಸಿದ್ನೆಕೊಪ್ಪ, ಯಂಕಪ್ಪ ಹಿಟ್ನಾಳ, ಯಂಕಪ್ಪ ಹಳ್ಳಿ, ಶರಣಪ್ಪ ಯರಾಶಿ, ರವಿ ಉಪ್ಪಾರ, ಶೇಖರಯ್ಯ, ಗವಿಸಿದ್ದಯ್ಯ ಹುಲಿಕಂತಿಮಠ, ರೇವಣಸಿದ್ದಯ್ಯ, ಪಂಚಯ್ಯ, ನಿಂಗಪ್ಪ, ಸಿದ್ದಪ್ಪ ಗಿಣಿಗೇರ, ಬಸವರಾಜ ಹಕ್ಕಂಡಿ, ಶರಣಪ್ಪ ಸಿದ್ನೆಕೊಪ್ಪ, ಕರಿಯಪ್ಪ ಎಮ್ಮಿ, ರಾಮಣ್ಣ ಗುಡಿಹಿಂದಲ, ರಮೇಶ ಹಂದ್ರಾಳ, ಹನುಮಂತ ಹೊಸಮನಿ ಹಾಗೂ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.