ಕೊಪ್ಪಳ: ನಗರದಲ್ಲಿ ಭಾನುವಾರ ಗ್ರಾಮ ಆಡಳಿತಾಧಿಕಾರಿ ಹುದ್ದೆ ನೇಮಕಾತಿಗಾಗಿ ನಡೆದ ಪರೀಕ್ಷೆಯಲ್ಲಿ ಪೂರ್ಣ ತೋಳಿನ ಅಂಗಿ ಧರಿಸಿ ಬಂದಿದ್ದ ಅಭ್ಯರ್ಥಿಗಳು ಅರ್ಧಕ್ಕೆ ಕತ್ತರಿಸಿ ಹೊರಗಿಟ್ಟು ಪರೀಕ್ಷೆ ಬರೆಯಬೇಕಾಯಿತು.
ಪೂರ್ಣ ತೋಳಿನ ಅಂಗಿ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬಂದವರಿಗೆ ಭದ್ರತಾ ಸಿಬ್ಬಂದಿ ಕೊಠಡಿಯೊಳಗೆ ಬಿಡಲು ನಿರಾಕರಿಸಿದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶನದಂತೆ ಅವರು ಕ್ರಮ ಕೈಗೊಂಡಿದ್ದರಿಂದ ಅಭ್ಯರ್ಥಿಗಳು ಸ್ನೇಹಿತರು, ಪರೀಕ್ಷಾ ಕೇಂದ್ರದ ಸಿಬ್ಬಂದಿಯ ನೆರವು ಪಡೆದು ಪೂರ್ಣ ತೋಳಿನ ಅರ್ಧ ಭಾಗ ಕತ್ತರಿಸಿ ಪರೀಕ್ಷೆಗೆ ಹಾಜರಾದರು.
ಅಭ್ಯರ್ಥಿಗಳು ತುಂಬು ತೋಳಿನ ಶರ್ಟ್ ಹಾಗೂ ಜೀನ್ಸ್ ಧರಿಸಿ ಪರೀಕ್ಷೆಗೆ ಹಾಜರಾಗಬಾರದು. ಈ ಬಗ್ಗೆ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ವಸ್ತ್ರಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಪಾಲಿಸದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ ಎಂದು ಪ್ರವೇಶ ಪತ್ರದಲ್ಲಿಯೇ ಸೂಚನೆ ನೀಡಿದ್ದರೂ ಕೆಲ ಅಭ್ಯರ್ಥಿಗಳು ನಿರ್ಲಕ್ಷ್ಯ ತೋರಿದರು. ಪರೀಕ್ಷೆ ಮುಗಿದ ಬಳಿಕ ಪರೀಕ್ಷಾ ಕೇಂದ್ರದ ಸ್ವಚ್ಛತಾ ಸಿಬ್ಬಂದಿಯೇ ತೋಳುಗಳ ರಾಶಿಯನ್ನು ಕಸದ ಬುಟ್ಟಿಯಲ್ಲಿ ಎಸೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.