ಕೊಪ್ಪಳ: ಸುತ್ತಮುತ್ತಲೂ ಮರಗಳು ಇರುವ ಇಲ್ಲಿನ ಗವಿಮಠದ ಆವರಣದ ತಂಪಿನಲ್ಲಿ ಭಾನುವಾರ ಸಂಭ್ರಮ ಮನೆಮಾಡಿತ್ತು. ನೋವುಗಳನ್ನೇ ನುಂಗಿ ನಿತ್ಯ ಸವಾಲುಗಳನ್ನು ಎದುರಿಸಿದ್ದ ಅಂಗವಿಕಲರ ಬದುಕಿನಲ್ಲಿ ‘ಕಲ್ಯಾಣ’ದ ಸಡಗರ ಕಂಡುಬಂತು.
ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಮಠದ ವತಿಯಿಂದ ಮೊದಲ ಬಾರಿಗೆ ಅಂಗವಿಕಲರ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೊಪ್ಪಳ, ಧಾರವಾಡ, ಹಾವೇರಿ, ವಿಜಯನಗರ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಂದ ಬಂದಿದ್ದ ವಧು–ವರರು ಇಲ್ಲಿ ಸತಿ ಪತಿಗಳಾದರು.
‘ಜೀವನ ಸಂಗಾತಿ ಜೊತೆಗೆ ಜೀವನೋಪಾಯ’ ಎಂಬ ಘೋಷವಾಕ್ಯದಡಿ ಆಯೋಜಿಸಿದ್ದ ವಿವಾಹ ಕಾರ್ಯಕ್ರಮದಲ್ಲಿ ನವದಂಪತಿಗೆ ಬೆಂಗಳೂರಿನ ಸೆಲ್ಕೊ ಫೌಂಡೇಷನ್ ನೆರವಿನೊಂದಿಗೆ ಎಲ್ಲರಿಗೂ 64 ಚದರ ಅಡಿ ಅಳತೆ ಹೊಂದಿರುವ ಸೋಲಾರ್ ವ್ಯವಸ್ಥೆಯುಳ್ಳ ಅಂಗಡಿಗಳನ್ನು ವ್ಯಾಪಾರ ಮಾಡಿ ಬದುಕು ಕಟ್ಟಿಕೊಳ್ಳಲು ಉಡುಗೊರೆಯಾಗಿ ನೀಡಲಾಯಿತು.
ಇಲ್ಲಿ ಮದುವೆಯಾದವರು ವಾಸಿಸುವ ಊರುಗಳಿಗೆ ತೆರಳಿ ಅಲ್ಲಿನ ಜಿಲ್ಲಾಡಳಿತದಿಂದ ಅವರಿಗೆ ಅಂಗಡಿಗಳನ್ನು ತೆರೆಯಲು ಜಾಗದ ವ್ಯವಸ್ಥೆ ಕಲ್ಪಿಸಿಕೊಡುವ ಕೆಲಸವನ್ನು ಸೆಲ್ಕೊ ಮಾಡಲಿದೆ. ಈ ಮೂಲಕ ಅಂಗವಿಕಲರ ಸ್ವಾವಲಂಬಿ ಬದುಕಿಗೆ ಗವಿಮಠ ಮತ್ತು ಸೆಲ್ಕೊ ಫೌಂಡೇಷನ್ ನೆರವಾಗುತ್ತಿವೆ.
ಈ ವೇಳೆ ಮಾತನಾಡಿದ ಗವಿಸಿದ್ಧೇಶ್ವರ ಸ್ವಾಮೀಜಿ, ‘ಪ್ರತಿ ವರ್ಷ ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಜಾತ್ರೆಯ ಕಾರ್ಯಕ್ರಮ ಆರಂಭಿಸಲಾಗುತ್ತಿತ್ತು. ಈ ಬಾರಿ ಮಹಿಳೆಗೆ ಮುತ್ತೈದೆ ಭಾಗ್ಯದ ಜೊತೆಗೆ ಸ್ವಾವಲಂಬಿ ಬದುಕು ಕಲ್ಪಿಸುವ ಕಾರ್ಯದ ಮೂಲಕ ಜಾತ್ರೆ ಆರಂಭಿಸುತ್ತಿದ್ದೇವೆ. ಇದು ಭಗವಂತನ ಮಕ್ಕಳ ಮದುವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.