ಅಳವಂಡಿ: ‘ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ನೀರಿಗೆ ಹಾಹಾಕಾರ ಉಂಟಾಗಿದೆ. ಮನುಷ್ಯರು ಮಾತ್ರವಲ್ಲ; ಪ್ರಾಣಿ-ಪಕ್ಷಿಗಳು ಕೂಡ ಜೀವಜಲಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ಪ್ರಾಣಿ–ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಪ್ರತಿಯೊಬ್ಬರೂ ಮುಂದಾಗಬೇಕು’ ಎಂದು ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.
ಗ್ರಾಮದ ಸಿದ್ದೇಶ್ವರ ಮಠ ಹಾಗೂ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಮಹಿಳಾ ಧ್ವನಿ ಸಂಸ್ಥೆಯಿಂದ ಪ್ಲಾಸ್ಟಿಕ್ ಬುಟ್ಟಿಗಳನ್ನು ಗಿಡಮರಕ್ಕೆ ಕಟ್ಟಿ ನೀರು ಹಾಕುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಬಿಸಿಲಿನ ತಾಪಕ್ಕೆ ಪ್ರಾಣಿ ಪಕ್ಷಿಗಳು ಬಾಯಾರಿ ಕುಡಿಯುವ ನೀರು ಹುಡುಕಿಕೊಂಡು ಅಲೆದಾಡುವುದು ಸಹಜ. ಹಾಗಾಗಿ ಸಾರ್ವಜನಿಕರು, ಸಂಘ–ಸಂಸ್ಥೆಗಳು ತಮ್ಮ ಮನೆಯ ಮುಂದಿನ ಗಿಡಮರಗಳಿಗೆ, ಮನೆಯ ಕಾಂಪೌಂಡ್ ಮೇಲೆ ನೀರಿನ ತೊಟ್ಟಿಯನ್ನು ಇಟ್ಟು ಪ್ರಾಣಿ ಪಕ್ಷಿಗಳ ನೀರಿನ ದಾಹ ನೀಗಿಸಲು ಮುಂದಾಗಬೇಕು’ ಎಂದರು
ಮಹಿಳಾ ಧ್ವನಿ ಸಂಸ್ಥಾಪಕಿ ಪ್ರಿಯದರ್ಶಿನಿ ಮಾತನಾಡಿ, ‘ಜನರು ಸಹ ಬೇಸಿಗೆ ಬಿಸಿಲಿನ ತಾಪದಲ್ಲಿ ನೀರಿನ ಸಮಸ್ಯೆಯನ್ನು ಅನುಭವಿಸುತ್ತಿದ್ದು, ಮೂಕ ಪ್ರಾಣಿಗಳ ವೇದನೆ ಮಾತ್ರ ಹೇಳತಿರದಂತಾಗಿದೆ. ಹಾಗಾಗಿ ಸಂಸ್ಥೆಯ ವತಿಯಿಂದ ಪ್ರಾಣಿ ಪಕ್ಷಿಗಳಿಗೆ ಪ್ಲಾಸ್ಟಿಕ್ ಬುಟ್ಟಿಯನ್ನು ಕಟ್ಟುವ ಕಾರ್ಯ ಮಾಡುತ್ತಿದ್ದೇವೆ’ ಎಂದರು.
ಪ್ರಮುಖರಾದ ಬಿ.ಎನ್. ಹೊರಪೇಟಿ, ರಮೇಶ ಆವೋಜಿ, ನೀಲಪ್ಪ ಹಕ್ಕಂಡಿ, ಮಲ್ಲಮ್ಮ, ಗೀತಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.