ಗಂಗಾವತಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆರಂಭಿಕ ಬಾಲ್ಯದ ಆರೈಕೆ ಶಿಕ್ಷಣ (ಇಸಿಸಿಇ) ಆರಂಭಕ್ಕೆ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆ ವಾಪಸ್ ಪಡೆಯುವಂತೆ ಒತ್ತಾಯಿಸಿ ಜೂನ್ 3ರಂದು ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಅಂಗನವಾಡಿ ನೌಕರರು ಅಂಗನವಾಡಿ ಬಂದ್ ಮಾಡಿ ಗುಲಬರ್ಗಾ ಚಲೊ ಅಭಿಯಾನ ನಡೆಸಲಾಗುತ್ತದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಸಮಿತಿ ಅಧ್ಯಕ್ಷೆ ಎಸ್.ವರಲಕ್ಷ್ಮಿ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಷ್ಟ್ರೀಯ ಮಕ್ಕಳ ಶಿಕ್ಷಣ ನೀತಿಯ ಭಾಗವಾಗಿ ಲೀಗ್ ಆಫ್ ನೇಷನ್ ರಾಷ್ಟ್ರಗಳು ಯೂನಿಸೆಫ್ ಸಂಸ್ಥೆ ಮುಖಾಂತರ ಆರು ವರ್ಷದ ಮಕ್ಕಳು ದೇಶದ ಸಂಪತ್ತು, ಇದು ಸಮಾಜದ ಪುನರುತ್ಪಾದನೆ ಎಂದು ಅಭಿಪ್ರಾಯದ ಮೇರೆಗೆ ಭಾರತದಲ್ಲಿ ಐಸಿಡಿಎಸ್ ಯೋಜನೆ ಆರಂಭಿಸಲಾಗಿದೆ.ಇದರಿಂದ ಅಪೌಷ್ಟಿಕತೆ ನಿವಾರಣೆ, ಮರಣ ಪ್ರಮಾಣ ಕಡಿಮೆ, ಗರ್ಭಿಣಿ ಸ್ತ್ರಿಯರ ಆರೈಕೆಯಾಗಿ, ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಬೆಕೆಂಬ ಸ್ಪಷ್ಟತೆಯು ದೊರೆಯಿತು. ಆದರೆ ಇದೀಗ ಕಲಬುರಗಿ ಆಯುಕ್ತರು ಕಲ್ಯಾಣ ಕರ್ನಾಟಕದ ಭಾಗದ 8 ಜಿಲ್ಲೆಗಳಲ್ಲಿ ಇಸಿಸಿಇ ಆರಂಭಿಸಲು ಏಕಾಏಕಿ ಆದೇಶ ನೀಡಿದ್ದು, ಇದರಿಂದ ಈ ಜಿಲ್ಲೆಗಳ 39 ತಾಲ್ಲೂಕುಗಳಲ್ಲಿ 1,170 ಅಂಗನವಾಡಿ ಕೇಂದ್ರಗಳು ಮುಚ್ಚಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸರ್ಕಾರ ಮತ್ತು ಕಲಬುರಗಿ ಆಯುಕ್ತರು ಇಸಿಸಿಇ ಶಿಕ್ಷಣ ಪ್ರಾರಂಭಿಸಲು ಹೊರಡಿಸಿದ ಆದೇಶವನ್ನು ಹಿಂಪಡೆದು, ಐಸಿಡಿಎಸ್ ಆದೇಶವನ್ನು ಮುಂದುವರೆಸಬೇಕು. ಇಲ್ಲವಾದಲ್ಲಿ ಅಂಗನವಾಡಿ ನೌಕರರಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರಿಜಾ ದರೋಜಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.