ಗಂಗಾವತಿ: ಇಲ್ಲಿನ ಹಿರೇಬೆಣಕಲ್ ಸಮೀಪದ ಪ್ರಾಗೈತಿಹಾಸಿಕ ನೆಲೆಯಾದ ಮೊರೆರ ಬೆಟ್ಟಕ್ಕೆ ಭಾನುವಾರ ನಾಗಪುರದ ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯ ಪ್ರಾಗೈತಿಹಾಸಿಕ ಮತ್ತು ಗವಿಚಿತ್ರಗಳ ಅಧ್ಯಯನ ವಿಭಾಗದ ಅಧಿಕಾರಿಗಳ ತಂಡ ಭೇಟಿ ನೀಡಿತು.
ಪುರಾತತ್ತ್ವ ಅಧಿಕ್ಷಕ ರಮೇಶ ಮೂಲಿಮನಿ, ಸಿಬ್ಬಂದಿ ಡಾ. ಕಿಶೋರ್ ಸೋಲಾಪುರಕರ್, ಮಾನವೇಂದ್ರ, ಕಪೀಲ್ ಚುಟೋಲೆ, ಮುರುಳಿಧರರಾವ್ ಕಡಾವ್ ಅವರನ್ನು ಒಳಗೊಂಡ ತಂಡ ಸ್ಥಳೀಯ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ ಅವರ ಸಹಯೋಗದಲ್ಲಿ ಮೊರೆರ ಬೆಟ್ಟಕ್ಕೆ ಭೇಟಿ ನೀಡಿ, ಆ ನೆಲೆಯ ಸಮಾಧಿ, ಗವಿಚಿತ್ರಗಳ ಬಗ್ಗೆ ಅಧ್ಯಯನ ನಡೆಸಿದರು.
ನಂತರ ಪುರಾತತ್ತ್ವ ಅಧಿಕ್ಷಕ ರಮೇಶ ಮೂಲಿಮನಿ ಮಾತನಾಡಿ, ಹಿರೇಬೆಣಕಲ್ ನಮ್ಮ ದೇಶದ ಅತ್ಯಂತ ಮಹತ್ವ ಪ್ರಾಗೈತಿಹಾಸದ ನೆಲೆ. ಇಲ್ಲಿ ಆದಿಮಾನವನ ಜೀವನ, ಸಂಸ್ಕ್ರತಿ, ವಸತಿನೆಲೆ ಸೇರಿದಂತೆ ವಿವಿಧ ರೀತಿಯ ಸಮಾಧಿ, ಗವಿಚಿತ್ರಗಳನ್ನ ಒಳಗೊಂಡ ಮಹತ್ವದ ಪುರಾವೆಗಳ ತಾಣವಾಗಿದೆ.
ಇಲ್ಲಿರುವಷ್ಟು ವೈವಿಧ್ಯಮಯ ಶಿಲಾಸಮಾಧಿಗಳು ದೇಶದ ಬೇರಡೆ ಎಲ್ಲಿಯೂ ಇಲ್ಲ. ಇಂಥ ಇತಿಹಾಸವುಳ್ಳ ಸ್ಥಳ ಅವನತಿಯತ್ತ ಸಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇದರ ರಕ್ಷಣೆ ಮತ್ತು ಅಭಿವೃದ್ಧಿ ತುಂಬಾ ಅಗತ್ಯವಿದ್ದು, ಇದರ ವಸ್ತುಸ್ಥಿತಿ ಕುರಿತು ಇಲಾಖೆಗೆ ವರದಿ ಸಲ್ಲಿಸಿ ಈ ಸ್ಥಳವನ್ನು ಪ್ರವಾಸಿ ಕೇಂದ್ರವಾಗಿಸುವಂತೆ ಶ್ರಮಿಸಲಾಗುತ್ತದೆ ಎಂದರು.
ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ ಅವರು ಹಿರೇಬೆಣಕಲ್ ನೆಲೆಯ ಬಗ್ಗೆ ತಂಡಕ್ಕೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಮಂಜುನಾಥ ಗುಡ್ಲಾನೂರ, ಹಿರೇಬೆಣಕಲ್ ಗ್ರಾಮದ ವಿರೇಶ ಅಂಗಡಿ, ನೆಲೆಯ ರಕ್ಷಕರಾದ ಪಂಪಾಪತಿ, ವೀರಭದ್ರಪ್ಪ, ನಾಗರಾಜ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.